14ರೊಳಗೆ ಸುಪ್ರೀಂ ಕೋರ್ಟ್ಗೆ ಉಭಯ ರಾಜ್ಯಗಳ ಪ್ರಮಾಣಪತ್ರ
ಬೆಂಗಳೂರು : ಟಾಡಾ ಬಂದಿಗಳ ಬಿಡುಗಡೆಯಾಗದ ಹೊರತು ರಾಜ್ ಬಿಡುಗಡೆ ಸಾಧ್ಯವಿಲ್ಲ ಎಂದು ವೀರಪ್ಪನ್ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ತಮಿಳು ನಾಡು ಸರಕಾರಗಳು, ಪ್ರಕರಣವನ್ನು ಶೀಘ್ರ ಇತ್ಯರ್ಥ ಪಡಿಸುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಸೆ. 14ರೊಳಗೆ ಪ್ರಮಾಣ ಪತ್ರ ಸಲ್ಲಿಸಲಿವೆ.
ಈ ವಿಷಯವನ್ನು ಶನಿವಾರ ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ತಿಳಿಸಿದ್ದಾರೆ. ಗೋಪಾಲ್ ಅವರು ಮತ್ತೆ ಕಾಡಿಗೆ ಹೋಗಿ ವೀರಪ್ಪನ್ ಮನವೊಲಿಸಲಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಚೆನ್ನೈವರದಿ : ರಾಜ್ ಬಿಡುಗಡೆಯ ಸಂಧಾನಕ್ಕಾಗಿ ಮೂರು ಬಾರಿ ಕಾಡಿಗೆ ಹೋಗಿ ಬರಿಗೈಯಲ್ಲಿ ಮರಳಿದ ನಕ್ಕೀರನ್ ಪತ್ರಿಕೆಯ ಸಂಪಾದಕ ಗೋಪಾಲ್ ಛಲ ಬಿಡದ ತ್ರಿವಿಕ್ರಮರಂತೆ ಮತ್ತೊಮ್ಮೆ ತಾವು ಕಾಡಿಗೆ ಹೋಗುವುದಾಗಿ ಪ್ರಕಟಿಸಿದ್ದಾರೆ.
ಎರಡೂ ಸರಕಾರಗಳು ವೀರಪ್ಪನ್ನನ್ನು ತೃಪ್ತಿ ಪಡಿಸುವಂತಹ ಹೊಸ ಯೋಜನೆಯನ್ನು ಹಾಗೂ ಅದಕ್ಕೆ ಪೂರಕವಾದ ದಾಖಲೆಗಳನ್ನು ನೀಡಿದರೆ, ತಾವು ಕಾಡಿಗೆ ಮತ್ತೆ ಹೋಗುವುದಾಗಿ ಗೋಪಾಲ್ ಹೇಳಿದರು. ಆದರೆ, ನಿಗದಿತ ದಿನಾಂಕವನ್ನು ಅವರು ತಿಳಿಸಲಿಲ್ಲ.
ಶನಿವಾರ ಇಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಗೋಪಾಲ್ ಎರಡೂ ಸರಕಾರಗಳು ರಾಜ್ಕುಮಾರ್ ಹಾಗೂ ಇತರ ಮೂವರ ಬಿಡುಗಡೆಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ರಾಜ್ ಅವರ ಬಿಡುಗಡೆ ತಡವಾಗಿದೆ. ಈ ಮಾತನ್ನು ಕೇಳುವ ಸ್ಥಿತಿಯಲ್ಲಿ ವೀರಪ್ಪನ್ ಇಲ್ಲ. ಆತ ತನ್ನ ಎರಡು ಪ್ರಮುಖ ಬೇಡಿಕೆಗಳ ವಿಷಯದಲ್ಲಿ ರಾಜಿಗೆ ಸಿದ್ಧನಿಲ್ಲ ಎಂದು ತಿಳಿಸಿದರು.
ರಾಜ್ಕುಮಾರ್ ಅವರನ್ನು ಈ ಬಾರಿ ಕರೆದುಕೊಂಡೇ ವಾಪಸಾಗುವೆ ಎಂದು ಶಪಥ ಮಾಡಿದ್ದ ಗೋಪಾಲ್ ಕಳೆದ ಗುರುವಾರ ಬರಿಗೈಯಲ್ಲಿ ಹಿಂತಿರುಗಿದ್ದರು.