ಮೂವರು ಕಲಾವಿದರಿಗೆ ಯಕ್ಷಗಾನ ಪ್ರಶಸ್ತಿ
ಉಡುಪಿ : ಇಲ್ಲಿನ ಯಕ್ಷಗಾನ ಕಲಾ ರಂಗ ಮೂವರು ಯಕ್ಷಗಾನ ಕಲಾವಿದರಿಗೆ ಯಕ್ಷಗಾನ ಪ್ರಶಸ್ತಿಗಳನ್ನು ಘೋಷಿಸಿದೆ.
ಕೋಳಿಯೂರು ರಾಮಚಂದ್ರ ರಾವ್, ಕೋಟ ವೈಕುಂಠ ಮತ್ತು ದುರ್ಗಪ್ಪ ಗುಡಿಗಾರ ಅವರಿಗೆ ಡಾ. ಬಿ.ಬಿ ಶೆಟ್ಟಿ, ಪ್ರೊ. ಬಿ.ವಿ. ಆಚಾರ್ಯ ಮತ್ತು ನಾರಾಯಣಪ್ಪ ಉಪ್ಪೂರರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಕಲಾರಂಗದ ಅಧ್ಯಕ್ಷ ಬಿ. ಜಗಜ್ಜೀವನ ದಾಸ್ ಶೆಟ್ಟಿ ಹೇಳಿದ್ದಾರೆ.
ಎಚ್. ಸುಬ್ಬಣ್ಣ ಭಟ್, ಎಚ್. ಶ್ರೀಧರ್ ಹಂದೆ ಹಾಗೂ ಡಾ. ಪ್ರಭಾಕರ ಜೋಶಿ ನೇತೃತ್ವದ ಸಮಿತಿ ಪ್ರಶಸ್ತಿ ವಿಜೇತರನ್ನು , ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಆಯ್ಕೆ ಮಾಡಿದೆ. ಬೆಳ್ಳಿ ಹಬ್ಬವನ್ನಾಚರಿಸುತ್ತಿರುವ ಯಕ್ಷಗಾನ ಕಲಾ ರಂಗವು ನವೆಂಬರ್ 19ರಂದು ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನ ಸಭಾಂಗಣದಲ್ಲಿ ಸಮಾರಂಭವನ್ನು ಆಯೋಜಿಸಿದ್ದು ಇದೇ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಸಮಾರಂಭದ ಕೊನೆಗೆ ಸುಧನ್ವಾರ್ಜುನ ಮತ್ತು ಭಾಮಿನಿ ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ಪ್ರಸ್ತುತ ಪಡಿಸಲಾಗುವುದು ಎಂದು ಜಗಜ್ಜೀವನ ದಾಸ್ ಶೆಟ್ಟಿ ಹೇಳಿದರು.
(ಇನ್ಫೋ ವಾರ್ತೆ)