ಆಂಧ್ರಕ್ಕೆ ಇನಿಂಗ್ಸ್ ಮುನ್ನಡೆ, ಒತ್ತಡದಲ್ಲಿ ಕರ್ನಾಟಕ
ಬೆಳಗಾವಿ : ಮೊದಲ ಇನಿಂಗ್ಸ್ನಲ್ಲಿ ಅಮೂಲ್ಯ 56 ರನ್ಗಳ ಮುನ್ನಡೆಯನ್ನು ಪಡೆದಿರುವ ಆಂಧ್ರ ಪ್ರದೇಶ ತಂಡ, ಎರಡನೆ ದಿನದ ಕೊನೆಗೆ ತನ್ನ 2 ನೇ ಇನಿಂಗ್ಸ್ನಲ್ಲಿ 8 ವಿಕೆಟ್ ನಷ್ಟಕ್ಕೆ 189 ರನ್ ಗಳಿಸುವುದರೊಂದಿಗೆ ತನ್ನ ಮುನ್ನಡೆಯನ್ನು 245 ರನ್ಗಳಿಗೆ ಉಬ್ಬಿಸಿಕೊಂಡಿತ್ತು .
ಎಲ್.ಎನ್. ಪ್ರಸಾದ್ ರೆಡ್ಡಿ ಮತ್ತು ವೈ. ವೇಣುಗೋಪಾಲ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಆಂಧ್ರ ಎದುರಾಳಿಗಳಿಗೆ ಸವಾಲೆಸೆಯುವಂತಹ ಮೊತ್ತವನ್ನು ಎರಡನೆ ದಿನದ ಕೊನೆಗೆ ಸಂಪಾದಿಸಿದೆ. ಬೌಲರ್ಗಳಿಗೆ ಅನುಕೂಲವೆನಿಸಿರುವ ಹಾಗೂ ಬ್ಯಾಟ್ಸ್ಮನ್ಗಳಿಗೆ ನರಕವೆನಿಸಿರುವ ಪಿಚ್ನಲ್ಲಿ ಉತ್ತಮ ಆಟವಾಡಿದ ಇಬ್ಬರೂ ಬ್ಯಾಟ್ಸ್ಮನ್ಗಳು ಕರ್ನಾಟಕದ ಬೌಲರ್ಗಳಿಗೆ ಬೆವರಿಳಿಸಿದರು. ಪ್ರಸಾದ್ ರೆಡ್ಡಿ 6 ಬೌಂಡರಿಗಳಿದ್ದ 55 ರನ್ ಗಳಿಸಿದರೆ, ವೇಣುಗೋಪಾಲ್ ಅವರ 82 ರನ್ 13 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರನ್ನು ಒಳಗೊಂಡಿತ್ತು . ದಿನದ ಕೊನೆಗೆ 4 ರನ್ ಗಳಿಸಿರುವ ವಾಟೇಕರ್ ಮತ್ತು 2 ರನ್ ಗಳಿಸಿರುವ ರಂಗನಾಥ್ ಕ್ರೀಸ್ನಲ್ಲಿದ್ದರು. ಕರ್ನಾಟಕದ ಪರ ದೊಡ್ಡ ಗಣೇಶ್ ಮತ್ತು ಸಂತೋಷ್ ವಡೆಯರಾಜ್ ತಲಾ 3 ವಿಕೆಟ್ ಗಳಿಸಿದರೆ, ಮನ್ಸೂರ್ ಆಲಿಖಾನ್ ಉಳಿದ 2 ವಿಕೆಟ್ ಉರುಳಿಸಿದರು.
ಇದಕ್ಕೂ ಮುನ್ನ, ಮೊದಲನೆ ದಿನದ ಕೊನೆಗೆ 4 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದ್ದ ಕರ್ನಾಟಕ ತಂಡದ ಬ್ಯಾಟ್ಸ್ಮನ್ಗಳು ಗುರುವಾರದ ಆಟದಲ್ಲಿ ಆಂಧ್ರ ಬೌಲರ್ಗಳಿಗೆ ಪ್ರತಿರೋಧವನ್ನೇ ತೋರಲಿಲ್ಲ . ಲಂಚ್ ವಿರಾಮಕ್ಕೆ ಮುನ್ನ ಕೇವಲ 139 ರನ್ಗಳಿಗೆ ರಾಜ್ಯ ತಂಡ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ವಿಜಯ್ ಭಾರದ್ವಾಜ್ ಮತ್ತು ರಾಹುಲ್ ದ್ರಾವಿಡ್ ಅವರ ಕೊರತೆ ತಂಡದಲ್ಲಿ ಎದ್ದು ಕಾಣುತ್ತಿತ್ತು . ಕರ್ನಾಟಕದ ಬ್ಯಾಟ್ಸ್ಮನ್ಗಳಿಗೆ ಮಾರಕ ಎನಿಸಿದ ಆಂಧ್ರದ ವೇಗಿ ಕೆ.ಎಚ್. ಶಹಾಬುದ್ದೀನ್ 63 ರನ್ಗಳಿಗೆ 6 ಹುದ್ದರಿ ಕೆಡವಿದರು. ಸ್ಪಿನ್ನಿಗ ವಾಟೇಕರ್ 2 ವಿಕೆಟ್ ಉರುಳಿಸಿದರೆ, ಉಳಿದೆರಡು ವಿಕೆಟ್ಗಳನ್ನು ರಂಗನಾಥ್ ಮತ್ತು ರಾಮ್ ಮೋಹನ್ ಹಂಚಿಕೊಂಡರು.
ಈಗಾಗಲೇ 245 ರನ್ ಮುನ್ನಡೆಯಲ್ಲಿರುವ ಆಂಧ್ರ ತಂಡ ಮೂರನೇ ದಿನದ ಆಟದಲ್ಲಿ ತನ್ನ ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡು, ರಾಜ್ಯ ತಂಡದ ಮೇಲೆ ಒತ್ತಡ ಹೇರುವ ಪ್ರಯತ್ನದಲ್ಲಿದೆ. ಮೊದಲ ಇನಿಂಗ್ಸ್ ಮುನ್ನಡೆ ಬಿಟ್ಟು ಕೊಟ್ಟಿರುವ ಕರ್ನಾಟಕ ತಂಡ, ಫಲಿತಾಂಶ ಬಹುತೇಕ ನಿಚ್ಚಳವಾಗಿರುವ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳಲು ಪ್ರಬಲ ಹೋರಾಟ ನಡೆಸಬೇಕಿದೆ. ವಿಚಿತ್ರ ತಿರುವು ಪಡೆಯುತ್ತಿರುವ ಪಿಚ್ನಲ್ಲಿ ಹೋರಾಟ ಸುಲಭವೇನೂ ಅಲ್ಲ . (ಯುಎನ್ಐ)