ಎಸ್ಟಿಎಫ್- ವೀರಪ್ಪನ್ ಸಹಚರರ ಮುಖಾಮುಖಿ - ದಿನಕರ್
ಬೆಂಗಳೂರು : ವೀರಪ್ಪನ್ ಸಹಚರರು ಹಾಗೂ ತಮಿಳುನಾಡು ವಿಶೇಷ ಕಾರ್ಯಾಚರಣೆ ಪಡೆಯ ನಡುವೆ ತಮಿಳುನಾಡು- ಕೇರಳ ಗಡಿಭಾಗದ ಸಾಮಂತಿ ಬೆಟ್ಟ ಪ್ರದೇಶದಲ್ಲಿ ನೇರ ಗುಂಡಿನ ಚಕಮಕಿ ಏರ್ಪಟ್ಟಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್ ಹೇಳಿದ್ದಾರೆ.
ಎಸ್ಟಿಎಫ್ ಗುಂಡಿನ ದಾಳಿಯಿಂದ ವೀರಪ್ಪನ್ ಸಹಚರರು ತಬ್ಬಿಬ್ಬುಗೊಂಡು ದಿಕ್ಕಾಪಾಲಾಗಿ ಓಡಿದ್ದಾರೆ, ಎಸ್ಟಿಎಫ್ ಪಡೆ ಹೋರಾಟಕ್ಕೆ ತುದಿಗಾಲಲ್ಲಿ ನಿಂತಿದೆ ಎಂದು ದಿನಕರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಶುಕ್ರವಾರ ಮಧ್ಯಾಹ್ನ ಕಾಡಿನಲ್ಲಿ ವೀರಪ್ಪನ್ ಶೋಧನೆಯಲ್ಲಿದ್ದ ಒಬ್ಬ ಇನ್ಸ್ಪೆಕ್ಟರ್ ಹಾಗೂ 11 ಕಾನ್ಸ್ಸ್ಟೇಬಲ್ಗಳ ತಮಿಳುನಾಡು ಎಸ್ಟಿಎಫ್ ತಂಡ, ವೀರಪ್ಪನ್ ಸಹಚರರ ತಂಡವನ್ನು ಕಂಡು ಗುಂಡಿನ ದಾಳಿ ಆರಂಭಿಸಿತು. ಪೊಲೀಸರು ಗುಂಡಿನ ದಾಳಿ ಆರಂಭಿಸಿದ ಕೂಡಲೇ, ಗಾಬರಿಗೊಂಡ ವೀರಪ್ಪನ್ ಸಹಚರರು ತಮ್ಮ ವಸ್ತುಗಳನ್ನು ಇದ್ದಲ್ಲಿಯೇ ಬಿಟ್ಟು ದಿಕ್ಕಾಪಾಲಾಗಿ ಚದುರಿದರು. ವೀರಪ್ಪನ್ ಸಹಚರರು ಬಿಟ್ಟುಹೋದ ಮೂರು ಲಕ್ಷ ರುಪಾಯಿ ನಗದು, ಒಂದು ಮೊಬೈಲ್ ಫೋನ್ ಹಾಗೂ ಚಾರ್ಜರ್ ಮತ್ತು ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ದಿನಕರ್ ತಿಳಿಸಿದ್ದಾರೆ.
ರಾಜ್ ಬಿಡುಗಡೆಯ ನಂತರ ಪ್ರಾರಂಭವಾಗಿರುವ ವೀರಪ್ಪನ್ ಶಿಕಾರಿಯಲ್ಲಿ ಇದೇ ಮೊದಲ ಬಾರಿಗೆ ವೀರಪ್ಪನ್ ತಂಡದೊಂದಿಗೆ ಪೊಲೀಸರು ಮುಖಾಮುಖಿಯಾಗಿದ್ದಾರೆ. ಕರ್ನಾಟಕ ಎಸ್ಟಿಎಫ್ ಮುಖ್ಯಸ್ಥ ಹರ್ಷವರ್ಧನರಾಜು ಹೆಚ್ಚಿನ ಪಡೆಗಳೊಂದಿಗೆ ವೀರಪ್ಪನ್ ಸಹಚರರೊಂದಿಗೆ ಗುಂಡಿನ ಚಕಮಕಿ ನಡೆದ ಗಡಿಭಾಗಕ್ಕೆ ಧಾವಿಸಿದ್ದಾರೆಂದು ತಿಳಿಸಿರುವ ದಿನಕರ್, ವೀರಪ್ಪನ್ ಬಂಧನದ ಬಗ್ಗೆ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಪಾಲಕ್ಕಡ್ ವರದಿಯ ಪ್ರಕಾರ, ಕೇರಳ ಪಡೆಗಳು ಕೂಡ ವೀರಪ್ಪನ್ ಎನ್ಕೌಂಟರ್ಗಾಗಿ ಈಗಾಗಲೇ ಕಾರ್ಯೋನ್ಮುಖವಾಗಿರುವ ಪಡೆಗಳನ್ನು ಸೇರಿಕೊಳ್ಳಲು ಧಾವಿಸಿವೆ.
(ಯುಎನ್ಐ)
ವಾರ್ತಾಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