ಹಾವುಗಳ ಕಡಿತ : ಮುಂಜಾಗ್ರತಾ ಕ್ರಮಗಳು ಮತ್ತು ಪ್ರಥಮ ಚಿಕಿತ್ಸೆ
ಬೆಂಗಳೂರು : ಹಾವು ಕಡಿದಾಗ ವಿಷ ಏರಿ ಸಾಯುವವರಿಗಿಂತ, ಹೆದರಿ ಸಾವಯವವರೇ ಹೆಚ್ಚು. ಅನೇಕ ವೇಳೆ ಸೂಕ್ತ ಚಿಕಿತ್ಸೆ ದೊರಕದೆ ವ್ಯಕ್ತಿಗಳು ಸತ್ತರೆ ಇನ್ನೂ ಕೆಲವು ವೇಳೆಗಳಲ್ಲಿ ಪ್ರಥಮ ಚಿಕಿತ್ಸೆ ಲಭ್ಯವಿಲ್ಲದೆ, ಅಥವಾ ಪ್ರಥಮ ಚಿಕಿತ್ಸೆ ಮಾಡಲು ಹೋಗಿ ಅದರಿಂದ ವ್ಯತಿರಿಕ್ತ ಪರಿಣಾಮ ಬೀರಿ ವ್ಯಕ್ತಿ ಮೃತಪಡುತ್ತಾನೆ. ಹಾವು ಕಡಿತದ ಬಗ್ಗೆ ವಹಿಸಬೇಕಾದ ಮುಂಜಾಗರೂಕತೆ, ಪ್ರಥಮ ಚಿಕಿತ್ಸೆ ಮತ್ತು ಹಾವು ಕಡಿದಾಗ ಮಾಡಬೇಕಾದ ವಿವರಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಕೊಡಲಾಗಿದೆ. ನಿಮ್ಮ ಪ್ರಥಮ ಚಿಕಿತ್ಸಾ ಪಟ್ಟಿಗೆ ಸೇರಿಸಿಕೊಳ್ಳಿ.
ಹಾವು ಕಡಿದಾಗ ಏನು ಮಾಡಬಾರದು : ವ್ಯಕ್ತಿ ನಡೆದಾಡಲು ಅಥವಾ ಇತರ ಯಾವುದೇ ದೈಹಿಕ ಚಟುವಟಿಕೆ ಮಾಡಲು ಬಿಡಬಾರದು. ಗಾಯವಾದ ಜಾಗದಲ್ಲಿ ಅರಿಶಿಣ, ಕಾಫಿ ಪುಡಿ ಮುಂತಾದ ವಸ್ತುಗಳನ್ನು ಹಚ್ಚಬೇಡಿ. ತಣ್ಣನೆ ವಸ್ತುಗಳನ್ನು ಗಾಯದ ಜಾಗಕ್ಕೆ ಬಳಸಬೇಡಿ. ಗಾಯದ ಜಾಗವನ್ನು ಕೌಯ್ಯಬೇಡಿ. ಡಾಕ್ಟರ್ ಸಲಹೆ ಇಲ್ಲದೆ ಯಾವುದೇ ವಿಧವಾದ ಔಷಧಿ ಬಳಸಬಾರದು. ಬಾಯಿ ಮೂಲಕ ಯಾವುದೇ ಆಹಾರ ಕೊಡಬಾರದು. ಕಚ್ಚಿದ ಜಾಗವನ್ನು ಹೃದಯದ ಮಟ್ಟಕ್ಕಿಂತ ಮೇಲಕ್ಕೆತ್ತ ಬೇಡಿ. ವಿಷವನ್ನು ಹೀರಿ ತೆಗೆಯಲು ಯತ್ನಿಸಬೇಡಿ.
ಹಾವು ಕಡಿದ ತಕ್ಷಣ ಸಮೀಪದ ವೈದ್ಯರಿಗೆ ಸುದ್ದಿ ಮುಟ್ಟಿಸಿ. ಇದರಿಂದ ಕಡಿತಕ್ಕೊಳಗಾದ ವ್ಯಕ್ತಿಯನ್ನು ಆ ಸ್ಥಳಕ್ಕೆ ಸಾಗಿಸುವ ವೇಳೆಗೆ ವೈದ್ಯರು ಎಲ್ಲವನ್ನೂ ಸಿದ್ದಗೊಳಿಸಿಕೊಳ್ಳುತ್ತಾರೆ.
ಪ್ರಥಮ ಚಿಕಿತ್ಸೆ : ವ್ಯಕ್ತಿಯನ್ನು ಗಾಬರಿಗೊಳಿಸಬೇಡಿ. ಓಡಾಡಲು ಬಿಡಬೇಡಿ. ಗಾಯವನ್ನು ಸೋಪು ಮತ್ತು ನೀರಿನಿಂದ ತೊಳೆಯಿರಿ. ಗಾಯದ ಜಾಗಕ್ಕೆ ಯಾವುದೇ ವಸ್ತು ಬೀಳದಂತೆ ನೋಡಿಕೊಳ್ಳಿ. ಊದಿಕೊಳ್ಳಲು ಪ್ರಾರಂಭಿಸಿದರೆ ಅಥವಾ ಬಣ್ಣ ಬದಲಾವಣೆ ಕಂಡುಬಂದರೆ ಕಚ್ಚಿರುವ ಹಾವು ವಿಷಪೂರಿತವಾಗಿರುವ ಸಾಧ್ಯತೆ ಹೆಚ್ಚು.
ಗಾಯವಾಗಿರುವ ಜಾಗವನ್ನು ತಣ್ಣನೆ ಮತ್ತು ಶುದ್ದವಾದ ಬಟ್ಟೆಯಿಂದ ಸುತ್ತಿ. ವ್ಯಕ್ತಿಯ ದೇಹದ ಉಷ್ಣಾಂಶ, ಹೃದಯದ ಬಡಿತ, ಉಸಿರಾಟದ ಮೇಲೆ ನಿಗಾವಹಿಸಿ.
ಮುಂಜಾಗರೂಕತೆ : ಅನೇಕ ಹಾವುಗಳು ವಿಷಜಂತುಗಳಲ್ಲದಿದ್ದರೂ, ನಿಮಗೆ ಸೂಕ್ತ ತರಬೇತಿ ಇಲ್ಲದಿದ್ದರೆ ಹಿಡಿಯುವುದಾಗಲಿ, ಅವುಗಳ ಜೊತೆ ಆಟವಾಡುವುದನ್ನಾಗಲಿ ಮಾಡಬಾರದು. ಹಾವುಗಳಿರುವ ಜಾಗದಲ್ಲಿ ಸಂಚರಿಸುವಾಗ ಉದ್ದನೆ ಪ್ಯಾಂಟ್ ಮತ್ತು ಬೂಟುಗಳನ್ನು ಧರಿಸಿ ಓಡಾಡಿ. ಕಣ್ಣಿಗೆ ಕಾಣದ ಜಾಗದಲ್ಲಿ ಕೈಯಿಡಬೇಡಿ. ಕೈಯಲ್ಲಿ ಕೋಲು ಹಿಡಿದು ಹೆಜ್ಜೆಹಾಕಿ. ಶಬ್ದ ಮಾಡುತ್ತಾ ನಡೆದರೆ ಹಾವು ತಾನಾಗೇ ಜಾಗ ಬಿಡುತ್ತದೆ. ಎಲ್ಲಕ್ಕೂ ಎಚ್ಚರ ಅತಿಮುಖ್ಯ.