ಆರು ವರ್ಷಗಳಲ್ಲಿ ರಾಜ್ಯದಿಂದ ಬಾಲ ಕಾರ್ಮಿಕ ಪಿಡುಗು ನಿರ್ಮೂಲನೆ
ಗುಲ್ಬರ್ಗಾ : ಮುಂದಿನ 6 ವರ್ಷಗಳಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ರಾಜ್ಯದಿಂದ ನಿರ್ಮೂಲಗೊಳಿಸುವ ಕ್ರಿಯಾ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ ಎಂದು ರಾಜ್ಯ ಕಾರ್ಮಿಕ ಆಯುಕ್ತ ಇ.ವೆಂಕಟೇಶ್ ತಿಳಿಸಿದ್ದಾರೆ.
ಮಂಗಳವಾರ ಗುಲ್ಬರ್ಗಾದಲ್ಲಿ ಜರುಗಿದ ‘ಬಾಲ ಕಾರ್ಮಿಕ’ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ನಾರ್ವೆಯ ನೆರವನ್ನು ಹೊಂದಿರುವ ಯೋಜನೆಯಡಿ ದಾವಣಗೆರೆ ಹಾಗೂ ಗುಲ್ಬರ್ಗಾ ಜಿಲ್ಲೆಗಳಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗಾಣಿಸಲು ಕಾರ್ಯಕ್ರಮ ರೂಪಿಸುವ ಉದ್ದೇಶದಿಂದ ಈ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು .
ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನಗೊಳಿಸುವ ಕ್ರಿಯಾ ಯೋಜನೆಯು- ಬಾಲ ಕಾರ್ಮಿಕ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು, ಬಾಲಕಾರ್ಮಿಕರ ಪುನರ್ವಸತಿಗೆ ಪ್ರತಿ ಜಿಲ್ಲೆಯಲ್ಲೂ ವಸತಿ ಶಾಲೆಗಳ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹೊಂದಿದೆ. ಈ ಯೋಜನೆಯ ಜಾರಿಗೆ ವಿದೇಶಿ ನೆರವು ಪಡೆಯಲೂ ಪ್ರಯತ್ನಿಸಲಾಗುವುದು ಎಂದು ವೆಂಕಟೇಶ್ ಹೇಳಿದರು.
ಸಮಾಜವನ್ನು ಪಿಡುಗಾಗಿ ಕಾಡುತ್ತಿರುವ ಬಾಲ ಕಾರ್ಮಿಕ ಪಿಡುಗನ್ನು ಕೊನೆಗಾಣಿಸುವ ಕ್ರಿಯಾ ಯೋಜನೆಗೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಒಪ್ಪಿಗೆ ನೀಡಿದ್ದಾರೆ ಎಂದು ಅವರು ಹೇಳಿದರು. 1991 ರ ಜನಗಣತಿಯ ಪ್ರಕಾರ- 26 ಲಕ್ಷ ಮಕ್ಕಳು ಶಾಲೆಯಿಂದ ಹೊರಬಿದ್ದಿದ್ದಾರೆ. 14 ವರ್ಷದೊಳಗಿನ ಸುಮಾರು 10 ಲಕ್ಷ ಬಾಲ ಕಾರ್ಮಿಕರು ಅಪಾಯಕಾರಿ ವಲಯಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ ಎಂದು ಅವರು ವಿಷಾದಿಸಿದರು.
(ಯುಎನ್ಐ)