ಕಂಪನದ ಹಿನ್ನೆಲೆ : ವರಮಾನ ತೆರಿಗೆಮೇಲೆ ಶೇ.2ರಷ್ಟು ಸರ್ಚಾರ್ಜ್
ನವದೆಹಲಿ : ಭೂಕಂಪದಿಂದ ಬಹುತೇಕ ನಾಶವಾಗಿರುವ ಗುಜರಾತ್ ರಾಜ್ಯದ ಪುನರ್ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುವ ನಿಟ್ಟಿನಲ್ಲಿ 60 ಸಾವಿರ ರುಪಾಯಿಗಿಂತ ಹೆಚ್ಚು ವಾರ್ಷಿಕ ಆದಾಯವಿರುವ ಪ್ರತಿಯಾಬ್ಬರ ವರಮಾನ ತೆರಿಗೆ ಮೇಲೆ ಶೇ.2ರಷ್ಟು ಸರ್ಚಾರ್ಜ್ ವಿಧಿಸಲು ಸರ್ಕಾರ ನಿರ್ಧರಿಸಿದೆ.
ಕಂಪನಿಗಳ ತೆರಿಗೆ ಪಾವತಿ ಮೇಲೂ ಈ ಸರ್ಚಾರ್ಜ್ ಅನ್ವಯವಾಗಲಿದೆ. ಸರ್ಚಾರ್ಜ್ ಸಂಗ್ರಹಣೆಯನ್ನು ಕಾನೂನಾತ್ಮಕಗೊಳಿಸಲು 'ತೆರಿಗೆ ಕಾನೂನು ತಿದ್ದುಪಡಿ ಕಾಯ್ದೆ- 2001"ನ್ನು ರೂಪಿಸಲೂ ಕೇಂದ್ರ ಸಚಿವ ಸಂಪುಟ ಗುರುವಾರ ರಾತ್ರಿ ನಿರ್ಧರಿಸಿದೆ. ಮುಂದಿನ ಸಂಸತ್ ಅಧಿವೇಶನದಲ್ಲಿ ಕಾಯ್ದೆ ರೂಪಿಸುವ ಕುರಿತ ಮಸೂದೆಯನ್ನು ಮಂಡಿಸಲಾಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್ ಮಹಾಜನ್ ತಿಳಿಸಿದರು.
ಸಂತ್ರಸ್ತರಿಗೆ ಕೊಡುವ ನೆರವಿನ ಮೊತ್ತಕ್ಕೆ ಶೇ.100ರಷ್ಟು ತೆರಿಗೆ ವಿನಾಯಿತಿ ನೀಡಲೂ ಸರ್ಕಾರ ನಿರ್ಧರಿಸಿದೆ. ಸರ್ಚಾರ್ಜ್ ಸಂಗ್ರಹಣೆಯಿಂದ ಒಟ್ಟು 1300 ಕೋಟಿ ರುಪಾಯಿ ಸಂಗ್ರಹವಾಗಲಿದ್ದು, ಅದನ್ನು ಗುಜರಾತ್ನ ಪುನರ್ ನಿರ್ಮಾಣ ಮತ್ತು ಸಂತ್ರಸ್ತರ ಪುನರ್ವಸತಿಗಾಗಿ ವಿನಿಯೋಗಿಸಲಾಗುವುದು ಎಂದು ಮಹಾಜನ್ ಹೇಳಿದರು.