ಡಿ.16 ರಿಂದ 25 : ಕರ್ನಾಟಕದಲ್ಲಿ ಟಿಬೆಟ್ ಧರ್ಮಗುರು ದಲೈ ಲಾಮಾ
ಬೆಂಗಳೂರು : ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರು ಡಿಸೆಂಬರ್ 16 ರಿಂದ 9 ದಿನಗಳ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದು, ರಾಜಧಾನಿ ಸೇರಿದಂತೆ ಮೈಸೂರು, ಕೊಳ್ಳೇಗಾಲ ಹಾಗೂ ಪಿರಿಯಾಪಟ್ಟಣಗಳಲ್ಲಿ ನಡೆವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಡಿಸೆಂಬರ್ 16 ರಂದು ತಿರುವನಂತಪುರದಿಂದ ಬೆಂಗಳೂರಿಗೆ ಆಗಮಿಸುವ ಅವರು, ಅಂತರರಾಷ್ಟ್ರೀಯ ಮಾನವೀಯ ಮೌಲ್ಯಗಳ ಸಂಘಟನೆ ಏರ್ಪಡಿಸಿರುವ ಏಕತಾ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವರು. ಬೌದ್ಧ ಹಾಗೂ ವೈದಿಕ ಸಂಪ್ರದಾಯಗಳನ್ನು ಬಿಂಬಿಸುವ ಏಕತಾ ಕಾರ್ಯಕ್ರಮದಲ್ಲಿ ಲಾಮಾ ಅವರೊಂದಿಗೆ ಆರ್ಟ್ ಆಫ್ ಲೀವಿಂಗ್ ಪೌಂಢೇಶನ್ ಸ್ಥಾಪಕ ರವಿಶಂಕರ್ ಭಾಗವಹಿಸುವರು. ಪೌಂಢೇಶನ್ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಕಾರ್ಯಕ್ರಮವನ್ನು ಕರುಣೆ ಹಾಗೂ ಪ್ರೀತೆಯೆಡೆಗಿನ ಪಯಣ ಎಂದು ಬಣ್ಣಿಸಲಾಗಿದೆ.
ತಮ್ಮ ಪ್ರವಾಸ ಕಾಲದಲ್ಲಿ ಟಿಬೆಟಿಯನ್ ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ಸಮುದಾಯವನ್ನು ಉದ್ದೇಶಿಸಿ ಲಾಮಾ ಮಾತನಾಡುವರು. ಭಾರತದಲ್ಲಿನ ಅಮೇರಿಕನ್ ವಾಣಿಜ್ಯ ಮಂಡಳಿಯನ್ನು ಉದ್ದೇಶಿಸಿಯೂ ಅವರು ಮಾತನಾಡುವರು ಹಾಗೂ ಬನ್ನೇರುಘಟ್ಟ ಸಮೀಪದಲ್ಲಿರುವ ಫೋಸಾ (ಎಫ್ಓಎಸ್ಎ) ಕಣ್ಣಿನ ಧರ್ಮಾಸ್ಪತ್ರೆಯನ್ನು ಉದ್ಘಾಟಿಸುವರು.
(ಯುಎನ್ಐ)