ಬಿಸಿಸಿಐ ವಿಶೇಷ ಆಯುಕ್ತರಿಂದ ಮ್ಯಾಚ್ಫಿಕ್ಸಿಂಗ್ ತನಿಖೆ ಆರಂಭ
ಚೆನ್ನೈ : ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಬಿಐ ಹೆಸರಿಸಿರುವ ಐವರು ಮಾಜಿ ಕ್ರಿಕೆಟ್ ತಾರೆಗಳ ಬಗೆಗಿನ ಆರೋಪಗಳ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೇಮಿಸಿರುವ ವಿಶೇಷ ಆಯುಕ್ತ , ಸಿಬಿಐ ಜಂಟಿ ನಿರ್ದೇಶಕ ಕೆ. ಮಾಧವನ್ ತಮ್ಮ ಎರಡು ದಿನಗಳ ತನಿಖೆಯನ್ನು ಶನಿವಾರ ಪ್ರಾರಂಭಿಸುವರು.
ಮೋಸದಾಟದಲ್ಲಿ ಭಾಗಿಗಳಾಗಿರುವ ಆರೋಪ ಹೊತ್ತಿರುವ ಭಾರತ ತಂಡದ ಮಾಜಿ ನಾಯಕ ಅಜರುದ್ದೀನ್, ಅಜಯ್ ಶರ್ಮ ಮತ್ತು ಮನೋಜ್ ಪ್ರಭಾಕರ್ ಅವರನ್ನು ಮಾಧವನ್ ಶನಿವಾರ ಪ್ರಶ್ನಿಸುವರು. ಉಳಿದ ಆರೋಪಿಗಳಾದ ಅಜಯ್ ಜಡೇಜಾ, ನಯನ್ ಮೊಂಗಿಯಾ ಮತ್ತು ಮಾಜಿ ದೈಹಿಕ ತರಬೇತುದಾರ ಆಲಿ ಇರಾನಿ ಅವರನ್ನು ಪ್ರಶ್ನಿಸುವ ದಿನಾಂಕ ಇನ್ನೂ ಸ್ಪಷ್ಟವಾಗಿಲ್ಲ .
ಅಜರುದ್ದೀನ್ ಅವರಿಗೆ ಶನಿವಾರದ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದೇವೆ. ಅವರು ಹಾಜರಾಗುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ವರದಿಗಾರರ ಪ್ರಶ್ನೆಯಾಂದಕ್ಕೆ ಮಾಧವನ್ ಉತ್ತರಿಸಿದರು. ದೆಹಲಿಯಲ್ಲಿ ಕೆಲವು ಸಮಸ್ಯೆಗಳಿರುವುದರಿಂದ ತನಿಖೆಯನ್ನು ಚೆನ್ನೈನಲ್ಲಿ ಗೊತ್ತು ಪಡಿಸಲಾಯಿತು, ಅಗತ್ಯ ಬಿದ್ದಲ್ಲಿ ಕೆಲವು ಮಾಜಿ ಹಾಗೂ ಹಾಲಿ ಬಿಸಿಸಿಐ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲಾಗುವುದು ಎಂದರು.
ಸಿಬಿಐ ತನಿಖೆ ಅಸ್ಪಷ್ಟ - ಪ್ರಭಾಕರ್ : ಮೋಸದಾಟ ಕುರಿತಾದ ಹೋರಾಟ ಮುಗಿಯಿತು. ಆದರೆ, ಆಟವನ್ನು ಸ್ವಚ್ಛಗೊಳಿಸುವ ಯುದ್ಧ ಮುಗಿದಿಲ್ಲ ಎಂದು ಮನೋಜ್ ಪ್ರಭಾಕರ್ ಹೇಳಿದ್ದಾರೆ. ಮಾಧವನ್ ಅವರ ಮುಂದೆ ಹಾಜರಾಗುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಸಿಬಿಐ ತನಿಖೆ ಸ್ಪಷ್ಟತೆಯಿಂದ ಕೂಡಿಲ್ಲ . ನಾನು ಹಾಜರುಪಡಿಸಿರುವ ಹಲವಾರು ಟೇಪುಗಳನ್ನು ಸೂಕ್ತವಾಗಿ ಬಳಸಿಕೊಳ್ಳದಿರುವುದು ಸಿಬಿಐ ವರದಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಪ್ರಭಾಕರ್ ಟೀಕಿಸಿದರು. ನಾನು ಸಲ್ಲಿಸಿರುವ ಸಾಕ್ಷ್ಯಗಳನ್ನು ಅವುಗಳ ಮೂಲ ರೂಪದಲ್ಲಿ ಬಳಸಿಕೊಂಡಿಲ್ಲ ಎಂದು ಪ್ರಶ್ನೆಯಾಂದಕ್ಕೆ ಅವರು ಉತ್ತರಿಸಿದರು.
(ಯುಎನ್ಐ)