ರಾಜ್ ಆಡಿದ ಮಾತುಗಳ ಪೂರ್ಣ ಪಾಠ ಇಲ್ಲಿದೆ.... (ಭಾಗ 3)
50 -60 ಜಾಗ ಬದಲಾಯಿಸಿದ್ದ: ಈ ಮೂರು ತಿಂಗಳ ಅವಧಿಯಲ್ಲಿ ವೀರಪ್ಪನ್ 50 -60 ಜಾಗ ಬದಲಾಯಿಸಿದ್ದ. ಅನುಕೂಲವಾದ ಕಡೆಗಳಲ್ಲೆಲ್ಲಾ 10 -12 ದಿನ ಇರುತ್ತಿದ್ವಿ. ದೇಹಾರೋಗ್ಯ ಕೆಟ್ಟಿತ್ತು. ಮಾನಸಿಕವಾಗಿ ದೈಹಿಕವಾಗಿ ತೊಂದರೆ ಆಯ್ತು.
ನಮ್ಮ ಗೋವಿಂದು. ನನ್ನ ದೊಡ್ಡ ಮಗಳ ಯಜಮಾನ. ಆವನಿಗೆ ಹಾರ್ಟ್ ತೊಂದರೆ, ಆ ಸಮಯಕ್ಕೆ ಸರಿಯಾಗಿ ನೆಡುಮಾರನ್ ಬಂದ್ರು. ನಾನು ಗೋವಿಂದರಾಜುನ ಬಿಡಿ ಅಂತ ಕೇಳಿಕೊಂಡೆ. ಬಿಟ್ರು. ನಾವು ನಿರಾಯಾಸವಾಗಿ ಉಸಿರು ಬಿಟ್ವಿ. ಅವನ ಬಿಡುಗಡೇನೂ ಆಯ್ತು. ಆದ್ರೆ ನಮ್ಮ ಬಿಡುಗಡೆ ಯಾವಾಗ ? ಅಂತೂ ತಿಂಗಳು ಗಟ್ಲೆ ಆಗಿ ಹೋಯ್ತು. ಮಾನ್ಯ ಮಂತ್ರಿಗಳಾದ ಖರ್ಗೆ ಅವರು ಹೇಗಾದ್ರು ಮಾಡಿ ನಮ್ಮನ್ನ ಬಿಡಿಸೋ ಹಠ ತೊಟ್ಟಿದ್ದು. ಭಗವಂತನ ದಯೆಯೂ ಇತ್ತು. ಅಂತೂ ಇಂತೂ ನಾವು ಬಂದೇ ಬಿಟ್ವಿ.
ನಕ್ಕೀರನ್ ಗೋಪಾಲ್ ಬಂದು ಬಂದು ಹೋಕ್ತಾ ಇದ್ರು : ನಕ್ಕೀರನ್ ಗೋಪಾಲ್ ಬಂದು ಬಂದು ಹೋಕ್ತಾ ಇದ್ರು. ಆದ್ರೆ ಆ ಡಾಕ್ಟ್ರಮ್ಮ , ಇನ್ನಿಬ್ಬರು ರಾಮಕುಮಾರ್, ಮಣಿ, ಒಂದು ಜಾಗಕ್ಕೆ ಬಂದ್ರು. ನಾನು ಮಲಗಿದ್ದೆ. ಅವಾಗ ಮಧ್ಯಾಹ್ನ . ವೀರಪ್ಪನ ಕಡ್ಯೇರು ನನ್ನ ಎಬ್ಬಿಸಿದ್ರು.
