ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊಟಿಗೆ ಹೋಗೋಣ, ಬರುತ್ತೀರಾ?

By Oneindia Staff
|
Google Oneindia Kannada News

ಬಂದಿತಯ್ಯ ಬೇಸಿಗೆ, ತಾರಸಿಯ ಮೇಲೆ ಹಾಸಿಗೆ ಎಂದು ಬಾಲ್ಯದಲ್ಲಿ ಹಾಡುತ್ತಿದ್ದೆವು ನಾವು. ಶಿಮ್ಲಾ, ಕುಲು ಮನಾಲಿಗೆ ಹೋಗಲು ಹಣವಿಲ್ಲದಿದ್ದಾಗ, ಮನೆಯ ಮೇಲಿನ ತಾರಸಿಯೇ ಶಿಮ್ಲಾ, ಕುಲು, ಕಾಶ್ಮೀರ ಎಲ್ಲ. ಆದರೆ, ಉಳ್ಳವರಿಗೆ, ದಕ್ಷಿಣ ಭಾರತೀಯರಿಗೆ ಅದರಲ್ಲೂ ಬೆಂಗಳೂರು, ಮೈಸೂರು ಒಟ್ಟಾರೆ ಕರ್ನಾಟಕದವರಿಗೆ ಹತ್ತಿರದ ತಂಪುಧಾಮ ಉದಕಮಂಡಲ.

ಉದಕಮಂಡಲವೇ ಇದ್ಯಾವುದೀ ಹೊಸ ತಂಪುಧಾಮ ಎಂದಿರಾ? ಅದುವೇ ಊಟಿ. ಉದಕ ಮಂಡಲ ಅರ್ಥಾತ್‌ ಊಟಿ ದಕ್ಷಿಣ ಭಾರತದ ಹೆಸರಾಂತ ಗಿರಿಧಾಮ. ನೀಲಗಿರಿ ಬೆಟ್ಟ ಶ್ರೇಣಿಯಲ್ಲಿರುವ ಈ ತಾಣ ಸಮುದ್ರಮಟ್ಟದಿಂದ 7500 ಅಡಿಗಳಷ್ಟು ಎತ್ತರದಲ್ಲಿದೆ. ಪ್ರಾಕೃತಿಕ ಸೊಬಗಿನಿಂದ , ತಂಪು ಹವೆಯಿಂದ ಈ ತಾಣ ತನ್ನ ಬೇಸಿಗೆಯ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಗೆ ಸೇರಿದೆ.

ಬೆಂಗಳೂರಿಗೆ 298 ಕಿ.ಲೋ ಮೀಟರ್‌ ದೂರದಲ್ಲಿರುವ ಈ ತಂಪುಧಾಮ, ಮೈಸೂರಿಗೆ ಕೇವಲ 158 ಕಿ.ಮೀಟರ್‌ ಅಂತರದಲ್ಲಿದೆ. ಕೊಯಮತ್ತೂರಿನಿಂದ ಊಟಿಗೆ ರೈಲು ಸೌಲಭ್ಯವೂ ಇದೆ. ಬೆಂಗಳೂರು, ಮೈಸೂರೂ ಸೇರಿದಂತೆ ಕರ್ನಾಟಕದ ಕೆಲವು ಪ್ರಮುಖ ಪಟ್ಟಣಗಳಿಂದ ಬಸ್‌ ಸೌಕರ್ಯವೂ ಇದೆ. ನಿಮ್ಮ ಬಳಿ ಕಾರಿದ್ದರೆ, ಸರಿ ಇನ್ನೇಕೆ ತಡ ?

