ಸಣ್ಣ ಪತ್ರಿಕೆಗಳ ಹಿತ : ಪಿ. ರಾಮಯ್ಯ ವರದಿ ಸ್ವೀಕೃತ, ಶೀಘ್ರವೇ ಜಾರಿ
ಮಂಗಳೂರು : ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ಪಿ. ರಾಮಯ್ಯ ನೇತೃತ್ವದ ಅಧ್ಯಯನ ಸಮಿತಿಯ ಪ್ರಮುಖ ಶಿಫಾರಸುಗಳನ್ನು ಸರಕಾರ ಒಪ್ಪಿಕೊಂಡಿದ್ದು ಇದನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ರಾಜ್ಯದ ವಾರ್ತಾ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಮಂಗಳೂರು ವಿವಿಯ ಪತ್ರಿಕೋದ್ಯಮ ವಿಭಾಗವು ರಾಜ್ಯ ಸರಕಾರದ ವಾರ್ತಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ‘ಬದಲಾಗುತ್ತಿರುವ ಶಕದಲ್ಲಿ ವಾರ್ತಾ ಇಲಾಖೆಯ ಕಾರ್ಯಕ್ರಮಗಳು’ ಮತ್ತು ಆದ್ಯತೆಗಳ ಪುನರಾವಲೋಕನ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಮಯ್ಯ ವರದಿಯ ಕೆಲ ಅಂಶಗಳಿಗೆ ಸಂಬಂಧಿಸಿ ಹಣಕಾಸು ತೊಂದರೆ ಇದೆ. ಬರುವ ವರ್ಷದಿಂದ ವಿಶ್ವ ವಿದ್ಯಾಲಯಗಳ ನುರಿತ ಶಿಕ್ಷಕರು ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸರಕಾರದ ಕಾರ್ಯಕ್ರಮಗಳ ಬಗ್ಗೆ ಜನಾಭಿಪ್ರಾಯ ಪಡೆಯಲು ಕ್ಷೇತ್ರ ಹಾಗೂ ಕಾರ್ಯ ಆಧಾರಿತ ಸಂಶೋಧನೆಗೆ ವಾರ್ತಾ ಇಲಾಖೆಯಿಂದ ನಿಧಿಯನ್ನು ಒದಗಿಸುವ ಬಗ್ಗೆಯೂ ತಾವು ಯೋಚಿಸುತ್ತಿರುವುದಾಗಿ ಸಚಿವರು ಹೇಳಿದರು. ಮಾಹಿತಿ ಹಕ್ಕು ಕುರಿತ ಕಾಯ್ದೆಯ ಕರಡು ಸಿದ್ಧವಾಗಿದ್ದು ಇನ್ನೊಂದೆರಡು ತಿಂಗಳಲ್ಲಿ ಇದು ಜಾರಿಗೆ ಬರಲಿದೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪಿ. ರಾಮಯ್ಯ ಭಾಗವಹಿಸಿದ್ದರು. ವಿಶ್ವವಿದ್ಯಾಲಯದ ಉಪಕುಲಪತಿ ಎಸ್. ಗೋಪಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
(ಮಂಗಳೂರು ಪ್ರತಿನಿಧಿಯಿಂದ)