ಹೈಕಮಾಂಡ್ನಿಂದ ‘ಕೃಷ್ಣ ಪರೀಕ್ಷೆ’ ಗುಲಾಮಗಿರಿಯ ಸಂಕೇತ : ಶೆಟ್ಟರ್
ಬೆಂಗಳೂರು : ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಹೈಕಮಾಂಡ್ ತಂಡ ಕೃಷ್ಣ ನೇತೃತ್ವದ ರಾಜ್ಯ ಸರಕಾರದ ಪ್ರಗತಿ ಪರಿಶೀಲನೆ ನಡೆಸುತ್ತಿರುವುದು ಗುಲಾಮಗಿರಿಯ ಸಂಕೇತ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾದವರು ರಾಜ್ಯದ ಜನತೆಗೆ ನಿಷ್ಠರಾಗಿರಬೇಕೆ ಹೊರತು. ಹೈಕಮಾಂಡ್ಗಲ್ಲ. ಮುಖ್ಯಮಂತ್ರಿ ಯಾವಾಗಲೂ ರಾಜ್ಯದ ಜನರನ್ನು ತೃಪ್ತಿಪಡಿಸುವ ರೀತಿ ಕಾರ್ಯ ನಿರ್ವಹಿಸಬೇಕು. ಅದನ್ನು ಬಿಟ್ಟು ಹೈಕಮಾಂಡ್ ಮೆಚ್ಚಿಸುವ ಕೆಲಸದಲ್ಲಿ ನಿರತರಾಗುವುದು ಗುಲಾಮ ಗಿರಿಯ ಸಂಕೇತವಲ್ಲದೆ ಮತ್ತೇನು ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದ ಘನತೆ ಹಾಗೂ ಮರ್ಯಾದೆಯನ್ನು ಉಳಿಸಲು ಎಸ್.ಎಂ. ಕೃಷ್ಣ ತಮ್ಮ ಪಕ್ಷದ ಹೈಕಮಾಂಡ್ನ ಈ ಧೋರಣೆಯನ್ನು ಪ್ರತಿಭಟಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ಕಳೆದ ವರ್ಷ ಕೂಡ ರಾಜ್ಯಕ್ಕೆ ಬಂದಿದ್ದ ಕಾಂಗ್ರೆಸ್ ಹೈಕಮಾಂಡ್ ತಂಡ ರಾಜ್ಯದ ಸಚಿವರುಗಳ ಕಾರ್ಯವೈಖರಿಯ ಪರೀಕ್ಷಿಸುವ ನೆಪದಲ್ಲಿ ಪೆರೇಡ್ ಮಾಡಿಸಿ, ಶಾಲಾ ಮಕ್ಕಳಂತೆ ನೋಡಿಕೊಂಡಿತು. ಇದು ಬ್ರಿಟಿಷ್ ಆಳ್ವಿಕೆಯನ್ನು ನೆನಪಿಸುತ್ತದೆ ಎಂದು ಶೆಟ್ಟರ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಮುಖ್ಯಮಂತ್ರಿಗಳ ಸಭೆ ನಡೆಸಿದ ಸೋನಿಯಾ ಅವರು, ಈಗ ಮತ್ತೊಮ್ಮೆ ರಾಜ್ಯದ ಕಾರ್ಯವೈಖರಿಯ ಪ್ರಗತಿಪರಿಶೀಲನೆಗೆ ಮುಂದಾಗಿದ್ದಾರೆ. ಅಂದರೆ, ಎಲ್ಲ ಕಾಂಗ್ರೆಸ್ ಸರಕಾರಗಳನ್ನೂ ಅದರ ಮುಖ್ಯಮಂತ್ರಿಗಳನ್ನೂ ಕೀಲುಗೊಂಬೆಗಳಂತೆ ಆಡಿಸುವುದು ಅವರ ಉದ್ದೇಶವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಶೆಟ್ಟರ್ ಹೇಳಿದ್ದಾರೆ.
ಸಂವಿಧಾನದ ಪ್ರಕಾರ ಮುಖ್ಯಮಂತ್ರಿ ಹಾಗೂ ಅವರ ಸಂಪುಟ ಸಚಿವರು ವಿಧಾನ ಮಂಡಲಕ್ಕೆ ಹಾಗೂ ರಾಜ್ಯಪಾಲರಿಗೆ ಉತ್ತರದಾಯಿತ್ವವನ್ನು ಹೊಂದಿರಬೇಕೇ ಹೊರತು ಹೈಕಮಾಂಡ್ಗೆ ಅಲ್ಲ. ಇಂತಹ ಹೀನ ಸಂಸ್ಕೃತಿಗೆ ಕರ್ನಾಟಕದಲ್ಲಿ ಕೃಷ್ಣ ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ. ರಾಜ್ಯದ ಘನತೆ ಕಾಪಾಡಲು ದಿಟ್ಟ ನಿರ್ಧಾರ ಕೈಗೊಳ್ಳುವಂತೆ ಅವರು ಕೃಷ್ಣರಿಗೆ ಸಲಹೆ ಮಾಡಿದ್ದಾರೆ.
ಮುಖಪುಟ / ಇವತ್ತು... ಈ ಹೊತ್ತು...