ಅಟಲ್ಜೀ ಅಪರೇಷನ್ ಸಂಪೂರ್ಣ ಯಶಸ್ವಿ : ಡಾ. ರಣಾವತ್
ಮುಂಬಯಿ : ಮಂಗಳವಾರ ಇಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಪ್ರಧಾನಿ ಅಟಲ್ಜೀ ಅವರ ಎಡ ಮೊಣಕಾಲಿಗೆ ನಡೆದ ಶಸ್ತ್ರ ಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ. ಅವರು ಆರೋಗ್ಯವಾಗಿದ್ದಾರೆ ಹಾಗೂ ಇನ್ನು ಐದು ದಿನಗಳಲ್ಲೇ ಹೆಜ್ಜೆ ಹಾಕಲಿದ್ದಾರೆ ಎಂದು ಡಾ. ರಣಾವತ್ ತಿಳಿಸಿದ್ದಾರೆ.
ಇಲ್ಲಿನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಧಾನ ಮಂತ್ರಿಯವರ ಮಂಡಿ ಶಸ್ತ್ರಚಿಕಿತ್ಸೆಯ ಹಾಗೂ ಆರೋಗ್ಯದ ಬಗ್ಗೆ ವಿವರಗಳನ್ನು ನೀಡಿದ ಡಾ. ಚಿತ್ತರಂಜನ್ ಎಸ್. ರಣಾವತ್ ಹಾಗೂ ಗೃಹ ಸಚಿವ ಎಲ್.ಕೆ. ಆಡ್ವಾಣಿ ಅವರು ಶಸ್ತ್ರ ಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಡಾ. ರಣಾವತ್ ಅವರಿಗೆ ನಾಲ್ವರು ತಜ್ಞ ವೈದ್ಯರು ನೆರವು ನೀಡಿದರು. ಪ್ರಧಾನಿ ಅವರಿಗೆ ಎಡ ಮೊಣಕಾಲಿನಲ್ಲಿ ತೀವ್ರ ಆರ್ಥ್ರೆೃಟಿಸ್ ಸಮಸ್ಯೆ ಇತ್ತು. ಮೊಣಕಾಲಿನ ಇಬ್ಬದಿಯಲ್ಲಿ ಮೃದ್ವಸ್ಥಿಗಳು ಹಾನಿಗೊಳಗಾಗಿದ್ದವು. ಬರಿ ಮೂಳೆಗಳು ಮಾತ್ರ ಗೋಚರಿಸುತ್ತಿದ್ದವು ಎಂದು ಡಾ. ಚಿತ್ತರಂಜನ್ ರಣಾವತ್ ಹೇಳಿದರು.
ಬಲಗಾಲಿನಲ್ಲೂ ತೊಂದರೆ : ವಾಜಪೇಯಿ ಅವರ ಬಲ ಮೊಣಕಾಲಿನಲ್ಲೂ ಇದೇ ತೊಂದರೆ ಇದೆ. ಆದರೆ, ಈಗಲೇ ಬಲ ಮಂಡಿಗೂ ಶಸ್ತ್ರ ಚಿಕಿತ್ಸೆ ಮಾಡುವ ಯೋಚನೆ ಇಲ್ಲ ಎಂದೂ ಮೂಳೆ ತಜ್ಞರು ಹೇಳಿದರು. ತಾವು ಈವರೆಗೆ 3000ಕ್ಕೂ ಹೆಚ್ಚು ಮಂಡಿ ಚಿಪ್ಪಿನ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿದ್ದು, ಎರಡೂ ಚಿಪ್ಪುಗಳ ಶಸ್ತ್ರ ಚಿಕಿತ್ಸೆಯನ್ನು ಒಂದೇ ಸಮಯದಲ್ಲಿ ಮಾಡಬಹುದಾದರೂ ಕೂಡ ರೋಗಿಯ ಆರೋಗ್ಯದ ಹಾಗೂ ದೈಹಿಕ ಸಾಮರ್ಥ್ಯವನ್ನು ಇದು ಅವಲಂಬಿಸಿರುತ್ತದೆ ಎಂದೂ ಹೇಳಿದರು.
ರಾಷ್ಟ್ರಪತಿಗಳ ದೂರವಾಣಿ ಕರೆ : ಮಂಗಳವಾರ ಮಧ್ಯಾಹ್ನ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು, ಫೋನ್ ಮಾಡಿ ಪ್ರಧಾನಿಯವರ ಆರೋಗ್ಯದ ಬಗ್ಗೆ ವಿಚಾರಿಸಿದರೆಂದು ಆಡ್ವಾಣಿ ತಿಳಿಸಿದರು.
ಮಂಡಿಯ ಭಾಗದಲ್ಲೂ ರಕ್ತ ಸಂಚಾರ ಸುಗಮವಾಗಿ ನಡೆಯಲು ಅನುವಾಗುವಂತೆ ಪ್ರಧಾನಿ ಅವರಿಗೆ ಮಂಗಳವಾರದಿಂದಲೇ ಲಘು ಫಿಸಿಯೋಥೆರಪಿ ನೀಡಲಾಗುತ್ತದೆ. ಪ್ರಧಾನಿ ಅವರಿಗೆ ಊರು ಗೋಲಿನ ಆಸರೆಯಲ್ಲಿ ನಡೆಯಲು ಸಲಹೆಯನ್ನೂ ನೀಡಲಾಗಿದೆ.