ಮೈಸೂರು ದಸರಾ ಮಹೋತ್ಸವಕ್ಕೆ ಒಡೆಯರ್ಗೆ ಸರ್ಕಾರದ ಆಹ್ವಾನ
ಮೈಸೂರು : ಅಕ್ಟೋಬರ್ 26ರಂದು ನಡೆಯುವ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಜ್ಯ ಸರಕಾರದ ಪರವಾಗಿ ಶಿಕ್ಷಣ ಸಚಿವ ಎಚ್. ವಿಶ್ವನಾಥ್ ಅವರು ಮೈಸೂರು ರಾಜ ಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಅಧಿಕೃತ ಆಹ್ವಾನ ನೀಡಿದರು.
ಈ ಸಂದರ್ಭದಲ್ಲಿ ವಿಶ್ವವಿಖ್ಯಾತ ಜಂಬೂಸವಾರಿಗಾಗಿ ಚಿನ್ನದಂಬಾರಿಯನ್ನು ನೀಡುವಂತೆ ಮನವಿ ಮಾಡಿದ ಅವರು, ಅದಕ್ಕಾಗಿ ಸರಕಾರ ವತಿಯಿಂದ ನೀಡುವ ಗೌರವಧನ ಹಾಗೂ ಫಲತಾಂಬೂಲವನ್ನು ಒಡೆಯರ್ ಅವರಿಗೆ ನೀಡಿದರು. ಫಲತಾಂಬೂಲ ಹಾಗೂ ಸರಕಾರ ನೀಡಿದ ಗೌರವಧನವನ್ನು ಸ್ವೀಕರಿಸಿದ ಒಡೆಯರ್, ರಾಜ್ಯದ ಬರ ಕಾಮಗಾರಿಗೆ ಆ ಹಣವನ್ನು ವಿನಿಯೋಗಿಸುವಂತೆ ತಿಳಿಸಿ, ಸರಕಾರಕ್ಕೇ ಹಿಂತಿರುಗಿಸಿದರು.
ಈ ಸಂದರ್ಭದಲ್ಲಿ ಮೈಸೂರು ಮೇಯರ್ ಬಿ.ಕೆ. ಪ್ರಕಾಶ್, ಜಿಲ್ಲಾಧಿಕಾರಿ ಬಿ. ಬಸವರಾಜು, ವಿಭಾಗಾಧಿಕಾರಿ ಭಾಸ್ಕರ್, ಪಾಲಿಕೆ ಆಯುಕ್ತರಾದ ಶಂಕರ್ ಮೊದಲಾದವರು ಹಾಜರಿದ್ದರು. ಆನಂತರ ಪತ್ರಕರ್ತರೊಂದಿಗೆ ಮಾತನಾಡಿದ ವಿಶ್ವನಾಥ್ ಬರದ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ದಸರಾ ಆಚರಿಸಲಾಗುವುದು. ಇದಕ್ಕಾಗಿ ಕೇವಲ 10 ಲಕ್ಷ ರುಪಾಯಿ ಖರ್ಚು ಮಾಡಲಾಗುತ್ತಿದೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...