ಡಾಕ್ಟ್ರಮ್ಮನಿಂದಲೇ ಆಯ್ತು ಬಿಡುಗಡೆ : ಯಾರೋ ನೋಡಕ್ಕೆ ಬಂದಿದ್ದಾರೆ ಅಂದ್ರು. ನನ್ನ ಯಾರಪ್ಪ ನೋಡಕ್ಕೆ ಬರುತ್ತಾರೆ ಅದೂ ಕಾಡಿಗೆ ಅಂದುಕೊಂಡೆ. ಯಾರೋ ತಮಿಳರೇ ಇರಬೇಕು. ಇಲ್ಲಿಗೆ ಕನ್ನಡಿಗರು ಎಲ್ಲಿ ಬರ್ತಾರೆ ಅಂತ ಹೋದೆ, ವಾಂಗೋ, ವಣಕ್ಕಂ ಎಂದು ತಮಿಳಿನಲ್ಲಿ ಹೇಳ್ದೆ. ಅವ್ರು ಅಣ್ಣ ನಾವೂ ಕನ್ನಡ ಮಾತಾಡ್ತೀವಿ ಎಂದ್ರು ನಿಮ್ಮನ್ನ ಬಿಡುಗಡೆ ಮಾಡಿಸ್ಲೇ ಬೇಕು ಅಂತ ಹಠದಿಂದ ನಮ್ಮ ಕೆಲ್ಸ ಎಲ್ಲ ಬಿಟ್ಟು ಬಂದಿದ್ದೀವಿ ಅಂತ ಹೇಳಿದ್ರು. ಬಹಳ ಹೆಚ್ಚು ಅಂದ್ರೆ 5-6 ದಿನದಲ್ಲಿ ಬಿಡುಗಡೆ ಮಾಡಿಸ್ತೀವಿ, ನೀವು ನಾವು ಹೇಳಿದಂತೆ ಕೇಳಿ ಅಂದ್ರು. ಹೊರಗಡೆ ಹೋಗಿ 4-5 ದಿನದ ಮೇಲೆ ಮತ್ತೆ ಬಂದ್ರು. ನೆಡುಮಾರನ್ ಸಾರ್ ಹೇಳಿದ್ರು. (ಅಷ್ಟು ಹೊತ್ತಿಗೆ ರಾಘವೇಂದ್ರ ರಾಜ್ ಕುಮಾರ್ ತಮಿಳಿನ ಬಗ್ಗೆ ಮಾತಾಡದಂತೆ ತಂದೆಗೆ ಕಿವಿಯಲ್ಲಿ ಪಿಸುಗುಟ್ಟಿದರು)
ಆ ಹೆಣ್ಣು ಮಗಳು, ಡಾಕ್ಟರ್ ನಮಗೆ ಪ್ರೇರಕ ಶಕ್ತಿ ಆಗಿದ್ರು. ಶಕ್ತಿ ಅವರ ರೂಪದಲ್ಲಿ ಬಂತು. ಈ ಜಾಗದಲ್ಲಿ ಹೆಣ್ಣು ಧ್ವನಿ ಕೇಳಿ ಆಶ್ಚರ್ಯ ಆಯ್ತು. ಹೆಣ್ಣು ಮಗಳಿಗೆ ಇಲ್ಲೇನಪ್ಪ ಕೆಲ್ಸ ಅಂದುಕೊಂಡೆ. ನೀವು ಏನೂ ಮಾತಾಡಬೇಡಿ. ನಾವು ಒಳಗಿಂದ ಒಳಗೆ ಕೆಲಸ ಮಾಡಬೇಕು ಅಂದ್ರು, ಅದೇನು ಮಾಡಿದ್ರೋ ಏನೋ ಅಂತೂ ಬಿಡುಗಡೆ ಮಾಡಿಸಿದ್ರು. ಆತ (ವೀರಪ್ಪ) ಬಹಳ ಕಿಲಾಡಿ, ಅದಕ್ಕೆ ಅನುಮಾನ ಬರದಂತೆ ನಾನೂ ನಡೆದು ಕೊಂಡೆ, ಹೆಲ್ತ್ ಸರಿ ಇಲ್ಲ ಅಂತ ಹೇಳಿ ಅಂದ್ರು ... ಹೇಳ್ದೆ.
