ಶ್ರೀಲಂಕಾ ಪ್ರವಾಸಕ್ಕೆ ನನ್ನನ್ನು ಪರಿಗಣಿಸಬೇಡಿ : ಜಾವಗಲ್ ಶ್ರೀನಾಥ್
ಬೆಂಗಳೂರು : ಶ್ರೀಲಂಕಾ - ನ್ಯೂಜಿಲೆಂಡ್ - ಭಾರತ ನಡುವೆ ಶ್ರೀಲಂಕಾದಲ್ಲಿ ಜುಲೈ 18ರಿಂದ ಆಗಸ್ಟ್ 14ರವರೆಗೆ ನಡೆಯಲಿರುವ ತ್ರಿಕೋಣ ಏಕದಿನದ ಅಂತಾರಾಷ್ಟ್ರೀಯ ಪಂದ್ಯಕ್ಕೆ ಭಾರತದ ವೇಗದ ಬೌಲರ್ ಶ್ರೀನಾಥ್ ಸೇವೆಯೂ ಲಭ್ಯವಾಗುತ್ತಿಲ್ಲ.
ತಮ್ಮನ್ನು ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋಣ ಸರಣಿಗೆ ಪರಿಗಣಿಸ ಬೇಡಿ ಎಂದು ಸ್ವತಃ ಜಾವಗಲ್ ಶ್ರೀನಾಥ್ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ. ಪ್ರಸಕ್ತ ಹರಾರೆಯಲ್ಲಿ ನಡೆಯುತ್ತಿರುವ ಭಾರತ - ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ನಡುವಣ ತ್ರಿಕೋಣ ಸರಣಿಯಿಂದ ಕೈಬಿಟ್ಟು, ಶ್ರೀನಾಥ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ತಾವು ಟೆಸ್ಟ್ ಪಂದ್ಯಗಳತ್ತ ಹೆಚ್ಚು ಗಮನ ಹರಿಸುತ್ತಿರುವುದಾಗಿ ಮಂಡಳಿಗೆ ಮಾಡಿರುವ ಮನವಿಯಲ್ಲಿ ಶ್ರೀನಾಥ್ ತಿಳಿಸಿದ್ದಾರೆ. ಈ ಹಿಂದೆ ಬಲ ತೋಳಿನ ತೊಂದರೆಯಿಂದಾಗಿ ಶ್ರೀನಾಥ್ ಕೇವಲ ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಪಾಲ್ಗೊಳ್ಳುತ್ತಿದ್ದರು.
ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಶ್ರೀನಾಥ್, ನಾನು ಟೆಸ್ಟ್ನತ್ತ ಹೆಚ್ಚು ಗಮನ ಹರಿಸುತ್ತಿದ್ದೇನೆ ಎಂದ ಮಾತ್ರಕ್ಕೆ ಭವಿಷ್ಯದಲ್ಲಿ ಏಕದಿನದ ಪಂದ್ಯದಲ್ಲಿ ಆಡುವುದೇ ಇಲ್ಲ ಎಂದು ಅರ್ಥವಲ್ಲ ಎಂದೂ ತಿಳಿಸಿದ್ದಾರೆ. ಅನಿಲ್ ಕುಂಬ್ಳೆ ಸಹ ಶ್ರೀಲಂಕಾ ಪ್ರವಾಸಕ್ಕೆ ತಾವು ದೈಹಿಕವಾಗಿ ಸಮರ್ಥರಾಗಿಲ್ಲ ಎಂದು ಮೊನ್ನೆಯಷ್ಟೇ ತಿಳಿಸಿದ್ದರು. ಶ್ರೀಲಂಕಾದಲ್ಲಿ ನಡೆಯಲಿರುವ ಪಂದ್ಯಗಳಿಗೆ ಜುಲೈ 9ರಂದು ಭಾರತ ತಂಡವನ್ನು ಪ್ರಕಟಿಸಲಾಗುವುದು.
(ಯು.ಎನ್.ಐ)