ಮಂಗಳೂರು ವಿವಿಯಲ್ಲಿ ವೇದ- ಜ್ಯೋತಿಷ್ಯವಿಷಯಗಳ ಡಿಪ್ಲೊಮ
ಮಂಗಳೂರು : ವೇದ, ಆಗಮ ಮತ್ತು ಜ್ಯೋತಿಷ್ಯದಲ್ಲಿ ಡಿಪ್ಲೋಮಾ ಕೋರ್ಸ್ಗಳನ್ನು ಆರಂಭಿಸುವ ಕುರಿತು ಮಂಗಳೂರು ವಿಶ್ವ ವಿದ್ಯಾಲಯ ಯೋಚಿಸುತ್ತಿದೆ ಎಂದು ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ. ಎಸ್. ಗೋಪಾಲ್ ಹೇಳಿದ್ದಾರೆ.
ಇತ್ತೀಚೆಗೆ ಭಾರತೀ ಆನ್ವಯಿಕ ವಿಜ್ಞಾನ ಸಂಸ್ಥೆಯಲ್ಲಿ ಅಧ್ಯಯನ ಕೊಠಡಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ದೇಶದ ಆರ್ಥಿಕ ಬೆಳವಣಿಗೆಗೆ ಹಾಗೂ ಸಮಾಜಕ್ಕೆ ಮೌಲ್ಯಾಧಾರಿತ ಶಿಕ್ಷಣ ಉಪಯುಕ್ತವಾಗಿದ್ದು , ಜ್ಯೋತಿಷ್ಯ- ವೇದ ಮತ್ತು ಆಗಮ ತರಗತಿಗಳನ್ನು ಆರಂಭಿಸುವ ವಿಷಯದಲ್ಲಿ ತಾವು ಆಸಕ್ತರಾಗಿರುವುದಾಗಿ ಹೇಳಿದರು.
ಉಪಕುಲಪತಿಗಳ ಮಾತನ್ನು ಸಮರ್ಥಿಸಿದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗ, ವಿದ್ಯಾ ಸಂಸ್ಥೆಗಳು ಭಾರತೀಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಮತ್ತು ಹರಡುವ ಮಾಧ್ಯಮಗಳಾಗಬೇಕು ಎಂದು ಅಭಿಪ್ರಾಯಪಟ್ಟರು. ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ಈ ಸಂದರ್ಭದಲ್ಲಿ ಮಾತನಾಡಿ ಉಪಕುಲಪತಿಗಳ ಈ ನಿರ್ಧಾರ ಶ್ಲಾಘನೀಯ ಎಂದರು. ನಿಟ್ಟೆ ವಿದ್ಯಾ ಸಂಸ್ಥೆಯ ವಿನಯ್ ಹೆಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
(ಇನ್ಫೋ ವಾರ್ತೆ)