ಮಕ್ಕಳಿಗೆ ಹೋಂವರ್ಕ್ ಕೊಡೋದನ್ನ ನಿಲ್ಲಿಸಿ : ರಮಾದೇವಿ
ಬೆಂಗಳೂರು : ಶಾಲಾ ಮಕ್ಕಳಿಗೆ ಹೋಂವರ್ಕ್ ಕೊಡದಿರುವುದೇ ಸೂಕ್ತ ಎಂದು ರಾಜ್ಯಪಾಲರಾದ ವಿ.ಎಸ್.ರಮಾದೇವಿ ಭಾನುವಾರ ಸಲಹೆ ಕೊಟ್ಟಿದ್ದಾರೆ.
ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರೌಢಶಾಲಾ ವಜ್ರ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತಾಡುತ್ತಿದ್ದರು. ಶಿಕ್ಷಕರು ಹೋಂವರ್ಕ್ ಕೊಡುತ್ತಾರೆ. ಅದನ್ನು ಮಕ್ಕಳ ಪೋಷಕರೇ ಮಾಡಿಸಬೇಕಲ್ಲವೇ? ಎಷ್ಟೋ ಸಂದರ್ಭಗಳಲ್ಲಿ ಅಪ್ಪ ಅಮ್ಮಂದಿರೇ ತಮ್ಮ ಮಕ್ಕಳ ಹೋಂವರ್ಕ್ ಮಾಡಿಕೊಡುತ್ತಾರೆ. ಅವರು ಬ್ಯುಸಿಯಾದರೆ, ಹೋಂವರ್ಕ ಮಾಡಿಸಲೇ ಪ್ರತ್ಯೇಕ ಶಿಕ್ಷಕರನ್ನು ನೇಮಿಸುವ ಪ್ರಸಂಗಗಳೂ ಇಲ್ಲದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳ ಮೇಲೆ ಅನಗತ್ಯ ಹೋಂವರ್ಕ್ ಹೊರೆ ಯಾಕೆ ಹೊರಿಸಬೇಕು ಎಂದು ರಮಾದೇವಿ ಪ್ರಶ್ನಿಸಿದರು.
ಕೇವಲ ಪರ್ಸೆಂಟೇಜು ತೆಗೆಯೋದು, ರ್ಯಾಂಕು ಗಿಟ್ಟಿಸೋದೇ ಮೌಲ್ಯಾಧಾರಿತ ಶಿಕ್ಷಣ ಅಲ್ಲ. ಮಕ್ಕಳಲ್ಲಿ ಮನುಷ್ಯತ್ವ ತುಂಬಿ, ಉತ್ತಮ ನಾಗರಿಕರನ್ನಾಗಿಸಿ, ಮಾನವೀಯ ಮೌಲ್ಯಗಳನ್ನು ಬಿತ್ತುವುದೇ ಮೌಲ್ಯಾಧಾರಿತ ಶಿಕ್ಷಣ. ಬೆಳಗ್ಗೆ ಹೊತ್ತು ಹುಟ್ಟುತ್ತಿದ್ದಂತೆಯೇ ಮಕ್ಕಳು ಶಾಲೆಗೆ ಹೋಗೋ ಪ್ರಸಂಗಗಳಿವೆ. 8 ಗಂಟೆ ಹೊ-ತ್ತಿಗೇ ಶುರುವಾಗುವ ಶಾಲೆಗೆ ಹೋಗೋ ಹರೀಬರಿಯಲ್ಲಿ ಮಕ್ಕಳಿಗೆ ಸರಿಯಾಗಿ ತಿಂಡಿ ತಿನ್ನಲೂ ವ್ಯವಧಾನ ಇರೋದಿಲ್ಲ. ಮಕ್ಕಳ ದೈಹಿಕ ಅಭಿವೃದ್ಧಿಗೂ ಶಿಕ್ಷಣ ಸಂಸ್ಥೆಗಳು ಗಮನ ಹರಿಸಬೇಕಿದೆ ಎಂದರು.
ಮಕ್ಕಳ ಶಿಕ್ಷಣ ವೆಚ್ಚವನ್ನು ವರದಕ್ಷಿಣೆ ಮೂಲಕ ವಾಪಸ್ಸು ಪಡೆಯುವ ದುರಾಲೋಚನೆಯನ್ನು ನಮ್ಮ ಜನ ಬಿಡಬೇಕು. ಶಿಕ್ಷಕರೂ ಮಕ್ಕಳಿಗಿಂತ ಬುದ್ಧಿವಂತರಾಗಬೇಕು. ಪಾಠ ಕೇಳುವಾಗ ಮಕ್ಕಳು ಆಕಳಿಸಿದರೆ ಅದಕ್ಕೆ ಶಿಕ್ಷಕರೇ ಹೊಣೆ. ರ್ಯಾಂಕ್ ಪಿಡುಗಿನ ಕಾರಣ ನಗರ ಪ್ರದೇಶದ ಮಕ್ಕಳು ಮಾನಸಿಕ ಒತ್ತಡದಲ್ಲಿರುತ್ತಾರೆ. ಈ ಬಗೆಗೆ -ಅಧ್ಯಯನ ನಡೆಸುವಂತೆ ಕೇಂದ್ರ ಸರ್ಕಾರ ಪ್ರೊ.ಯಶ್ಪಾಲ್ ನೇತೃತ್ವದ ಸಮಿತಿ ರಚಿಸಿತ್ತು. ಮಕ್ಕಳು ಪ್ರತಿ ನಿತ್ಯ 4-5 ಪುಸ್ತಕಗಳನ್ನು ಮಾತ್ರ ಶಾಲೆಗೆ ಒಯ್ಯಬೇಕು, ವಾರದಲ್ಲಿ 2 ದಿನ ಮಾತ್ರ ಹೋಂವರ್ಕ್ ಕೊಡಬೇಕೆಂದು ಸಮಿತಿ ಶಿಫಾರ್ಸಸು ಮಾಡಿದೆ ಎಂದು ಸಮಾರಂಭದಲ್ಲಿ ಮಾತನಾಡಿದ ವಾರ್ತಾ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ತಿಳಿಸಿದರು.
(ಇನ್ಫೋ ವಾರ್ತೆ)