ಮೈಸೂರಿನ ತೆರೆದ ಚರಂಡಿಯಲ್ಲಿಆಳುಗಾತ್ರದ ಮೊಸಳೆ ಪ್ರತ್ಯಕ್ಷ
ಮೈಸೂರು : ಸುಸಜ್ಜಿತ ಮೃಗಾಲಯದ ಇರುವ ಮೈಸೂರಿಗೂ ಕ್ರೂರ ಪ್ರಾಣಿಗಳಿಗೂ ಅದೆಂತಹ ನೆಂಟು. ಇತ್ತೀಚೆಗಷ್ಟೇ ಭಾರಿ ಗಾತ್ರದ ಚಿರತೆಯಾಂದು ಊರಿಗೆ ನುಗ್ಗಿ ಹಲವರನ್ನು ಗಾಯಗೊಳಿಸಿದ ಸುದ್ದಿ ಇನ್ನೂ ಹಚ್ಚಹಸುರಾಗಿರುವಾಗಲೇ ಇಲ್ಲಿನ ಸಿದ್ಧಾರ್ಥ ಬಡಾವಣೆಯ ತೆರೆದ ಚರಂಡಿಯಲ್ಲಿ ಭಾರಿ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದೆ. ಆಶ್ಚರ್ಯ ಎನಿಸಿದರು ಇದು ನಿಜ.
ಅಬ್ಬಬ್ಬಾ ಎಂದರೆ, ಹಾವು, ಚೇಳು ಓಡಾಡುವ ಚರಂಡಿಯಲ್ಲಿ ಆಳು ಗಾತ್ರದ ಮೊಸಳೆ ಬಂದರೆ ನೋಡಿದವರ ಗತಿ ಏನಾಗಬೇಡ ಹೇಳಿ. ಇಲ್ಲಿ ಆದದ್ದೂ ಅದೇ ಮಂಗಳವಾರ ಸಂಜೆಯ ಮಬ್ಬು ಗತ್ತಲಲ್ಲಿ ಸಿದ್ಧಾರ್ಥ ಬಡಾವಣೆಯ ಗೀತಾ ಕಾನ್ವೆಂಟ್ ಬಳಿಯಿರುವ ಚರಂಡಿಯಲ್ಲಿ ಭಾರಿ ಗಾತ್ರದ ಮೊಸಳೆ ಕಂಡ ನಾಗರಿಕರೊಬ್ಬರು ಹೆದರಿ ಹೌಹಾರಿದರು, ಛಿಟಾರ್ ಎಂದು ಕಿರುಚಿದರು.
ಇವರ ಕೂಗಾಟಕ್ಕೆ ಬಡಾವಣೆಯ ಜನರೆಲ್ಲಾ ಹೊರಬಂದರು. ಚರಂಡಿಯ ಬಳಿ ಸೇರಿದರು. ಎಲ್ಲರಿಗೂ ಒಂದೇ ಆಶ್ಚರ್ಯ ಚರಂಡಿಯಲ್ಲಿ ಇಷ್ಟು ಭಾರಿ ಗಾತ್ರದ ಮೊಸಳೆ ಬಂದಿದ್ದಾದರೂ ಹೇಗೆ? ಅಷ್ಟು ಹೊತ್ತಿಗೆ ಸುದ್ದಿ ಪೊಲೀಸರಿಗೂ ಮುಟ್ಟಿತು. ಕೂಡಲೆ ಅರಣ್ಯ ಇಲಾಖೆ ಸಿಬ್ಬಂದಿಯಾಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೊಸಳೆಗೆ ಹಗ್ಗ ಕಟ್ಟಿ ಬಂಧಿಸಿ, ಮೈಸೂರು ಮೃಗಾಲಯಕ್ಕೆ ಸಾಗಿಸುವಲ್ಲಿ ಯಶಸ್ವಿಯಾದರು.
ಈ ಮೊಸಳೆಯು 10 ಅಡಿಯಷ್ಟು ಉದ್ದವಿದ್ದು, 180 ಕೆ.ಜಿ. ತೂಕವಿದೆ ಎಂದು ಮೃಗಾಲಯದ ಸಿಬ್ಬಂದಿ ತಿಳಿಸಿದ್ದಾರೆ. ಮೊಸಳೆ ಸಿದ್ಧಾರ್ಥ ಬಡಾವಣೆಯ ಚರಂಡಿಗೆ ಹೇಗೆ ಬಂತು? ಎಂಬುದು ಇನ್ನೂ ನಿಗೂಢವಾಗಿದೆ. ಮೊದಲು ಮೈಸೂರು ಮೃಗಾಲಯದಿಂದಲೇ ಇದು ಬಂದಿರಬೇಕು ಎಂಬ ಅನುಮಾನ ಇತ್ತು. ಆದರೆ, ಈ ಬಡಾವಣೆಯ ಚರಂಡಿಗೂ ಮೈಸೂರು ಮೃಗಾಲಯಕ್ಕೂ ಸಂಬಂಧವೇ ಇಲ್ಲ.
ಹಾಗಾದರೆ, ಮೊಸಳೆ ಬಂದುದಾದರೂ ಎಲ್ಲಿಂದ. ಬಹುಶಃ ಕಳೆದೆರಡು ದಿನಗಳ ಹಿಂದೆ ಬಿದ್ದ ಭಾರಿ ಮಳೆಯ ನೀರಿನ ರಭಸಕ್ಕೆ ಮೊಸಳೆ ಕಾರಂಜಿ ಕೆರೆಯಿಂದ ಬಂದಿರಬಹುದು ಎಂದು ಊಹಿಸಲಾಗಿದೆ. ಅಂದು ಚಿರತೆ, ಇಂದು ಮೊಸಳೆ, ನಾಳೆ?
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...