16 ದಿನಗಳ ಬಳಿಕ ಕಿರಿಯ ವೈದ್ಯರ ಮುಷ್ಕರ ವಾಪಾಸು
ಬೆಂಗಳೂರು : ಕಳೆದ16 ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಕಿರಿಯ ವೈದ್ಯರು ಮಂಗಳವಾರ ರಾತ್ರಿ ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡಿದ್ದಾರೆ.
ತಮ್ಮ ಬೇಡಿಕೆಗಳ ಬಗ್ಗೆ , ವೈದ್ಯಕೀಯ ಸಚಿವೆ ನಫೀಜಾ ಫಜಲ್, ಆರೋಗ್ಯ ಕಾರ್ಯಪಡೆ ಮುಖ್ಯಸ್ಥ ಡಾ. ವಿ.ಆರ್. ಸುದರ್ಶನ್, ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿ , ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರೊಂದಿಗೆ ನಡೆಸಿದ ಮಾತುಕತೆಯ ಪರಿಣಾಮವಾಗಿ, ಕಿರಿಯ ವೈದ್ಯರು ಮುಷ್ಕರವನ್ನು ವಾಪಾಸುತೆಗೆದುಕೊಂಡಿದ್ದಾರೆ.
ಮುಷ್ಕರ ಹೂಡಿದ್ದ ವೈದ್ಯರ ಬೇಡಿಕೆಗಳನ್ನು ಸರಕಾರ ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ನೀಡಿದ ಭರವಸೆಯ ಮೇರೆಗೆ ಮುಷ್ಕರವನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿ ಮೂರು ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಸರಕಾರ ನೀಡುವ ಅನುಮತಿಯನ್ನು ರದ್ದು ಪಡಿಸಬೇಕು ಎಂಬ ಬೇಡಿಕೆಯನ್ನು ಪರಿಶೀಲಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಮಿತಿಯಾಂದನ್ನು ರಚಿಸಲಾಗಿದ್ದು, 15 ದಿನಗಳೊಳಗೆ ಸಮಿತಿಯು ತನ್ನ ಅಧ್ಯಯನ ವರದಿ ಸಲ್ಲಿಸಲಿದೆ.
ಖಾಸಗಿ ವೈದ್ಯಕೀಯ ಕಾಲೇಜುಗಳೂ ಸಹ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ನೀಡಬೇಕು ಎಂಬ ಆಗ್ರಹ ಕುರಿತು, ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಜೊತೆ ಚರ್ಚಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವೆ ನಫೀಜಾ ಫಜಲ್ ಭರವಸೆ ನೀಡಿದ್ದಾರೆ.
(ಇನ್ಫೋ ವಾರ್ತೆ)