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ಇನ್ನಿತರ ಖಾಸಗಿ ಪ್ರವಾಸಿ ಸಂಸ್ಥೆಗಳ ಕಂಡೆಕ್ಟೆಡ್‌ ಟೂರ್‌ ವ್ಯವಸ್ಥೆಯೂ ಇದೆ. ಬೆಂಗಳೂರಿನಿಂದ ಊಟಿಯವರೆಗೆ ರಸ್ತೆಯೂ ಪರವಾಗಿಲ್ಲ. ಮೆಟ್ಟುಪಾಳ್ಯಂನಿಂದ ಊಟಿವರೆಗಿನ ರಸ್ತೆ ಚೆನ್ನಾಗಿದೆ. ಬೆಂಗಳೂರು, ಚೆನ್ನೈ, ಮುಂಬೈ, ಕೊಚ್ಚಿನ್‌ನಿಂದ ಕೊಯಮತ್ತೂರಿಗೆ ವಿಮಾನದಲ್ಲೂ ಹೋಗಬಹುದು. ಅಲ್ಲಿಂದ ಊಟಿಗೆ 88 ಕಿ.ಮೀ. ಮೆಟ್ಟುಪಾಳ್ಯಂನಿಂದ ಟಾಯ್‌ ಟ್ರೆೃನ್‌ ಸೌಲಭ್ಯವೂ ಇದೆ.

ಬಟಾನಿಕಲ್‌ ಗಾರ್ಡನ್‌ : ಊಟಿ ಎಂದೊಡನೆ ಮೊದಲು ನೆನಪಾಗುವುದು ಬಟಾನಿಕಲ್‌ ಗಾರ್ಡನ್‌, ಭಾರತಕ್ಕೆ ಸ್ವಾತಂತ್ರ್ಯ ದೊರಕುವ 100 ವರ್ಷಗಳ ಮೊದಲು ಅಂದರೆ 1847ರಲ್ಲೇ ನಿರ್ಮಿಸಲಾದ ಈ ಉದ್ಯಾನಕ್ಕೆ ಸುದೀರ್ಘ ಇತಿಹಾಸವಿದೆ. ಹಲವು ಬಗೆಯ ಅಲಂಕಾರಿಕ ಸಸ್ಯಗಳು, ಅಪರೂಪದ ಮರ-ಗಿಡಗಳು ಮಿಗಿಲಾಗಿ ಸುಂದರ ನಿರ್ವಹಣೆಯಿಂದ ಈ ಉದ್ಯಾನ ನೋಡುಗರ ಮನಸೆಳೆಯುತ್ತದೆ.

ಈ ಉದ್ಯಾನದಲ್ಲಿ ಸುಮಾರು 2 ಕೋಟಿ ವರ್ಷಗಳಷ್ಟು ಹಿಂದಿನ ವೃಕ್ಷದ ಅವಶೇಷ - ಪಳೆಯುಳಿಕೆ ಇದೆ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆಯುವಂತೆಯೇ ಇಲ್ಲೂ ಕೂಡ ಪ್ರತಿವರ್ಷ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಲಾಲ್‌ಬಾಗ್‌ನಲ್ಲಿ ಕೆರೆಯಿರುವಂತೆ ಇಲ್ಲೂ ಕೂಡ ಒಂದು ಸರೋವರವಿದೆ. ಆದರೆ ಇದು ಕೃತಕ ಸರೋವರ. 1824ರಲ್ಲಿ ಈ ಸರೋವರ ನಿರ್ಮಾಣವಾಯಿತು.

ಊಟಿ ಒಂದರ್ಥದಲ್ಲಿ ಮಧುಚಂದ್ರ ನಗರಿ. ದಕ್ಷಿಣ ಭಾರತೀಯರು ಮದುವೆಯಾದೊಡನೆ, ಮಧುಚಂದ್ರಕ್ಕೆ ಹೋಗುವ ಯೋಚನೆ ಮಾಡುತ್ತಿದ್ದಂತೆಯೇ ಮೊದಲು ಹೊಳೆವ ಹೆಸರು ಊಟಿಯದು. ನಂತರದ ಹೆಸರು ಕೊಡೈಕೆನಾಲ್‌, ಕೆಮ್ಮಣ್ಣುಗುಂಡಿ ಇತ್ಯಾದಿ...

