ಅಂಪೈರ್ ಮುಗುಮ್ಮಿಗೆ ಕೆಂಡ ಕಾರಿದ ಗಂಗೂಲಿ- ದಹಿಯಾ ವಿಚಾರಣೆ
ಕಾನ್ಪುರ : ಸೋಮವಾರ ಇಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪೆಪ್ಸಿ ಕಪ್ ನಾಲ್ಕನೇ ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅಂಪೈರ್ ತೀರ್ಪುಗಳ ವಿರುದ್ಧ ತೀವ್ರ ತೆರನಾಗಿ ಸೊಲ್ಲೆತ್ತಿದ ತಂಡದ ನಾಯಕ ಸೌರವ್ ಗಂಗೂಲಿ ಮತ್ತು ವಿಕೆಟ್ ಕೀಪರ್ ವಿಜಯ್ ದಹಿಯಾ ಅವರನ್ನು ಪಂದ್ಯದ ರೆಫ್ರಿ ಬ್ಯಾರಿ ಜರ್ಮನ್ ಮಂಗಳವಾರ ವಿಚಾರಣೆಗೆ ಕರೆದಿದ್ದಾರೆ.
ಜಿಂಬಾಬ್ವೆಯ ಲುಲೆಕಿ ಕಾಲಾ ಅವರ ವಿರುದ್ಧ ಒಂದೇ ಓವರ್ನಲ್ಲಿ ಹಲವಾರು ಬಾರಿ ಎಲ್ಬಿಡಬ್ಲ್ಯುಗೆ ಮನವಿ ಮಾಡಿದ ಗಂಗೂಲಿ ಸಾಕಷ್ಟು ಬಾರಿ ಕುಣಿದಾಡಿದರು. ದುರುಗುಟ್ಟಿ ನೋಡಿದರು. ಅಂಪೈರ್ ಬೆರಳೆತ್ತದ್ದೇ ಇದಕ್ಕೆ ಕಾರಣ. ಅಂಪೈರ್ ಕುರಿತು ಗಂಗೂಲಿ ಕೋಪದಿಂದ ಕೆಲ ಮಾತುಗಳನ್ನೂ ಆಡಿದರು.
ಮತ್ತೊಂದು ಘಟನೆಯಲ್ಲಿ, ಅಗರ್ಕರ್ ಬೌಲಿಂಗ್ನಲ್ಲಿ ಗ್ರಾಂಟ್ ಫ್ಲಾವರ್ ಬ್ಯಾಟಿಗೆ ಸವರಿಕೊಂಡು ಬಂದ ಚೆಂಡನ್ನು ಹಿಡಿದ ದಹಿಯಾ ಆತ್ಮವಿಶ್ವಾಸದ ಮನವಿ ಮಾಡಿದರು. ಅದಕ್ಕೂ ಅಂಪೈರ್ ಸ್ಪಂದಿಸಲಿಲ್ಲ. ಹಾಗಾಗಿ ದಹಿಯಾ ಕೂಡ ಅಂಪೈರ್ ಕುರಿತು ಕೋಪದಿಂದ ವರ್ತಿಸಿದರು.
ಈ ಅನುಚಿತ ವರ್ತನೆಯನ್ನು ಗಮನಿಸಿದ ಮ್ಯಾಚ್ ರೆಫ್ರಿ ಪಂದ್ಯ ಮುಗಿಯುತ್ತಿದ್ದಂತೆ ಸಿ-1, 2 ಹಾಗೂ 3ನೇ ವಿಧಿಯನ್ವಯ ಇಬ್ಬರಿಗೂ ನೋಟಿಸ್ ಕೊಟ್ಟರು. ಮಂಗಳವಾರ ಅವರನ್ನು ವಿಚಾರಣೆಗೆ ಕರೆದಿದ್ದು, ಅವರ ವಿರುದ್ಧ ಯಾವ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ತೀರ್ಮಾನಿಸಲಿದ್ದಾರೆ.
(ಇನ್ಫೋ ವಾರ್ತೆ)