ಡಾಕ್ಟ್ರಮ್ಮ ಹೇಳಿದಹಾಗೆ ನಾಟಕ ಆಡಿದೆ. ಎದೆ ನೋವು ಅಂದೆ. ಅವರು ಸ್ಟೆಥಾಸ್ಕೋಪು, ಔಷಧಿ ಎಲ್ಲ ತಂದಿದ್ರು. ನನ್ನ ಪಲ್ಸ್ ವೀಕ್ ಆಗಿದೆ. ಪಲ್ಸ್ ರೇಟ್ ಕಡಿಮೆ ಆಗಿದೆ ಬಹಳ ದಿನ ಅವರು ಇಲ್ಲಿ ಇದ್ರೆ ಕಷ್ಟ ಅಂದ್ರು. 2-3 ದಿನ ಅವರೂ ನಮ್ಮ ಜತೆ ಇದ್ರು, ಆಮೇಲೆ ಪಳನೆಡುಮಾರನ್ ನಮ್ಮನ್ನೆಲ್ಲಾ ಎಳಕೊಂಡು ಬಂದ್ರು. ಇಷ್ಟೇ ಕತೆ ಎಂದು ಎದ್ದರು ರಾಜ್.
ಕೊನೆಯಲ್ಲಿ ಅವರು ಹೇಳಿದ್ದು, ನಿಮ್ಮ ರಾಜ್ ಈಗ ನಿಮ್ಮ ಮುಂದೆ ಬಂದಿದ್ದಾರೆ. ಉಳಿದದ್ದೆಲ್ಲಾ ಸರಕಾರಕ್ಕೆ ಬಿಟ್ಟಿದ್ದು.
ಡಾಕ್ಟರ್ ಪರಿಚಯ : ತಮ್ಮನ್ನು ಬಿಡುಗಡೆ ಮಾಡಿಸಿದ ಡಾಕ್ಟರ್ ಭಾನ್ ಅವರನ್ನು ರಾಜ್ ಪರಿಚಯಿಸಿದರು. ಅವರನ್ನು ಮುಂದೆ ಕರೆದು ಎಲ್ಲರಿಗೂ ತೋರಿಸಿದರು. ಭಾನು ಅವರ ಸಂಗಡ ಬಂದಿದ್ದ ಷಣ್ಮುಖ ಸುಂದರಂ, ಮಣಿ ಅವರನ್ನೂ ಮಾಧ್ಯಮದವರಿಗೆ ಪರಿಚಯಿಸಿದರು.
ಪಾರ್ವತಮ್ಮ ಕೃತಜ್ಞತೆ : ನಮ್ಮ ಮನೆ ಬೆಳಕನ್ನು ನಮಗೆ ಒಪ್ಪಿಸಿದ್ದೀರಿ. ಕೃಷ್ಣ ಅವರಿಗೆ, ಕರುಣಾನಿಧಿ ಅವರಿಗೆ, ಸಂಧಾನಕಾರರೆಲ್ಲರಿಗೂ, ಕನ್ನಡ ಜನತೆಗೂ ನಮ್ಮ ಧನ್ಯವಾದಗಳು ಎಂದರು.
ಅಭಿಮಾನಿಗಳನ್ನು ಉದ್ದೇಶಿಸಿ ಭಾಷಣ : ಹೊರಗೆ ಬಂದ ರಾಜ್, ಅಂಬರೀಶ್ ಜತೆಯಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ತಮಿಳಿನವರೂ ಭಾರತೀಯರೇ, ಅವರು ವಿದೇಶೀಯರಲ್ಲ. ನಾವು ಸಂಕುಚಿತ ಮನೋಭಾವನೆ ಬಿಟ್ಟು, ಆಗಾಗ ಒಳ ಜಗಳ ಮಾಡೋದು ಬಿಟ್ಟು, ಚೆನ್ನಾಗಿರೋಣ ಎಂದ್ರು, ತಮ್ಮ ಅಭಿಮಾನಿ ದೇವರುಗಳಿಗೆ ಕೃತಜ್ಞತೆ ಸಲ್ಲಿಸಿದರು.