ಈ ಮಧುಚಂದ್ರ ನಗರಿಯಲ್ಲಿ ಅತ್ಯಂತ ಹಳೆಯ ಸೇಂಟ್‌ ಸ್ಟೀಫನ್‌ ಚರ್ಚ್‌, ಪುಟಾಣಿ ರೈಲು, ಕುದುರೆ ಸವಾರಿ, ದೋಣಿ ವಿಹಾರಗಳೂ ಉಂಟು. ಹೀಗಾಗೇ ಈ ತಾಣಕ್ಕೆ ಸಕುಟುಂಬ ಪರಿವಾರ ಸಮೇತರಾಗಿ ಬರುವವರೂ ಉಂಟು. ಬೇಸಿಗೆಯಲ್ಲಿ ಇಲ್ಲಿ ಹೊಟೆಲ್‌ಗಳು ತುಸು ದುಬಾರಿ.

ಊಟಿಯ ಸುತ್ತ : ಊಟಿಯ ಸುತ್ತ ನೋಡಬೇಕಾದ ಹತ್ತಾರು ಪ್ರೇಕ್ಷಣೀಯ ಸ್ಥಳಗಳಿವೆ. ಕ್ಯಾಟಿ ವ್ಯಾಲಿ, ಕೂನೂರು, ದೊಡ್ಡ ಬೆಟ್ಟ, ಕಾಲಹಟ್ಟಿ ಜಲಪಾತ, ಲೇಕ್‌ ಗಾರ್ಡನ್‌, ವೆನ್‌ಲಾಕ್‌ ಡೌನ್‌, ಎಲ್ಕ್‌ ಹಿಲ್ಸ್‌, ಮುಡು ಮಲೈ ಇತ್ಯಾದಿ.

ಕೂನೂರು: ಊಟಿಗೆ 30 ಕಿ.ಮೀಟರ್‌ ದೂರದಲ್ಲಿರುವ ಕೂನೂರು ಸಹ ಒಂದು ಗಿರಿಧಾಮ. ಊಟಿಯಿಂದ ಕೂನೂರಿಗೆ ಬೆಳಗ್ಗೆಯಿಂದ ಸಂಜೆಯವರೆಗೂ ಬಸ್‌ ಸೌಲಭ್ಯ ಇದೆ.

ಕ್ಯಾಟಿವ್ಯಾಲಿ : ಊಟಿಗೆ ಕೇವಲ 8 ಕಿ.ಮೀಟರ್‌ ದೂರದಲ್ಲಿರುವ ಕ್ಯಾಟಿವ್ಯಾಲಿ ಕೂನೂರಿಗೆ ಹೋಗುವ ಮಾರ್ಗದಲ್ಲೇ ಸಿಗುತ್ತದೆ. ಸೂಜಿ ತಯಾರಿಕೆ ನೋಡಬೇಕೆಂಬ ಆಸೆಯಿದ್ದರೆ ಇಲ್ಲಿಗೆ ಭೇಟಿ ನೀಡಬಹುದು.

ಕಾಲಹಟ್ಟಿ ಜಲಪಾತ : 36 ಮೀಟರ್‌ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತ ಮನಸೂರೆಗೊಳ್ಳುತ್ತದೆ. ಊಟಿಗೆ 14 ಕಿ.ಮೀಟರ್‌ ದೂರದಲ್ಲಿರುವ ಈ ಜಲಧಾರೆಯ ತಾಣ ನೋಡಲು 3 ಕಿ.ಮೀಟರ್‌ ನಡೆದೇ ಹೋಗಬೇಕು. ಕಾಲಹಟ್ಟಿ ಗ್ರಾಮದವರೆಗೆ ಮಾತ್ರ ಬಸ್‌ ಸೌಕರ್ಯ ಇದೆ.

