ಈ ಮಂಡಿ ನೋವು ಎನ್ನುವುದು ಯಾಕೆ ಬರುತ್ತದೆ ?
ನಿರಂತರವಾಗಿ ಕುರ್ಚಿಯಲ್ಲಿ ಕೂರುವುದರಿಂದ, ಬಹಳ ಕಾಲ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದಲೇ ಬೆನ್ನು ನೋವು, ಮಂಡಿ ನೋವು ಬರುತ್ತದೆ. ಇದು ವೃತ್ತಿಪರ ಅರ್ಥಾತ್ ಅಕ್ಯುಪೇಷನಲ್ ಡೀಸೀಸ್ ಎನ್ನುತ್ತಾರೆ ಮೂಳೆ ವೈದ್ಯರು. ಹೀಗಾಗೇ ಮುಂಜಾನೆ ನಿಯಮಿತವಾಗಿ ವ್ಯಾಯಾಮ ಮಾಡದ ಹಾಗೂ ಗಂಟೆ ಗಟ್ಟಲೇ ಕೂತು ಕೆಲಸ ಮಾಡುವ ಡ್ರೆೃವರ್ಗಳು, ಸಾಫ್ಟ್ವೇರ್ ಎಂಜಿನಿಯರ್ಗಳು, ಕಂಪ್ಯೂಟರ್ ಆಪರೇಟರ್ಗಳೇ ಮೊದಲಾದವರಿಗೆ ಮೂಳೆ ಸಂಬಂಧಿ ವ್ಯಾಧಿಗಳು ಕಾಡುತ್ತವೆ.
1999ರಲ್ಲಿ ಕ್ಯಾಟರ್ಯಾಕ್ಟ್ಗಾಗಿ ಎಡಗಣ್ಣಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಹಾಗೂ ಬಲಗಣ್ಣಿನ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಂಡಿರುವ ಅಟಲ್ ಕವಿ ಹೃದಯಿ. ಮಿಗಿಲಾಗಿ ಹೃದಯ ಶ್ರೀಮಂತಿಕೆಯ ಮಹಾನ್ ವ್ಯಕ್ತಿ ಇವರಿಗೆ ಯಾವುದೇ ರೀತಿಯ ಹೃದಯ ಬೇನೆ ಇಲ್ಲ. ನಿಮಿಷಕ್ಕೆ 72 ನಾಡಿ ಬಡಿತಗಳೊಂದಿಗೆ 80 /130 ರಕ್ತದೊತ್ತಡವನ್ನು ಹೊಂದಿರುವ ಅಟಲ್ಜೀ ಆರೋಗ್ಯವಾಗಿಯೇ ಇದ್ದಾರೆ.
ವದಂತಿ : ಆದರೆ, ಪ್ರಧಾನಿಯವರಿಗೆ ವೃಷಣದ ಕ್ಯಾನ್ಸರ್ ಇದೆ ಎಂಬ ವದಂತಿಗಳು ಹಬ್ಬಿದ್ದವು. ಅವರಿಗೆ ಅಂತಹ ಯಾವುದೇ ಕಾಯಿಲೆಗಳು ಇಲ್ಲ. ಮಂಡಿ ನೋವಿಗಾಗಿ ಮಾತ್ರ ಅವರು, ಮೊಣಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದಾರೆ. 28 ವರ್ಷಗಳ ಹಿಂದೆ (1972) ಅವರು, ಅಲ್ಸರ್ಗಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ರು. ಈಗ ಅವರಿಗೆ ಆ ಸಮಸ್ಯೆ ಇಲ್ಲ.
1986ರಲ್ಲಿ ಪ್ರಧಾನಿಯವರ ಬಲ ಮೂತ್ರಪಿಂಡವನ್ನು ತೆಗೆದು ಹಾಕಲಾಗಿದೆ. ಈವರೆಗೆ ಒಂದೇ ಮೂತ್ರಪಿಂಡದ ನೆರವಿನಿಂದ ಅವರು, ಆರೋಗ್ಯವಾಗಿ ಜೀವನ ನಡೆಸುತ್ತಿದ್ದಾರೆ. ಸ್ಲಿಪ್ಡಿಸ್ಕ್ ಸಮಸ್ಯೆಗೂ ಅವರು, 1976ರಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು.
