ನೀರಾವರಿ ಯೋಜನೆಗಳಲ್ಲಿ ಆಂಧ್ರದ ಹಸ್ತಕ್ಷೇಪ ಸಹಿಸಲಾಗದು- ಪಾಟೀಲ್
ಬೆಂಗಳೂರು : ಕರ್ನಾಟಕದ ನೀರಾವರಿ ಯೋಜನೆಗಳಿಗೆ ಪದೇ ಪದೇ ತೊಡರುಗಾಲು ಹಾಕುತ್ತಿರುವ ಆಂಧ್ರಪ್ರದೇಶದ ವರ್ತನೆಯನ್ನು ನಿಲ್ಲಿಸಲು ಸೂಚಿಸುವಂತೆ ಹಾಗೂ ಆಂಧ್ರದೊಂದಿಗಿನ ನೀರಾವರಿ ವಿವಾದಗಳಲ್ಲಿ ಕೇಂದ್ರ ಮಧ್ಯ ಪ್ರವೇಶಿಸುವಂತೆ, ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸದ್ಯದಲ್ಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿದ್ದಾರೆ ಎಂದು ಭಾರೀ ಮತ್ತು ಮಧ್ಯಮ ನೀರಾವರಿ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಆಂಧ್ರಪ್ರದೇಶದ ವರ್ತನೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಫಲವಾದಲ್ಲಿ ನಾವು ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕಾಗುತ್ತದೆ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪಾಟೀಲ್ ಹೇಳಿದರು. ಕೃಷ್ಣಾ ಹೆಚ್ಚುವರಿ ನೀರಿನ ಬಳಕೆ ಸೇರಿದಂತೆ 5 ನೀರಾವರಿ ಯೋಜನೆಗಳಲ್ಲಿ ಉದ್ದೇಶಪೂರ್ವಕವಾಗಿ ಆಂಧ್ರ ಮೂಗು ತೂರಿಸುತ್ತಿದೆ. ಈ ನಡವಳಿಕೆಯನ್ನು ಮುಂದುವರಿಸಿದಲ್ಲಿ ನಾವು ಸುಪ್ರಿಂಕೋರ್ಟ್ ಮೊರೆ ಹೋಗುವುದು ಅನಿವಾರ್ಯವಾದೀತು ಎಂದು ಅವರು ಎಚ್ಚರಿಸಿದರು.
ಕಳೆದ ವರ್ಷ ಏಪ್ರಿಲ್ 25 ರಂದು ಸುಪ್ರಿಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಯಾವುದೇ ಶಾಶ್ವತ ಭಾರೀ ಕಾಮಗಾರಿಗಳನ್ನು ನಿರ್ಮಿಸುವಂತಿಲ್ಲ . ಇಂಥಾ ಯೋಜನೆಗಳಿಗೆ ಅನುಮತಿ ಕೊಡುವಾಗ ಈ ಆದೇಶವನ್ನು ಪರಿಗಣಿಸುವಂತೆ ಅಪೆಕ್ಸ್ ಕೋರ್ಟ್ ಕೂಡ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು . ಸುಪ್ರಿಂಕೋರ್ಟ್ನ ಆದೇಶವನ್ನು ಪಾಲಿಸುವುದು ಎಲ್ಲಾ ರಾಜ್ಯ ಸರ್ಕಾರಗಳ ಕರ್ತವ್ಯ. ಆದ್ದರಿಂದ ಕೋರ್ಟ್ನ ಆದೇಶ ಜಾರಿಯಾಗಿದೆಯೆ ಅನ್ನುವುದನ್ನು ಕೇಂದ್ರ ಸರ್ಕಾರ ಪರಿಶೀಲಿಸಬೇಕು ಎಂದು ಪಾಟೀಲ್ ಒತ್ತಾಯಿಸಿದರು.
(ಯುಎನ್ಐ)