ಅಜ್ಜಿಯ ಮೈಯಂತೆ ಸುಕ್ಕುಗಟ್ಟಿದೆ ಚರ್ಮ
ಬೆಂಗಳೂರು : ಕೊರೆಯುವ ಚಳಿಗೆ ಅಜ್ಜಿಯ ಮೈಯಂತೆ ಚರ್ಮವೆಲ್ಲಾ ಸುಕ್ಕುಗಟ್ಟುತ್ತಿದೆ. ಬೂದು ಬಣ್ಣಕ್ಕೆ ತಿರುಗಿರುವ ಮೈ ಒಡೆದಿದೆ. ಮಾಗಿಯ ಚಳಿಯ ಕೊರೆತಕ್ಕೆ ಸೊಗಡು ಅವರೆಕಾಯಿಯ ಸಾರು, ರೊಟ್ಟಿ , ಚುರುಮುರಿ ನಾಲಿಗೆಗೆ ಹಿತವಾಗಿ ತೋರಿದೆ. ತ್ವಚೆಯ ರಕ್ಷಿಸುವ ಪ್ರಸಾದನಗಳು, ಗ್ಲಿಸರಿನ್ಯುಕ್ತ ಸಾಬೂನುಗಳ ಮಾರಾಟ ಗರಿಗೆದರಿದೆ.
ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ಉತ್ತರ ಒಳನಾಡಿನ ಕೆಲವಡೆ ಕನಿಷ್ಠ ತಾಪಮಾನ ಏರಿದೆ. 9 ಡಿಗ್ರಿಗೆ ಇಳಿದಿದ್ದ ಗುಲ್ಬರ್ಗಾದ ತಾಪಮಾನದಲ್ಲೂ ಕೊಂಚ ಏರಿಕೆ ಕಂಡುಬಂದಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸ್ವಲ್ಪ ಬದಲಾವಣೆ ಕಂಡು ಬಂದಿದೆ. ಕರಾವಳಿಯಲ್ಲಿ ತಾಪಮಾನ ಸಾಮಾನ್ಯ ಮಟ್ಟಕ್ಕಿಂತಲೂ ಕಡಿಮೆಯಾಗಿತ್ತು.
ರಾಜ್ಯದ ಕನಿಷ್ಠ ತಾಪಮಾನ ಮತ್ತೆ ಗುಲ್ಬರ್ಗಾದಲ್ಲೇ ದಾಖಲಾಗಿದೆ. ಅಲ್ಲಿ 11.4ಡಿಗ್ರಿ ಸೆಲ್ಸಿಯಸ್ ಇತ್ತು. ಮುನ್ಸೂಚನೆಯ ರೀತ್ಯ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದ್ದು, ಹೆಚ್ಚಿನ ಬದಲಾವಣೆಗಳೇನೂ ಕಂಡು ಬರುವುದಿಲ್ಲ ಎನ್ನುತ್ತದೆ ಹವಾಮಾನ ವೀಕ್ಷಣಾಲಯದ ವರದಿ.
ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರ್ಮಲ ಆಕಾಶ ಇದ್ದು ಬೆಳಗಿನ ಜಾವ ಮಂಜು ಅಥವಾ ಇಬ್ಬನಿ ಸುರಿಯುತ್ತದೆ. ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ಗೆ ಇಳಿಯುವ ಸೂಚನೆಗಳಿವೆ.