ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ ಬಸವಣ್ಣ ಸಾಮಾನ್ಯ ವ್ಯಕ್ತಿ ,ಅವರಲ್ಲ ವಿಶ್ವ ಶಕ್ತಿ ’

By Staff
|
Google Oneindia Kannada News

ಮಸ್ಕಿ : ಹನ್ನೆರಡನೇ ಶತಮಾನದ ಶಿವ ಶರಣ ಬಸವಣ್ಣ ಒಬ್ಬ ಅಪರೂಪದ ಭಕ್ತನೇ ಹೊರತು, ವಿಶ್ವ ಗುರುವಲ್ಲ . ಆತನನ್ನು ವಿಶ್ವಗುರುವೆಂದು ವೈಭವೀಕರಿಸುವುದೂ ಸಲ್ಲ ಎಂದು ಕೌಳೂರು ಸಂಸ್ಥಾನದ ಡಾ. ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಜಗದ್ಗುರು ರೇಣುಕಾಚಾರ್ಯ ಜಂಗಮ ಸೇವಾ ಸಮಿತಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸ್ವಾಮೀಜಿ, ಸಾಮಾನ್ಯ ವ್ಯಕ್ತಿಯಾಗಿದ್ದ ಬಸವಣ್ಣನ ವಿಚಾರಗಳನ್ನು ವಿದೇಶದಲ್ಲಿ ಪ್ರಚಾರ ಮಾಡುತ್ತಿರುವವರ ನಡವಳಿಕೆಯನ್ನು ತೀವ್ರ ಶಬ್ದಗಳಲ್ಲಿ ಖಂಡಿಸಿದರು. ಬಸವಣ್ಣನನ್ನು ವಿಶ್ವಮಾನವ ಎನ್ನುವ ವೀರಶೈವರು, ಆತ ಹುಟ್ಟಿನಿಂದ ಬ್ರಾಹ್ಮಣನಾಗಿದ್ದ ಎನ್ನುವುದನ್ನು ಮರೆಯಬಾರದು ಎಂದರು.

ಶರಣರ ವಚನಗಳನ್ನು ತಿದ್ದಲು ಹೊರಟಿರುವ ಮಾತೆ ಮಹಾದೇವಿ ಅವರನ್ನು ಟೀಕಿಸಿದ ಶಿವಾಚಾರ್ಯ ಸ್ವಾಮೀಜಿ, ಅಂತವರಿಗೆ ಪಾಠ ಕಲಿಸಿ ಎಂದು ಜನತೆಗೆ ಕರೆ ನೀಡಿದರು. ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು, ರಾಯಚೂರು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಹೇಮಲತಾ ಹಿರೇಮಠ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ವಾಮೀಜಿಯವರ ಮಾತಿಗೆ ಖಂಡನೆ : ಬಸವಣ್ಣನವರ ಬಗ್ಗೆ ಲಘುವಾಗಿ ಮಾತನಾಡಿರುವ ಕೌಳೂರು ಸ್ವಾಮಿಗಳ ನಡವಳಿಕೆಯನ್ನು ಮಹಾಮನೆ ಸಮಿತಿ ಖಂಡಿಸಿದೆ. ಧಾರ್ಮಿಕ ಸಭೆ ಮುಗಿಯುತ್ತಿದ್ದಂತೆಯೇ, ಸ್ವಾಮೀಜಿಯವರ ಮಾತಿನಿಂದ ರೊಚ್ಚಿಗೆದ್ದ ಮಹಾಮನೆ ಸಮಿತಿಯ ಸದಸ್ಯರು ನೇರವಾಗಿ ಸ್ವಾಮೀಜಿಯಾಂದಿಗೆ ಮಾತಿನ ಚಕಮಕಿಗೆ ಇಳಿದರು.

ಹುಟ್ಟಿನಿಂದ ಬ್ರಾಹ್ಮಣ ಅನ್ನುವುದರಿಂದ ಬಸವಣ್ಣನವರನ್ನು ನಿರಾಕರಿಸುವುದಾದರೆ, ವಾಲ್ಮೀಕಿ, ಕಬೀರ, ಷರೀಫರನ್ನು ಒಪ್ಪಲು ಸಾಧ್ಯವೇ ಇಲ್ಲ ಎನ್ನುವಂತಾಗುತ್ತದೆ. ಒಂದಕ್ಷರ ಕಲಿಸಿದಾತನನ್ನು ಗುರು ಎನ್ನುವಾಗ, ಬದುಕಿನ ಹಲವಾರು ಸೂಕ್ಷ್ಮಗಳನ್ನು ಸರಳವಾಗಿ ಹೇಳಿದ ಬಸವಣ್ಣನವರನ್ನು ಗುರು ಎನ್ನದಿರಲು ಹೇಗೆ ಸಾಧ್ಯ ಎಂದು ಮಹಾಮನೆಯ ಸದಸ್ಯರು ಹೇಳಿದ್ದಾರೆ.

ಸ್ವಾಮಿಯವರ ಬಾಯಿಯಲ್ಲಿ ಇಂಥಾ ಕೀಳು ನುಡಿಗಳು ಬಂದಿರುವ ಬಗ್ಗೆ ವಿಷಾದಿಸಿರುವ ಸಮಿತಿ, ಇನ್ನು ಮುಂದೆ ಇಂಥಾ ಅವಹೇಳನದ ಮಾತುಗಳಾಡುವುದನ್ನು ಸ್ವಾಮೀಜಿ ನಿಲ್ಲಿಸಬೇಕೆಂದು ಒತ್ತಾಯಿಸಿದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X