ಬಿ.ಸಿ. ರಾಮಚಂದ್ರ ಶರ್ಮರಿಗೆ ಕೈಲಾಸಂ ಪ್ರಶಸ್ತಿ
ಬೆಂಗಳೂರು : ಗೊರೂರು ಪ್ರತಿಷ್ಠಾನ ನಾಡಿನ ಹಿರಿಯ ಸಾಹಿತಿ ಡಾ. ಬಿ.ಸಿ. ರಾಮಚಂದ್ರ ಶರ್ಮ ಅವರಿಗೆ 2000 ಸಾಲಿನ ಕೈಲಾಸಂ ಪ್ರಶಸ್ತಿ ಪ್ರಕಟಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 3ರ ಭಾನುವಾರ ಮಿಥಿಕ್ ಸೊಸೈಟಿಯಲ್ಲಿ ನಡೆಯಲಿದೆ.
1925ರ ನವೆಂಬರ್ 28ರಂದು ಜನಿಸಿದ ರಾಮಚಂದ್ರ ಶರ್ಮರಿಗೆ 75 ವರ್ಷ ತುಂಬಿರುವ ಸಂದರ್ಭದಲ್ಲಿ ಅಭಿನಂದನಾ ಸಮಾರಂಭವೂ ಜರುಗಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಶರ್ಮರ ಬಗ್ಗೆ : ಡಾ. ಬಿ.ಸಿ. ರಾಮಚಂದ್ರ ಶರ್ಮರ ಪೂರ್ಣ ಹೆಸರು, ಬೋಗಾದಿ ಚಂದ್ರಶೇಖರ ಶರ್ಮ ರಾಮಚಂದ್ರ ಶರ್ಮ. ಬೆಂಗಳೂರು, ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಇವರು, ಲಂಡನ್ನಲ್ಲಿ ಪಿಎಚ್ಡಿ ಪದವಿ ಪಡೆದರು. ಇಂಗ್ಲೆಂಡ್, ಇಥಿಯೋಫಿಯಾ, ಬೆಂಗಳೂರಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು, ಜಾಂಬಿಯಾ ಹಾಗೂ ಯುನೆಸ್ಕೋದಲ್ಲಿ ಮನಃಶಾಸ್ತ್ರಜ್ಞರಾಗಿಯೂ ದುಡಿದವರು.
ನವಪ್ರಜ್ಞೆಯ ಕವಿ ಎಂದೇ ಖ್ಯಾತರಾಗಿರುವ ಶರ್ಮರು, ಕತೆಗಾರರಾಗಿ, ನಾಟಕಕಾರಗಾಗಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಏಳುಸುತ್ತಿನ ಕೋಟೆ, ಹೃದಯಗೀತೆ, ಮಾತು ಮಾಟ, ಹೇಸರಗತ್ತೆ, ಮಂದಾರ ಕುಸುಮ, ಏಳನೆಯ ಜೀವ, ಕತೆಗಾರನ ಕತೆ, ಬಾಳ ಸಂಜೆ, ವೈತರಣಿ, ಈ ಶತಮಾನದ ನೂರು ಇಂಗ್ಲಿಷ್ ಕವನಗಳು ಮುಂತಾದ ಹಲವು ಕೃತಿಗಳನ್ನು ಶರ್ಮರು ರಚಿಸಿದ್ದಾರೆ.