ಹೈಕೋರ್ಟ್ ಪೀಠ ಚರ್ಚೆಗೆ ಕೃಷ್ಣ ಕರೆದಸಭೆ ಹಠಾತ್ ರದ್ದು
ಬೆಂಗಳೂರು : ಉತ್ತರ ಕರ್ನಾಟಕವನ್ನು ಸರಕಾರ ನಿರ್ಲಕ್ಷಿಸಿದೆ ಎಂಬ ಆರೋಪದಿಂದ ಮುಕ್ತವಾಗಲು ಹಾಗೂ ಪ್ರಾದೇಶಿಕ ಅಸಮತೋಲನದ ಬಗ್ಗೆ ಚರ್ಚೆ ನಡೆಸಲು ಜೂನ್ 6 ರಂದು ಹುಬ್ಬಳ್ಳಿಯಲ್ಲಿ ತಾವೇ ಕರೆದ ಸಭೆಯನ್ನು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಠಾತ್ತಾಗಿ ರದ್ದು ಪಡಿಸಿದ್ದಾರೆ.
ಪಾಟೀಲ ಪುಟ್ಟಪ್ಪ ಅವರ ಹುಟ್ಟು ಹಬ್ಬದಲ್ಲಿ ಭಾಗವಹಿಸಿದ ನಂತರ ಉತ್ತರ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ನಾಯಕರ ಬಳಿ ಹೈಕೋರ್ಟ್ ಪೀಠ ಸ್ಥಾಪನೆ ಮತ್ತು ಅಲ್ಲಿನ ಇತರ ಸಮಸ್ಯೆಗಳ ಕುರಿತಂತೆ ಸಮಾಲೋಚನೆ ಸಭೆ ನಡೆಸಲು ಈ ಮುನ್ನ ನಿರ್ಧರಿಸಲಾಗಿತ್ತು.
ಆದರೆ ಹೊಸ ಕಾರ್ಯಕ್ರಮದ ಪ್ರಕಾರ, ಎಸ್. ಎಂ. ಕೃಷ್ಣ ಅವರು ಬುಧವಾರ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಧಾರವಾಡಕ್ಕೆ ಭೇಟಿ ನೀಡಿ ಪಾಟೀಲ ಪುಟ್ಟಪ್ಪ ಅವರ ಹುಟ್ಟು ಹಬ್ಬದ ಸಮಾರಂಭದಲ್ಲಿ ಭಾಗವಹಿಸಿ ವಾಪಸ್ಸಾಗುತ್ತಾರೆ. ಪ್ರಾದೇಶಿಕ ಅಸಮತೋಲನ ನಿವಾರಣಾ ಸಭೆಯಲ್ಲಿ ಭಾಗವಹಿಸಲು ತಮಗೂ ಆಹ್ವಾನ ಬಂದಿತ್ತು, ಆದರೆ ಸಭೆಯ ಬಗ್ಗೆ ಕೊನೆಯ ಗಳಿಗೆಯಲ್ಲಿ ಆದ ಬದಲಾವಣೆಗಳ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಸಮಿತಿಯ ಅಧ್ಯಕ್ಷ ಡಾ. ಡಿ. ಎಂ. ನಂಜುಂಡಪ್ಪ ಹೇಳಿದ್ದಾರೆ.
(ಇನ್ಫೋ ವಾರ್ತೆ)