ದ ೊಡ್ಡಬೆಟ್ಟ : ನೀಲಗಿರಿ ಪರ್ವತ ಶ್ರೇಣಿಯ ಅತ್ಯಂತ ದೊಡ್ಡ ಹಾಗೂ ಎತ್ತರದ ಬೆಟ್ಟ ಇದು. ಹೀಗಾಗೇ ಇದಕ್ಕೆ ದೊಡ್ಡ ಬೆಟ್ಟ ಎಂಬ ಹೆಸರು. ಊಟಿಯಿಂದ ಇಲ್ಲಿಗೆ 10 ಕಿ.ಮೀ. ಈ ಬೆಟ್ಟದ ಮೇಲಿನಿಂದ ಇಡೀ ನೀಲಗಿರಿ ಪರ್ವತವನ್ನೇ ಕಾಣಬಹುದು. ದೂರದ ಸುಂದರ ಪ್ರಕೃತಿಯ ಕಾಣಲು ದೂರದರ್ಶಕವೂ ಇಲ್ಲುಂಟು.

ಮುಡುಮಲೈ : ಮುಡುಮಲೈ ಒಂದು ಅಭಯಾರಣ್ಯ. ಊಟಿಗೆ 64 ಕಿ.ಮೀಟರ್‌ ದೂರದಲ್ಲಿರುವ ಈ ಅರಣ್ಯ ಪ್ರದೇಶದಲ್ಲಿ ತಂಗಲೂ ವ್ಯವಸ್ಥೆ ಇದೆ. ಕಾಡಿನ ಬದುಕು ನೋಡುವ ಉತ್ಸಕತೆಯುಳ್ಳವರಿಗೆ, ಪರಿಸರ ಪ್ರೇಮಿಗಳಿಗೆ ಇದು ಸಂದರ - ಅತಿ ಸುಂದರ ತಾಣ. ಆನೆಯ ಮೇಲೆ ಕುಳಿತು ಸವಾರಿ ಮಾಡುತ್ತಾ ಕಾಡಿನಲ್ಲಿ ಓಡಾಡಿ ವನದೇವಿಯ ಸೊಬಗನ್ನು ಕಣ್ಣಾರೆ ಕಾಣಲು ಆಸೆಯಿದ್ದರೆ ಇಲ್ಲಿಗೆ ಹೋಗಲೇಬೇಕು.

ಇಷ್ಟೆಲ್ಲಾ ಪ್ರದೇಶಗಳ ನಡುವೆಯೂ ಕೇಂದ್ರ ಬಿಂದುವಾಗಿರುವ ಊಟಿಯ ರಮಣೀಯತೆಯೇ ಬೇರೆ. ಊಟಿ ಬೇಸಿಗೆಯ ಕಳೆಯಲು ಅತ್ಯಂತ ಆಹ್ಲಾದಕರ ಹಾಗೂ ರಮಣೀಯ ಜಾಗ. ಇಲ್ಲಿ ಪ್ರಮುಖ ಸಂಸ್ಥೆಗಳ ಮಾರಾಟ ಮಳಿಗೆಗಳೂ ಇವೆ.

ವಸತಿ : ಮಯೂರ ಸುದರ್ಶನ್‌, ಯೂಥ್‌ ಹಾಸ್ಟಲ್‌, ಫರ್ನ್‌ಹಿಲ್‌ ಪ್ಯಾಲೇಸ್‌, ಉಡ್‌ಲ್ಯಾಂಡ್ಸ್‌, ಕೋ ಆಪರೇಟಿವ್‌ ಗೆಸ್ಟ್‌ ಹೌಸ್‌ ಮೊದಲಾದ ವಸತಿಗೃಹಗಳೂ ಇಲ್ಲಿವೆ. ಕೊಯಮತ್ತೂರಿನವರೆಗೆ ನೀಲಗಿರಿ ಎಕ್ಸ್‌ಪ್ರೆಸ್‌, ಕೋವಲನ್‌ ಎಕ್ಸ್‌ಪ್ರೆಸ್‌, ಚೆರಿಯನ್‌ ಎಕ್ಸ್‌ಪ್ರೆಸ್‌, ಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಳ ನೆರವನ್ನೂ ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X