ನಕಲಿ ಸಾಫ್ಟ್ವೇರ್ ರಹಿತ ರಾಜ್ಯ ಕರ್ನಾಟಕ:ಸರ್ಕಾರದ ಪ್ರಕಟಣೆ
ಬೆಂಗಳೂರು : ಕರ್ನಾಟಕ ನಕಲಿ ಸಾಫ್ಟ್ವೇರ್ ಮುಕ್ತ ರಾಜ್ಯ ಎಂದು ರಾಜ್ಯ ಸರಕಾರ ಘೋಷಿಸಿದೆ. ಈ ಸಂಬಂಧ ಆದೇಶವೊಂದನ್ನೂ ಹೊರಡಿಸಿದೆ. 2002ರ ಜನವರಿ ವೇಳಗೆ ಕರ್ನಾಟಕವನ್ನು ನಕಲಿ ಸಾಫ್ಟ್ವೇರ್ ರಹಿತ ರಾಜ್ಯವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈ ದಿಟ್ಟ ಹೆಜ್ಜೆ ಇಡಲಾಗಿದೆ.
ಭಾರತದಲ್ಲೇ ಇಂತಹ ಒಂದು ಘೋಷಣೆ ಮಾಡಿ ಸರಕಾರಿ ಆದೇಶ ಹೊರಡಿಸಿರುವ ಪ್ರಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಈ ವಿಷಯವನ್ನು ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ವಿವೇಕ್ ಕುಲಕರ್ಣಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಸಿದರು.
ಮಾಹಿತಿ ತಂತ್ರಜ್ಞಾನ ಕಂಪನಿಗಳ ಶ್ರಮ, ಬುದ್ಧಿವಂತಿಕೆಯನ್ನು ರಕ್ಷಿಸುವ ಸಂಬಂಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆಯ ನಿರ್ದೇಶಕ ರಮಣರೆಡ್ಡಿ ತಿಳಿಸಿದರು. ರಾಜ್ಯ ಸರಕಾರದ ಇಲಾಖೆಗಳಲ್ಲಿ ಅಧಿಕೃತ ಹಾಗೂ ನೈಜ ಸಾಫ್ಟ್ವೇರ್ಗಳ ಬಳಕೆ ಆಗಬೇಕು. ನಕಲಿ ಸಾಫ್ಟ್ವೇರ್ ಹಾವಳಿ ತಡೆಗೆ ನಿಯಮಿತವಾಗಿ ತಪಾಸಣೆಗಳು ನಡೆಯಬೇಕು ಎಂದು ಅವರಿಬ್ಬರೂ ಅಭಿಪ್ರಾಯಪಟ್ಟರು.
ನೈಜ ತಂತ್ರಾಂಶ (ಸಾಫ್ಟ್ವೇರ್) ಉತ್ತೇಜನಕ್ಕೆ ಹಾಗೂ ನಕಲಿ ತಂತ್ರಾಂಶ ಹಾವಳಿ ತಡೆಗಟ್ಟಲು ಎಲ್ಲ ಇಲಾಖೆಗಳಲ್ಲೂ ಪಾಲಕ ಅಧಿಕಾರಿಗಳನ್ನೂ ನಿಯೋಜಿಸಲಾಗುವುದು. ಇದರಿಂದಾಗಿ ರಾಜ್ಯದ ಸಾಫ್ಟ್ವೇರ್ ಉದ್ದಿಮೆಯಲ್ಲಿ ವಿದೇಶೀ ಬಂಡವಾಳ ಹೂಡಿಕೆಗೆ ಉತ್ತೇಜನ ದೊರೆಯಲಿದೆ ಎಂದು ಅವರು ಹೇಳಿದರು.
ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ಬೆಂಗಳೂರನ್ನು ನಕಲಿ ಸಾಫ್ಟ್ವೇರ್ ರಹಿತ ಪ್ರದೇಶ ಹಾಗೂ ಕರ್ನಾಟಕ ಸರ್ಕಾರವನ್ನು ನಕಲಿ ತಂತ್ರಾಂಶ ಇಲ್ಲದ ರಾಜ್ಯವಾಗಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ನಕಲಿ ಸಾಫ್ಟ್ವೇರ್ ಪತ್ತೆಗೆ 250 ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಡಿ.ಜಿ.ಪಿ. ಶ್ರೀಕುಮಾರ್ ಅವರು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ನಕಲಿ ಹಾವಳಿಯಿಂದ ಸಾಫ್ಟ್ವೇರ್ ಉದ್ದಿಮೆ ಬೆಳೆಯಲು ಸಾಧ್ಯವೇ ಇಲ್ಲ ಎಂಬುದನ್ನು ಅವರು ಒಪ್ಪಿಕೊಂಡರು.