ಪಾತಾಳದಲ್ಲಿ ಅಡಿಕೆ ಬೆಲೆ,ಕಳೆಯಿಲ್ಲದ ಬೆಳೆಗಾರರ ಬದುಕು
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಧಾರಣೆ ತೀರಾ ಕುಸಿದಿದ್ದು ಅಡಿಕೆ ವಹಿವಾಟು ಆತಂಕದ ಸ್ಥಿತಿಯಲ್ಲಿದೆ.
ಅಡಿಕೆ ಬೆಲೆ ಕೆಜಿಗೆ 38 ರೂಪಾಯಿಗಿಳಿದಿದ್ದು, ಕಳೆದ ವರ್ಷ ಈ ಹೊತ್ತಿಗೆ ಅಡಿಕೆ ಧಾರಣೆ ಕೆಜಿಗೆ 150 ರೂಪಾಯಿಯಾಗಿತ್ತು. ಅಡಿಕೆ ಕೃಷಿಕರು ಸೊಸೈಟಿಯಲ್ಲಿ ಅಡವಿಟ್ಟಿದ್ದ ಅಡಿಕೆ ಈಗ ಮಾರುಕಟ್ಟೆ ಪ್ರವೇಶಿಸಿರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಸೊಸೈಟಿಯಲ್ಲಿ ಇಟ್ಟಿದ್ದ ಅಡಿಕೆ ಹಾಳಾಗುವ ಭಯವಿರುವುದರಿಂದ ಮತ್ತು ಇನ್ನೂ ಕಾದಿಟ್ಟುಕೊಂಡರೆ ಬಡ್ಡಿ ಕಟ್ಟಲು ಕಷ್ಟವಾಗುವುದರಿಂದ ಅಡಿಕೆಯನ್ನು ಮಾರುಕಟ್ಟೆಗೆ ಬಿಡಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಅಡಿಕೆ ಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಮಾರುಕಟ್ಟೆವರೆಗೆ ಹೊತ್ತು ತಂದ ಅಡಿಕೆಯನ್ನು ಹಿಂದೆ ಕೊಂಡೊಯ್ಯಲೂ ಆಗದೆ, ಮಾರಲೂ ತೋಚದೆ ಡಿಕೆ ಬೆಳೆಗಾರರು ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ.
ಅಡಿಕೆ ಧಾರಣೆ ಕುಸಿದುದರಿಂದ ಮದುವೆ ಮುಂಜಿಗಳಿಲ್ಲ
ಅಡಿಕೆ ಧಾರಣೆ ಕುಸಿತದಿಂದ ಈ ಬಾರಿಯ ಮದುವೆ ಸೀಸನ್ ಕೂಡ ಕಳೆಗುಂದಿದೆ. ಕಳೆದ ವರ್ಷದವರೆಗೆ ಬುಕ್ಕಿಂಗ್ ವ್ಯವಸ್ಥೆ ಅನುಸರಿಸುತ್ತಿದ್ದ ಟ್ಯಾಕ್ಸಿ ಮಾಲಕರು ಈಗ ದಿನ ಖರ್ಚು ಗಳಿಸಿದರೆ ಸಾಕು ಎಂಬ ಸ್ಥಿತಿಗೆ ತಲುಪಿದ್ದಾರೆ. ಇನ್ನು ಒಂದು ತಿಂಗಳ ಅವಧಿಯಲ್ಲಿ ಅಡಿಕೆ ಧಾರಣೆ ಹೆಚ್ಚಾಗುವ ಯಾವ ಸೂಚನೆಯೂ ಕಾಣಿಸುತ್ತಿಲ್ಲ. ಪರಿಣಾಮವಾಗಿ ಯಾವ ಯೋಜನೆಗಳನ್ನೂ ಕೈಗೆತ್ತಿಕೊಳ್ಳಲೂ ಬೆಳೆಗಾರರು ಹಿಂದೇಟು ಹಾಕುತ್ತಿದ್ದಾರೆ. ನಿರಾಶಾದಾಯಕ ಮಾರುಕಟ್ಟೆಯಿಂದಾಗಿ ಅಡಿಕೆ ಬೆಳೆಯನ್ನೇ ನೆಚ್ಚಿಕೊಂಡು ಬದುಕುತ್ತಿರುವವರ ಜೀವನ ಶೋಚನೀಯವಾಗಿದೆ. ದಕ್ಷಿಣ ಕನ್ನಡದ ಕೆಲವೆಡೆ, ಉತ್ತರ ಕನ್ನಡ, ಮತ್ತು ಉಡುಪಿ ಜಿಲ್ಲೆಗಳಲ್ಲಿನ ಅಡಿಕೆ ಬೆಳೆಗೆ ಬೇಡಿಕೆ ಇಲ್ಲದೆ, ಅಡಿಕೆ ಬೆಳೆಗಾರರ ಜೀವನ ನಿಂತ ನೀರಿನಂತಾಗಿದೆ.
(ಮಂಗಳೂರು ಪ್ರತಿನಿಧಿಯಿಂದ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...