ಭಾರತದ ಹೊಸ ಆರ್ಥಿಕತೆ ಉತ್ತಮವಾಗಿದೆ- ಜಾರ್ಜ್ ಯಾ ಅಭಿಮತ
ಬೆಂಗಳೂರು : ಭಾರತದ ಹೊಸ ಆರ್ಥಿಕತೆ ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಸಿಂಗಪುರದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಬ್ರಿಗೇಡಿಯರ್ ಜನರಲ್ ಜಾರ್ಜ್ ಯಾ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಬೆಂಗಳೂರಿಗೆ ಬಂದಿಳಿದ ನಿಯೋಗ ಇನ್ಫೋಸಿಸ್ ಸೇರಿದಂತೆ ವಿವಿಧ ಸಾಫ್ಟವೇರ್ ಕಂಪನಿಗಳಿಗೆ ಭೇಟಿ ನೀಡಿತು. ಐಟಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಸಿಂಗಪುರಗಳ ನಡುವಿನ ಸಂಬಂಧ ಇನ್ನಷ್ಟು ವ್ಯಾಪಕವಾಗಿ ಬೆಳೆಯಬೇಕು ಎಂದಿದ್ದಾರೆ.
ಗುದ್ದಲಿ ಪೂಜೆ : ಅಂತಾರಾಷ್ಟ್ರೀಯ ಟೆಕ್ನಾಲಜಿ ಪಾರ್ಕ್ ಲಿಮಿಟೆಡ್(ಐಟಿಪಿಎಲ್)ನ ಎರಡನೇ ಹಂತದ ಯೋಜನೆಯಲ್ಲಿ ಪಾಲ್ಗೊಳ್ಳಲು ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಿ ಬಂದಿರುವ ಯಾ ಅವರು ವೈಟ್ ಫೀಲ್ಡ್ ಹತ್ತಿರ ಬುಧವಾರ ಗುದ್ದಲಿ ಪೂಜೆ ಪ್ರಾರಂಭೋತ್ಸವದಲ್ಲಿ ಮಾತನಾಡುತ್ತಿದ್ದರು.
ಬೆಂಗಳೂರು ಮತ್ತು ಸಿಂಗಪುರ ನಡುವಿನ ಸಂಬಂಧಗಳಿಗೆ ಐಟಿಪಿಎಲ್ ಉತ್ತಮ ಕೊಂಡಿಯಾಗುವುದಲ್ಲದೆ ಐಟಿ ಕ್ಷೇತ್ರದಲ್ಲಿನ ವ್ಯಾಪ್ತಿ ವಿಸ್ತಾರವಾಗುವುದಲ್ಲದೆ ವೇಗವಾಗಿ ಹರಡಲು ಸಹಾಯಕವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
160 ಕೋಟಿ ವೆಚ್ಚ : ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕೃಷ್ಣ ಅವರು ಐಟಿ ಜೊತೆಗೆ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ಐಟಿ ಕ್ಷೇತ್ರದಲ್ಲಿ ಸಿಂಗಪುರಕ್ಕೆ ರಾಜ್ಯದ ಸಹಕಾರ ಮುಂದುವರಿಯಲಿದೆ. ರಾಜ್ಯದಲ್ಲಿ ಸಿಂಗಪುರ ಅಭಿವೃದ್ಧಿಪಡಿಸಿರುವ ಐಟಿಪಿಎಲ್ನಿಂದ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಸಂಕೇತ ಮಾತ್ರವಲ್ಲದೆ ಐಟಿ ಕ್ಷೇತ್ರದ ಹೊಂದಾಣಿಕೆಯ ದ್ಯೋತಕ ಎಂದರು. ಐಟಿ ಕ್ಷೇತ್ರಕ್ಕೆ ಉನ್ನತ ಮಟ್ಟದ ಸಂಪನ್ಮೂಲ ಒದಗಿಸುವ ಮೂಲಕ ರಾಜ್ಯವನ್ನು ಐಟಿ ವಲಯದ ಪ್ರಮುಖ ಶಕ್ತಿಯಾಗಿ ರೂಪಿಸಲು ಸರಕಾರ ಬದ್ಧವಾಗಿದೆ. ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಬರುವ ವರ್ಷ ಜನವರಿ 14ರಿಂದ 17ರವರೆಗೆ ಮೂರು ದಿನಗಳ ಕಾಲ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು ಎಂದು ಕೃಷ್ಣ ಹೇಳಿದ್ದಾರೆ.
160 ಕೋಟಿ ರುಪಾಯಿ ಅಂದಾಜು ವೆಚ್ಚದಲ್ಲಿ ಎರಡನೇ ಹಂತದ ನಿರ್ಮಾಣ 12ರಿಂದ 15 ತಿಂಗಳಲ್ಲಿ ಮುಗಿಯಲಿದೆ.