ಬೆಂಗಳೂರಿನಲ್ಲಿ ಪ್ರತ್ಯೇಕ ದ್ರಾಕ್ಷಿ ಮಾರುಕಟ್ಟೆ
ಚೆನ್ನಪಟ್ಟಣ : ಸೂಕ್ತ ಬೆಲೆ ದೊರಕದೆ ಸೊರಗುತ್ತಿರುವ ದ್ರಾಕ್ಷಿ ಬೆಳೆಗೆ ಪ್ರೋತ್ಸಾಹ ನೀಡುವ ದೃಷ್ಠಿಯಿಂದ ಬೆಂಗಳೂರು ಹಾಪ್ ಕಾಮ್ಸ್ ಆವರಣದಲ್ಲಿ ಪ್ರತ್ಯೇಕ ದ್ರಾಕ್ಷಿ ಮಾರಾಟ ಕೇಂದ್ರವನ್ನು ತೆರೆಯಲಾಗುವುದು ಎಂದು ರಾಜ್ಯ ಹಾಪ್ ಕಾಮ್ಸ್ ಮಳಿಗೆಗಳ ಘಟಕಾಧ್ಯಕ್ಷ ಎಂ. ಬಾಬು ಹೇಳಿದ್ದಾರೆ.
ಪ್ರತ್ಯೇಕ ಮಳಿಗೆಯನ್ನು ಆರಂಭಿಸುವುದರಿಂದ ದ್ರಾಕ್ಷಿ ಮಾರುಕಟ್ಟೆ ಸುಧಾರಿಸಿಕೊಳ್ಳಬಹುದು ಎಂಬ ನಿರೀಕ್ಷೆಯಾಂದಿಗೆ ಮಾರಾಟ ಮಳಿಗೆಯನ್ನು ಆರಂಭಿಸಲಾಗುವುದು. ಅಲ್ಲದೆ ಚಿತ್ರದುರ್ಗ , ತುಮಕೂರು, ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಅ-ವ-ರು ಹೇಳಿದರು.
ಅವರು ರಾಮನಗರದ ಪ್ರಮುಖ ರೇಷ್ಮೆ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ವಹಿವಾಟು ಪರಿಶೀಲಿಸಿ ನಂತರ ಮಾತನಾಡುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಿರುವ ರೈತರ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಅವರಿಗೆ ಸೂಕ್ತ ಸವಲತ್ತುಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು. ಹಾಪ್ ಕಾಮ್ಸ್ ರಾಜ್ಯ ವಿಸ್ತರಣಾಧಿಕಾರಿ ಶ್ರೀನಿವಾಸ್ ಮೂರ್ತಿ ಕೂಡ ಬಾಬು ಅವರ ಜೊತೆಯಲ್ಲಿದ್ದರು.(ಇನ್ಫೋ ವಾರ್ತೆ)