ಕರ್ನಾಟಕ ವನ ಸಂವರ್ಧನ ಟ್ರಸ್ಟ್ಗೆಮೂರು ಕೋಟಿ ರುಪಾಯಿ
ಬೆಂಗಳೂರು : ಕನ್ನಡಿಗನಿಗೊಂದರಂತೆ 5 ಕೋಟಿ ಗಿಡಗಳನ್ನು ರಾಜ್ಯದಲ್ಲಿ ನೆಡಲು ಉದ್ದೇಶಿಸಿರುವ ಕರ್ನಾಟಕ ವನ ಸಂವರ್ಧನ ಟ್ರಸ್ಟ್ಗೆ ಮೂರು ಕೋಟಿ ರುಪಾಯಿಗಳ ನೆರವನ್ನು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪ್ರಕಟಿಸಿದ್ದಾರೆ.
ಬೆಂಗಳೂರು ವಿಶ್ವ ವಿದ್ಯಾಲಯ, ಕರ್ನಾಟಕ ವನ ಸಂವರ್ಧನ ಟ್ರಸ್ಟ್ ಹಾಗೂ ಎನ್.ಎಸ್.ಎಸ್. ಪ್ರಾದೇಶಿಕ ಕೇಂದ್ರ (ಬೆಂಗಳೂರು) ಇವರುಗಳು ಜಂಟಿಯಾಗಿ ಜ್ಞಾನಭಾರತಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉತ್ತಮ ಕೆಲಸ ಮಾಡುವ ಸಂಸ್ಥೆಗಳಿಗೆ ಹಣ ನೀಡುವುದಕ್ಕಾಗಿ ರಾಜ್ಯ ಸರ್ಕಾರ ಮುಂಗಡ ಪತ್ರದಲ್ಲಿ ಹಣ ಕಾಯ್ದಿರಿಸಿದೆ. ಟ್ರಸ್ಟ್ನ ಮಹೋನ್ನತ ಉದ್ದೇಶದ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಭಾಗಿಗಳಾಗಬೇಕು. ವಸ್ತು ಸ್ಥಿತಿಯ ಆಧಾರದ ಮೇಲೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಸಮಾಜ ಸಕ್ರಿಯವಾಗಬೇಕು ಎಂದು ಕೃಷ್ಣ ಹೇಳಿದರು.
ಲಾಲ್ಬಾಗ್ ಒತ್ತುವರಿ ಮಾಡಲೂ ಜನ ಹೇಸುತ್ತಿಲ್ಲ . ರಸ್ತೆಗಳಲ್ಲಿ ಗುಡಿಗಳನ್ನು ನಿರ್ಮಿಸಲಾಗುತ್ತಿದೆ. ಇದನ್ನೆಲ್ಲ ಎಲ್ಲಿಯವರೆಗೆ ಸಹಿಸುವುದು ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಪರಿಸರ ಜಾಗೃತಿ ಕೆಲಸಗಳಿಗೆ ಮಠ, ಮಸೀದಿ, ಚರ್ಚ್ಗಳು ಅರ್ಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕೊಳಚೆ ಶೇಖರಣೆಯಾಗಿ ಕೆಲಸಕ್ಕೆ ಬಾರದಂತಾಗಿರುವ ಕೆಂಪಾಂಬುಧಿ ಕೆರೆಯನ್ನು ಒಂದು ವರ್ಷದೊಳಗಾಗಿ ಶುದ್ಧೀಕರಿಸಲು ಆದೇಶ ನೀಡಿರುವುದಾಗಿ ಅವರು ಹೇಳಿದರು.
ವಿಶ್ವ ವಿದ್ಯಾಲಯದ ಕುಲಪತಿ ಡಾ. ಕೆ. ಸಿದ್ಧಪ್ಪ ಅವರು ಈ ವರ್ಷ ವಿವಿ ಆವರಣದಲ್ಲಿ 5 ಲಕ್ಷ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ ಎಂದರು. ಬಾಲಗಂಗಾಧರನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಿವಪುರ ಸ್ವಾಮೀಜಿ ಹಾಗೂ ಸಚಿವರುಗಳಾದ ಡಾ. ಜಿ ಪರಮೇಶ್ವರ, ಧರ್ಮಸಿಂಗ್, ಎಚ್.ಕೆ. ಪಾಟೀಲ್, ಅಲ್ಲಂ ವೀರಭದ್ರಪ್ಪ , ಸಂಸದ ಎಂ.ವಿ. ಚಂದ್ರಶೇಖರ ಮೂರ್ತಿ, ಶಾಸಕ ಆರ್. ಅಶೋಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ಎಂ.ವಿ. ವೆಂಕಟಪ್ಪ ಅಶೋಕವನವನ್ನು ಉದ್ಘಾಟಿಸಿದರು.
(ಇನ್ಫೋ ವಾರ್ತೆ)