22ರಂದು ಆಷಾಢದ ಗಾಳಿಯಲ್ಲಿ ಬಾನಂಗಳದಿ ಗಾಳಿ ಪಟಗಳ ಸ್ಪರ್ಧೆ
ಬೆಂಗಳೂರು : ಆಷಾಢದ ಗಾಳಿ ಭರ್ರೆಂದು ಬೀಸುತ್ತಿದೆ. ಬಾನಿನಲ್ಲಿ ಬಣ್ಣ ಬಣ್ಣದ ಗಾಳಿಯ ಪಟಗಳು ಹಾರಾಡುತ್ತಿವೆ. ಮಕ್ಕಳಂತೂ ಹಿರಿಹಿರಿ ಹಿಗ್ಗುತ್ತಾ ಶನಿವಾರ - ಭಾನುವಾರದ ರಜೆಯಲ್ಲಿ ಗಾಳಿಯ ಪಟಗಳ ಹಾರಿಸುವ ಆನಂದದಲ್ಲಿ ತಲ್ಲೀನರಾಗಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಮಂಡ್ಯದಲ್ಲಿ ಗಾಳಿ ಪಟಗಳ ಸ್ಪರ್ಧೆ ನಡೆದಿತ್ತು. ಈಗ ಗಾಳಿ ಪಟಗಳ ಸ್ಪರ್ಧೆಗೆ ಬೆಂಗಳೂರಿನ ಜಕ್ಕೂರು ವಿಮಾನ ಹಾರಾಟ ತರಬೇತಿ ಮೈದಾನ ಸಜ್ಜಾಗಿದೆ. ಜುಲೈ 22ರ ಭಾನುವಾರ ಇಲ್ಲಿ ಗಾಳಿಪಟಗಳ ಸ್ಪರ್ಧೆ ಹಾಗೂ ಉತ್ಸವ ನಡೆಯಲಿದೆ.
ಕರ್ನಾಟಕ ಜಾನಪದ ಪರಿಷತ್ತು ಏರ್ಪಡಿಸಿರುವ ಈ ಸ್ಪರ್ಧೆಯಲ್ಲಿ 12 ವರ್ಷದೊಳಗಿನ, 13ರಿಂದ 22 ವರ್ಷದೊಳಗಿನ, 23 ವರ್ಷ ಮೇಲ್ಪಟ್ಟವರಿಗಾಗಿಯೇ ಪ್ರತ್ಯೇಕ ಸ್ಪರ್ಧೆಗಳು ಜರುಗಲಿವೆ. ಸ್ಪರ್ಧೆಯ ವಿಜೇತರಿಗೆ ಆಕರ್ಷಕ ಬಹುಮಾನಗಳೂ ಉಂಟು.
ಕಳೆದ ವರ್ಷ ಜುಲೈ 23ರಂದು ಇದೇ ಮೈದಾನದ ಗಗನದ ಬಯಲಲಿ ಗಾಂಧೀಜಿ, ವಿಶ್ವೇಶ್ವರಯ್ಯ, ಪ್ರಾಣಿ, ಪಕ್ಷಿ, ದೇವರು ಮೊದಲಾದ ಹತ್ತು ಹಲವು ನಮೂನೆಯ ಪಟಗಳು ಹಾರಾಡಿದ್ದವು. ಈ ಬಣ್ಣ ಬಣ್ಣದ ಬಾನಕ್ಕಿಗಳ ನೋಡಲೆಂದೇ ಸಾವಿರಾರು ಜನ ಜಮಾಯಿಸಿದ್ದರು.
ವಿವಿಧ ಆಕಾರದ, ಬೃಹದಾಕಾರದ ಗಾಳಿ ಪಟಗಳನ್ನು ಮಾಡುವ ಹಾಗೂ ಹಾರಿಸುವ ತಜ್ಞರು ಜುಲೈ 22ರಂದು ತಮ್ಮ ಕೌಶಲ ಮತ್ತು ಕೈಚಳಕ ತೋರಲು ಸಜ್ಜಾಗುತ್ತಿದ್ದಾರೆ. ನೀವೂ ಇಲ್ಲಿ ಗಾಳಿಪಟ ಹಾರಿಸ ಬಯಸುತ್ತೀರಾ ? ಕೂಡಲೇ ಈ ಕೇಳಕಂಡ ವಿಳಾಸ ಸಂಪರ್ಕಿಸಿ. ಕರ್ನಾಟಕ ಜಾನಪದ ಪರಿಷತ್ತು, ನಂ. 144, 5ನೇ ಮುಖ್ಯರಸ್ತೆ, ಜಬ್ಬಾರ್ ಬ್ಲಾಕ್, ವೈಯಾಲಿ ಕಾವಲ್, ಬೆಂಗಳೂರು - 560003.
ಮುಖಪುಟ / ಇವತ್ತು... ಈ ಹೊತ್ತು...