ನ್ಯಾಯದೇವತೆಯ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಕರ್ನಾಟಕರಾಜ್ ಬಿಡುಗಡೆಯ ನಿರ್ಣಾಯಕ ವಿಚಾರಣೆ ಬುಧವಾರ
ಕಾನೂನು ಸಮರಕ್ಕೆ ಇಂಬುಕೊಟ್ಟ ಪುತ್ರಶೋಕಿ
ವೀರಪ್ಪನ್ ಬೇಡಿಕೆ ಈಡೇರಿಸಲು ರಾಜ್ಯ ಸರಕಾರ ಟಾಡಾ ಆರೋಪಿಗಳ ಮೇಲಿನ ಮೊಕದ್ದಮೆ ಕೈಬಿಡುವ ನಿರ್ಧಾರ ಕೈಗೊಂಡಿತು. ವೀರಪ್ಪನ್ ಸಹಚರರಿಂದ ಹತರಾದ ಪೊಲೀಸ್ ಅಧಿಕಾರಿ ಶಖೀಲ್ ಅಹ್ಮದ್ ಅವರ ತಂದೆ ಅಬ್ದುಲ್ ಕರೀಂ ಮೈಸೂರು ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ತಕರಾರು ಅರ್ಜಿ ತಿರಸ್ಕೃತವಾಯಿತು. ಸರಕಾರದ ಪರ ತೀರ್ಪು ಬಂತು.
ಆದರೆ, ಜಾಮೀನಿನ ಮೇಲೆ ಟಾಡಾ ಬಂದಿಗಳು ಬಿಡುಗಡೆಗೆ ಆಗಲು ಕೆಲವೇ ಗಂಟೆಗಳಿರುವಾಗ ಸರ್ವೋಚ್ಚ ನ್ಯಾಯಾಲಯ ಆಗಸ್ಟ್ 29ರ ಮಂಗಳವಾರ ತಡೆಯಾಜ್ಞೆ ನೀಡಿತು. ಕರೀಂ ಅವರು ಸರ್ವೋನ್ನತ ನ್ಯಾಯಾಲಯದಲ್ಲಿ ವಿಶೇಷ ತೆರವು ಅರ್ಜಿ ಸಲ್ಲಿಸಿದ್ದರು. ಆನಂತರ ನ್ಯಾಯಾಲಯ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತು. ಗಣೇಶ ಚತುರ್ಥಿಯ ದಿನ ರಾಜ್ಯದ ಪರ ತೀರ್ಪು ಬರುತ್ತದೆ ಎಂದು ನಿರೀಕ್ಷಿಸಿದ್ದವರಿಗೆ ನಿರಾಶೆ ಆಯಿತು.
ಸರ್ವೋನ್ನತ ನ್ಯಾಯಾಲಯ ತಮಿಳು ನಾಡು ಹಾಗೂ ಕರ್ನಾಟಕ ಸರಕಾರಗಳ ಮುಖಕ್ಕೆ ಮಂಗಳಾರತಿ ಎತ್ತಿತು. ವೀರಪ್ಪನ್ ಸಮಸ್ಯೆ ಬಗೆಹರಿಸಲಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗುವಂತೆಯೂ ಹೇಳಿತ್ತು. ಅರ್ಜಿಯ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿತ್ತು. 19ರಂದೂ ನ್ಯಾಯಾಲಯ ಮತ್ತೆ ವಿಚಾರಣೆಯನ್ನು ಅಕ್ಟೋಬರ್ 11ಕ್ಕೆ ಮುಂದೂಡಿತು. ಅಂತೂ ನಾಳೆ ಬುಧವಾರ, ಆ ವಿಚಾರಣೆ ದಿನ ಬಂದಿದೆ. ನ್ಯಾಯಾಲಯ ಈ ಬಾರಿ ಏನು ತೀರ್ಪು ನೀಡುತ್ತದೆ ಎನ್ನುವುದರ ಮೇಲೆ ರಾಜ್ಕುಮಾರ್ ಬಿಡುಗಡೆಯ ಹಣೆಬರಹ ಏನು ? ನಿರ್ಧಾರವಾಗಲಿದೆ.
ಮುಖಪುಟ / ರಾಜ್ ಅಪಹರಣ