ಹಳ್ಳಿಯ ಬಯಲಲ್ಲಿ ಐಟಿ ಫಸಲಿಗೆ ಯತ್ನಿಸುತ್ತಿರುವ ಯುವಜೋಡಿ
*ಫ್ರೆಡ್ರಿಕ್ ನೊರೊನ್ಹ
ಬೆಂಗಳೂರು : ಮಾರ್ಕ್ ಜುಗ್ಸ್ಮಿತ್- ಅಮೇರಿಕಾ ಪ್ರಜೆ, ಆನಂದ್ ಬಾಬು - ಭಾರತೀಯ. ಇಬ್ಬರ ಧ್ಯೇಯ ಒಂದೇ, ಜನ ಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನ ಅನ್ನುವ ಮಾತನ್ನು ನಿಜಗೊಳಿಸುವುದು.
ಐಟಿ ತಂತ್ರಜ್ಞಾನದ ಬೆಳಕು ಬೀಳದ ಗ್ರಾಮೀಣ ಪ್ರದೇಶಗಳಲ್ಲಿ ನೆಟ್ 4 ರೂರಲ್ ಪ್ರಾಜೆಕ್ಟ್ನಡಿ ಅರಿವು ಮೂಡಿಸುವಲ್ಲಿ ಪೂರ್ವ ಪಶ್ಚಿಮ ದೇಶಗಳ ಈ ಇಬ್ಬರು ಯುವಕರು ಹೆಗಲಿಗೆ ಹೆಗಲು ಕೊಟ್ಟಿದ್ದಾರೆ. ನಾವು ಹಳ್ಳಿಗರಿಗೆ ಮಾಹಿತಿ ತಂತ್ರಜ್ಞಾನದ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದೇವೆ. ಪ್ರತಿಯಾಬ್ಬರೂ ಐಟಿಯ ಸೌಲಭ್ಯಗಳನ್ನು ಹೊಂದುವ ಹಕ್ಕು ಪಡೆದಿದ್ದಾರೆ ಎಂದು ಜುಗ್ಸ್ಮಿತ್(29) ಹೇಳುತ್ತಾರೆ.
ಆನಂದ್ ಬಾಬು (24) ಅವರದ್ದು ಐಟಿಯ ಮೂಲಕ ಜನ ಜಾಗೃತಿ ತರುವ ಹಂಬಲ. ಜನರ ಧ್ವನಿಯಾಗಿ ನೆಟ್ ಹೊರ ಹೊಮ್ಮಬೇಕೆನ್ನುವುದು ನಮ್ಮ ಹಂಬಲ ಎಂದು ಆನಂದ್ ಬಾಬು ಹೇಳುತ್ತಾರೆ. ತಮಿಳುನಾಡಿನ ಅಣ್ಣಾಮಲೈ ವಿವಿಯಿಂದ ಅವರು ಸಾಫ್ಟ್ವೇರ್ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಸಿಲಿಕಾನ್ ವ್ಯಾಲಿ ಎಂದು ಹೆಸರಾಗಿರುವ ಬೆಂಗಳೂರಿನಿಂದ ತಮ್ಮ ಯೋಜನೆಯನ್ನು ಚಾಲನೆಗೊಳಿಸುವ ಹಂಬಲ ಇವರದು. ಪ್ರಸ್ತುತ ತಂತ್ರಜ್ಞರ ತಂಡವೊಂದು ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ದುಡಿಯುತ್ತಿದೆ. 200 ಡಾಲರ್ಗಳ ವೆಚ್ಚದಲ್ಲಿ ಗಣಕ ಯಂತ್ರವೊಂದನ್ನು ರೂಪಿಸುವ ನಿಟ್ಟಿನಲ್ಲಿ ತಂಡ ದುಡಿಯುತ್ತಿದೆ. ಗ್ರಾಮೀಣ ಭಾರತಕ್ಕೆ ಬಸ್ಸುಗಳಲ್ಲಿ ತೆರಳಿ ಕಂಪ್ಯೂಟರ್ ಕಾರ್ಯದ ಪ್ರಾತ್ಯಕ್ಷಿಕೆಯನ್ನು ನೀಡುವ ಉದ್ದೇಶವೂ ತಂಡಕ್ಕಿದೆ.
ಅನಕ್ಷರರ ಮುಟ್ಟಲು ಸಪ್ಪಳ ಸಂವೇದಕ ತಂತ್ರಜ್ಞಾನ
ಆದರ್ಶದ ಬೆನ್ನು ಹತ್ತಿರುವ ಜುಗ್ಸ್ಮಿತ್ ಈ ನಿಟ್ಟಿನಲ್ಲಿ ತವರಿನಲ್ಲಿ ಉನ್ನತ ಹುದ್ದೆಗೆ ನಮಸ್ಕಾರ ಹೇಳಿದ್ದಾರೆ. ಗ್ರಾಮೀಣ ಜಗತ್ತಿನ ಜನ ಜೀವನದ ವೈರುಧ್ಯಗಳ ಬಗ್ಗೆ ಅವರಿಗೆ ತಿಳಿವಳಿಕೆಯಿದೆ. ಬಹುಭಾಷಾ ಮತ್ತು ಸಪ್ಪಳ ಸಂವೇದಕ ತಂತ್ರಜ್ಞಾನದ ಮೂಲಕ ಅನಕ್ಷರರನ್ನು ತಲಪುವ ಯೋಜನೆ ಅವರದು. ಇದರಿಂದಾಗಿ ಇ- ಮೆಯ್ಲ್ ಪರಿಕಲ್ಪನೆ ಇಲ್ಲದವರೂ ಇ- ಮೆಯ್ಲ್ ಕಳಿಸಬಹುದು. ಒಟ್ಟಿನಲ್ಲಿ ತಂತ್ರ ಜ್ಞಾನವನ್ನು ಸಾಧ್ಯವಾದಷ್ಟೂ ಸರಳಗೊಳಿಸುವುದು ಅವರ ಉದ್ದೇಶ, ಭಾರತದ ನೆಲದಲ್ಲಿ ಯಶಸ್ಸು ಕಂಡರೆ ನಮ್ಮ ಕೇಲಸವನ್ನು ಬೇರೆ ದೇಶಗಳಿಗೂ ವಿಸ್ತರಿಸುತ್ತೇವೆ ಎನ್ನುತ್ತಾರೆ ಜುಗ್ಸ್ಮಿತ್.
ಐಟಿಯ ಮೂಲಕ ಕಾಸು ಮಾಡಲು ಜನ ಪೋಟಿ ನಡೆಸುತ್ತಿರುವಾಗ ಜುಗ್ಸ್ಮಿತ್ ಮತ್ತು ಆನಂದ್ ಬಾಬು ಇರುವ ಕೆಲಸವ ಬಿಟ್ಟು ಐಟಿ ಜಾಗೃತಿ ಕೆಲಸದಲ್ಲಿ ತೊಡಗಿದ್ದಾರೆ. ವಿಶ್ವ ವಿದ್ಯಾಲಯ, ಸರ್ಕಾರಗಳು ಮಾಡ ಬಹುದಾದ ಕೆಲಸದಲ್ಲಿ ತೊಡಗಿದ್ದಾರೆ. ಯಶಸ್ಸು ಯೌವ್ವನದ್ದಾಗಲಿ.
(ಐಎಎನ್ಎಸ್)