ಸಂತ್ರಸ್ತರಿಗಾಗಿ ಷಾರ್ಜಾದಲ್ಲಿ ಆಡುವುದು ಅಗತ್ಯವಿಲ್ಲ - ಉಮಾಭಾರತಿ
ಮಧುರೈ : ಭೂಕಂಪ ಸಂತ್ರಸ್ತರಿಗೆ ನಿಧಿ ಸಂಗ್ರಹಿಸುವ ಉದ್ದೇಶದ ಷಾರ್ಜಾ ತ್ರಿಕೋಣ ಕ್ರಿಕೆಟ್ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡ ಭಾಗವಹಿಸುವ ಪ್ರಸ್ತಾವನೆಯನ್ನು ಕೇಂದ್ರ ಕ್ರೀಡಾ ಸಚಿವೆ ಉಮಾ ಭಾರತಿ ತಿರಸ್ಕರಿಸಿದ್ದಾರೆ.
ಫೆಬ್ರವರಿ 8 ರಂದು ಪ್ರಾರಂಭವಾಗುವ ಟೂರ್ನಿಯಲ್ಲಿ ಭಾಗವಹಿಸಲು ಭಾರತ ಸರ್ಕಾರ ಸಮ್ಮತಿ ನೀಡಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯವಂತ ಲೆಲೆ ಶುಕ್ರವಾರವಷ್ಟೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಪ್ರಕಟವಾದ 24 ಗಂಟೆಗಳೊಳಗೆ ಪ್ರತಿಕ್ರಿಯೆ ನೀಡಿರುವ ಉಮಾ ಭಾರತಿ, ಸಂತ್ರಸ್ತರಿಗೆ ನೆರವು ನೀಡಲು ಭಾರತ ತಂಡ, ಷಾರ್ಜಾ ಸೇರಿದಂತೆ ಜಗತ್ತಿನ ಯಾವುದೇ ಮೂಲೆಯಲ್ಲಿ ಆಡುವ ಅಗತ್ಯವಿಲ್ಲ ಎಂದಿದ್ದಾರೆ.
ಟೂರ್ನಿಯಿಂದ 20 ಕೋಟಿ ರುಪಾಯಿ ಸಂಗ್ರಹಿಸುವ ಬಿಸಿಸಿಐ ಉದ್ದೇಶ ಒಳ್ಳೆಯದೇ. ಆದರೆ, ಚಲನಚಿತ್ರ ನಟರು ಹಾಗೂ ಕ್ರಿಕೆಟಿಗರ ನಡುವೆ ಭಾರತದಲ್ಲಿಯೇ ಪಂದ್ಯಗಳನ್ನು ನಡೆಸಿದರೆ, 200 ಕೋಟಿಗಿಂತಲೂ ಹೆಚ್ಚು ಹಣ ಸಂಗ್ರಹಿಸಬಹುದು ಎಂದು ಸಚಿವೆ ಹೇಳಿದ್ದಾರೆ. ಭಾರತ ತಂಡಕ್ಕೆ ಷಾರ್ಜಾ ಟೂರ್ನಿಯಲ್ಲಿ ಭಾಗವಹಿಸಲು ಅನುಮತಿ ನೀಡುವ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸುವ ಅಗತ್ಯವೇ ಇಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಗಂಗೂಲಿ, ತೆಂಡೂಲ್ಕರ್, ಹೃತಿಕ್ ರೋಷನ್ ಒಳಗೊಂಡ ತಂಡಗಳ ನಡುವೆ ದೇಶದ ವಿವಿಧ ಭಾಗಗಳಲ್ಲಿ ಪಂದ್ಯಗಳನ್ನು ನಡೆಸುವಂತೆ ಸಲಹೆ ನೀಡಿರುವ ಉಮಾಭಾರತಿ- ಭಾರತೀಯರು ಉದಾರಿಗಳು, ದೇಶದ ಹೊರಗಡೆ ನಡೆಯುವ ಪಂದ್ಯಗಳಿಗಿಂತ ದೇಶದೊಳಗಡೆಯ ಪಂದ್ಯಗಳಿಂದಲೇ ಹೆಚ್ಚು ಹಣ ಸಂಗ್ರಹಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. (ಇನ್ಫೋ ವಾರ್ತೆ)