ನಿರ್ಮಾಣ ನಿಯಮಗಳನ್ನು ಉಲ್ಲಂಘಿಸಿದ ಮಲ್ಲೇಶ್ವರಂ ಬಿಜೆಪಿ ಕಟ್ಟಡ ?
ಬೆಂಗಳೂರು : ಬಿಜೆಪಿ ರಾಜ್ಯ ಘಟಕದ ಕಚೇರಿಯನ್ನು ಕಟ್ಟಡ ನಿಯಮಗಳನ್ನು ಉಲ್ಲಂಘಿಸಿ ಕಟ್ಟಲಾಗಿದೆ ಎಂಬ ರಿಟ್ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ನಗರಪಾಲಿಕೆ ಮತ್ತು ಸಂಬಂಧಿಸಿದವರಿಗೆ ನೋಟೀಸ್ ಜಾರಿ ಮಾಡಿದೆ. ಬೆಂಗಳೂರಿನ ವಕೀಲರಾದ ಎನ್. ಪಿ. ಅಮೃತೇಶ್ ಹಾಗೂ ವೈ. ಎನ್. ನಾಗರಾಜ್ ಎಂಬ ವಕೀಲರು ಈ ಸಂಬಂಧ ರಿಟ್ ಅರ್ಜಿ ಸಲ್ಲಿಸಿದ್ದರು.
ನಿಯಮ ಉಲ್ಲಂಘನೆ : ನಗರದ ಮಲ್ಲೇಶ್ವರಂ ಬಡಾವಣೆಯಲ್ಲಿ 3954 ಚದುರ ಅಡಿ ಜಾಗದಲ್ಲಿ ಕಟ್ಟಲು ಉದ್ದೇಶಿಸಲಾಗಿದ್ದ ಈ ಕಟ್ಟಡಕ್ಕೆ ಅನುಮತಿ ನೀಡಬೇಕೆಂದು 1991ರಲ್ಲಿ ನಗರಪಾಲಿಕೆಗೆ ಬಿಜೆಪಿ ಮನವಿ ಸಲ್ಲಿಸಿತ್ತು. ಆಗ ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಅಡ್ವಾಣಿ 1991ರ ಅಕ್ಟೋಬರ್ 20ರಂದು ಶಿಲಾನ್ಯಾಸ ನೆರವೇರಿಸಿದ್ದರು. ನಂತರ ತಿಳಿದು ಬಂದ ಅಂಶದ ಪ್ರಕಾರ ನಗರಪಾಲಿಕೆಗೆ ಅನುಮತಿ ಪಡೆಯಲು ಸಲ್ಲಿಸಲಾಗಿದ್ದ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ಕಟ್ಟಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಈ ಮುಂಚೆ 2 ಮಹಡಿಗಳನ್ನು ಕಟ್ಟಲು ಅನುಮತಿ ಕೇಳಲಾಗಿತ್ತು. ಈಗ ಮೂರು ಅಂತಸ್ತು ಕಟ್ಟಲಾಗಿದ್ದು, ಶೇಕಡಾ 210ರಷ್ಟು ಜಾಗ ಒತ್ತುವರಿ ಮಾಡಿ 12, 624 ಚದುರ ಅಡಿ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದು ರಾಜ್ಯದ ನಗರಪಾಲಿಕೆ ಅಧಿನಿಯಮಗಳ ನೇರ ಉಲ್ಲಂಘನೆಯಾಗಿದೆ. ಆದ್ದರಿಂದ ಕೋರ್ಟ್ ಪ್ರಕರಣದ ಮಧ್ಯೆ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಲು ನಗರಪಾಲಿಕೆಗೆ ನಿರ್ದೇಶನ ನೀಡಬೇಕು ಹಾಗೂ ಅಕ್ರಮ ಕಟ್ಟಡ ನೆಲಸಮಗೊಳಿಸಲು ನಗರ ಮಂಡಳಿಗೆ ಆದೇಶ ನೀಡಬೇಕೆಂದು ಅರ್ಜಿದಾರರು ಕೇಳಿಕೊಂಡಿದ್ದರು.
(ಐಎಎನ್ಎಸ್)