ರಾಜ್ ಅಪಹರಣ : 40000 ತಮಿಳರು ತಾಯ್ನಾಡಿಗೆ ದೌಡು
ಚೆನ್ನೈ : ರಾಜ್ ಅಪಹರಣ ವಿಳಂಬದ ಆಕ್ರೋಶಕ್ಕೆ ಬಲಿಯಾದೇವೆಂದು ಹೆದರಿ ಸುಮಾರು 40 ಸಾವಿರಕ್ಕೂ ಹೆಚ್ಚು ತಮಿಳರು ಕರ್ನಾಟಕದಿಂದ ತಾಯ್ನಾಡಿಗೆ ವಾಪಸಾಗಿದ್ದಾರೆ ಎಂದು ತಮಿಳುನಾಡು ಸರಕಾರದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ವೀರಪ್ಪನ್ ತನ್ನ ಬೇಡಿಕೆಗಳಲ್ಲಿ ಕಾವೇರಿ ಸಂತ್ರಸ್ತರಿಗೆ ಪರಿಹಾರ, ಕಾವೇರಿ ನದಿ ನೀರಿನ ವಿಷಯ, ತಿರುವಳ್ಳವರ್ ಪ್ರತಿಮೆ ಅನಾವರಣ ಹಾಗೂ ತಮಿಳು ಉಗ್ರಗಾಮಿಗಳ ಬಿಡುಗಡೆಯ ಷರತ್ತು ವಿಧಿಸಿರುವ ಹಿನ್ನೆಲೆಯಲ್ಲಿ ಕಳೆದ 42 ದಿನಗಳಿಂದ ತಮಿಳರು ತಾಯ್ನಾಡಿಗೆ ಓಡಿ ಬರುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಕುಮಾರ್ ಅವರ ಬಿಡುಗಡೆಗೆ ವೀರಪ್ಪನ್ ವಿಧಿಸಿರುವ ಷರತ್ತುಗಳು ಹಾಗೂ ಆಗುತ್ತಿರುವ ವಿಳಂಬದಿಂದ ಉಂಟಾಗಿರುವ ಆಕ್ರೋಶ ತಮ್ಮ ಮೇಲೆ ತಿರುಗೀತೆಂಬ ಭೀತಿಯಿಂದ ನಿತ್ಯವೂ ಸಾವಿರಾರು ತಮಿಳರು ತಮಿಳುನಾಡಿಗೆ ಹಿಂತಿರುಗುತ್ತಿದ್ದಾರೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡಿಗೆ ಮರಳಿರುವವರನ್ನು ಕೂಲಂಕಷವಾಗಿ ವಿಚಾರಣೆ ಮಾಡಲಾಗುತ್ತಿದೆ.
ತಮಿಳುನಾಡಿಗೆ ಹೆದರಿ ಓಡಿರುವ ಎಲ್ಲರೂ ಕಾವೇರಿ ಗಲಭೆಯಂತಹ ಮತ್ತೊಂದು ಗಲಭೆ ನಡೆದರೆ ತಮ್ಮ ಪಾಡೇನು ಎಂದು ಹೆದರಿ ಬಂದಿರುವುದಾಗಿ ವಿಚಾರಾಣಾಧಿಕಾರಿಗಳಿಗೆ ತಿಳಿಸಿದ್ದಾರೆ. ರಾಜ್ ಬಿಡುಗಡೆಯಾದ ನಂತರ ಪರಿಸ್ಥಿತಿಯನ್ನು ನಿಯಂತ್ರಿಸುವುದು ಕರ್ನಾಟಕ ಸರ್ಕಾರಕ್ಕೆ ಸಾಧ್ಯವಿಲ್ಲ ಎಂಬುದು ಅವರುಗಳ ಅಭಿಪ್ರಾಯವಾಗಿದೆ.
ಈ ಮಧ್ಯೆ ಬೆಂಗಳೂರಿಗೆ ಆಗಮಿಸಿದ್ದ, ಕರುಣಾನಿಧಿ ಅವರಿಗೆ ರಾಜ್ಯದ ಮುಖ್ಯಮಂತ್ರಿ ಕೃಷ್ಣ ಅವರು ಅಂತಹ ಅಹಿತಕರ ಘಟನೆಗಳು ಏನೂ ನಡೆಯುವುದಿಲ್ಲ ಎಂದು ಅಭಯ ನೀಡಿದ್ದಾರೆ. ಆದರೆ, ತಮಿಳುನಾಡು ಸರ್ಕಾರಕ್ಕೆ ಹಾಗೂ ಕೆಲವು ತಮಿಳು ಭಾಷಿಕರಿಗೆ ಈ ಬಗ್ಗೆ ನಂಬಿಕೆ ಇಲ್ಲ. ಮಂಡ್ಯ, ಚಾಮರಾಜನಗರ, ಬೆಂಗಳೂರು, ಗುಂಡ್ಲುಪೇಟೆಗಳಿಂದ ಭಾರಿ ಸಂಖ್ಯೆಯಲ್ಲಿ ತಮಿಳರು ಚೆನ್ನೈ ಹಾಗೂ ಮತ್ತಿತರ ಪ್ರದೇಶಗಳಿಗೆ ಓಡಿ ಬಂದಿದ್ದಾರೆ ಎಂದು ಸಮೀಕ್ಷಾ ವರದಿಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.