ರಾಯಚೂರು ಜಿಲ್ಲೆಯಲ್ಲಿ 9091 ಮಲೇರಿಯಾ ಪ್ರಕರಣ
ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ಈ ವರ್ಷ 9091 ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಆದರೆ, ಯಾವೊಬ್ಬ ರೋಗಿಯೂ ಮಲೇರಿಯಾದಿಂದ ಸತ್ತಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ.ಎಫ್. ಅಪ್ಪಣ್ಣನವರ್ ತಿಳಿಸಿದ್ದಾರೆ.
ರಕ್ತ ಸಂಗ್ರಹಣೆ, ತಪಾಸಣೆ, ಚಿಕಿತ್ಸಾ ವಿಧಾನಗಳಿಂದ ರೋಗ ಗುಣಪಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷ 10ಸಾವಿರದ 530 ಪ್ರಕರಣಗಳು ವರದಿಯಾಗಿದ್ದವು, ಈ ಸಾಲಿನಲ್ಲಿ ಮಲೇರಿಯಾ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಲೇರಿಯಾ ರೋಗವನ್ನು ಸಂಪೂರ್ಣವಾಗಿ ತಡೆಯಲಾಗುತ್ತಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಹಾಗೂ ರೋಗ ನಿಯಂತ್ರಿಸಲು ಅವಕಾಶವಿದೆ, ಈ ನಿಟ್ಟಿನಲ್ಲಿ ರೋಗ ಹರಡುವ ಸೊಳ್ಳೆಗಳ ನಾಶಕ್ಕೆ ಹಾಗೂ ಜಿಲ್ಲೆಯಲ್ಲಿ ಸ್ವಚ್ಛತೆ ಕಾಪಾಡಲು ಕ್ರಮಕೈಗೊಂಡಿರುವುದಾಗಿ ಅವರು ವಿವರಿಸಿದರು. ರಾಯಚೂರು ಜಿಲ್ಲೆಯ ಯಾಪಲದಿನ್ನಿ, ದೇವದುರ್ಗ, ಮಸರಕಲ್, ಸಿರವಾರ, ತುರ್ವಿಹಾಳ, ಆನಾಹೊಸೂರು ಮುಂತಾದ ಪ್ರದೇಶಗಳಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚಾಗಿದ್ದು ಆ ಪ್ರದೇಶದ ಜನರು ಸೊಳ್ಳೆಗಳ ನಿಯಂತ್ರಣಕ್ಕೆ ಗಮನ ಹರಿಸಬೇಕು ಎಂದರು.
ಕೊಳಚೆ ನೀರು ನಿಲ್ಲದಂತೆ ಎಚ್ಚರ ವಹಿಸುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ. ಜನರಲ್ಲಿ ರೋಗದ ಬಗ್ಗೆ ಅರಿವು ಮೂಡಿಸಲು ಇಲಾಖೆಯ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.
ಮುಖಪುಟ / ಊರು ಕೇರಿ