ಮಂಡಿ ಚಿಪ್ಪಿನ ಶಸ್ತ್ರ ಚಿಕಿತ್ಸೆ : ಒಣ ಮೂಳೆಗಳು ಉಜ್ಜಿರುವ ಕಾರಣ ಪ್ರಧಾನಿಯವರ ಮೃದ್ವಸ್ಥಿಗೆ (ಲಿಗಮೆಂಟ್) ಹಾನಿಯಾಗಿದೆ. ಮೃದ್ವಸ್ಥಿ ಹೆಸರೇ ಹೇಳುವಂತೆ ಬಹು ಮೃದುವಾದ ಮೂಳೆ. ಮೊಣಗಂಟಿನಲ್ಲಿ ಇದು ಅತಿ ಮುಖ್ಯಭಾಗ. ಎರಡೂ ಮೂಳೆಗಳ ಮಧ್ಯೆ ಇದು ದಿಂಬಿನಂತೆ ಕೆಲಸ ಮಾಡುತ್ತದೆ. ಮೊಣಗಂಟಿನ ಕೆಳಗಡೆಯ ಮೂಳೆಯ ಮೇಲೆ ಸ್ಟೀಲ್ ತಳವುಳ್ಳ ಹಾಗೂ ಪಿವಿಸಿ ಯಿಂದ ತಯಾರಿಸಿದ ಕಪ್ ಆಕಾರದ ಕೃತಕ ಮೃದ್ವಸ್ಥಿ ಜೋಡಿಸಲಾಗಿದೆ. ಈ ಕೃತಕ ಮೃದ್ವಸ್ಥಿ 14-15 ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಎನ್ನುತ್ತಾರೆ ವೈದ್ಯರು.
ಈಗ ಪ್ರಧಾನಿ ವಾಜಪೇಯಿ ಅವರೂ ತಮ್ಮ ಮಂಡಿಯನ್ನು ಕೆಲವೇ ದಿನಗಳ ನಂತರ 95 ಡಿಗ್ರಿಯಷ್ಟು ಬಾಗಿಸಬಲ್ಲರು. ಎಂದಿನಂತೆ ಸಹಜವಾಗಿ ನಡೆದಾಡಬಲ್ಲರು ಎನ್ನುತ್ತಾರೆ ವೈದ್ಯರು. ಈಗ ಕೆಲವು ವರ್ಷಗಳಿಂದ ವಾಜಪೇಯಿ ಅವರು, 0.5 ಮಿಲಿ ಗ್ರಾಮ್ನಷ್ಟು ಡಿಸ್ಪಿರಿನ್ ಹಾಗೂ ವಿಟಮಿನ್ ಬಿ ಹಾಗೂ ಇ ಮಾತ್ರೆಗಳನ್ನು ನುಂಗುತ್ತಾ ಆರೋಗ್ಯವಾಗಿದ್ದಾರೆ. ಕೆಲವೊಮ್ಮೆ ಮಾತ್ರ ನೋವು ನಿವಾರಕ ಔಷಧಗಳನ್ನು ತೆಗೆದುಕೊಳ್ಳುವುದುಂಟು.
ಈ ಎಲ್ಲ ನೋವುಗಳ ನಡುವೆಯೂ ದೇಶದ ನೋವಿನ ನಿವಾರಣೆಗೆ ಟೊಂಕಕಟ್ಟಿ ನಿಂತಿರುವ ಪ್ರಧಾನಿ ಮಂಡಿ ನೋವಿನಲ್ಲೂ ಅಮೆರಿಕಾ ಯಾತ್ರೆ ಪೂರೈಸಿಕೊಂಡು ಬಂದರು. ಸ್ವತಃ ಕವಿಗಳೂ, ಚುರುಕು ಮತಿಗಳೂ, ದೇಶಭಕ್ತರೂ, ರಾಜಕೀಯ ಮುತ್ಸದ್ಧಿಯೂ ಆದ ಪ್ರಧಾನಿ ಶೀಘ್ರ ಗುಣಮುಖರಾಗಲಿ, ದೇಶದ ಅಭಿವೃದ್ಧಿಗೆ ದುಡಿವ ಅವರ ಛಲಕ್ಕೆ ಮತ್ತಷ್ಟು ಚೈತನ್ಯ ದೊರಕಲಿ ಎಂಬುದು ನಮ್ಮ ಹಾರೈಕೆ.
ಮುಖಪುಟ / ಆಸ್ಪತ್ರೆಯಲ್ಲಿ ಅಟಲ್ / ಶುಭಕಾಮನೆಗಳು