ಆತಂಕದ ಕಾರ್ಮೋಡಕ್ಕೆ ಹೆದರಿದ ಮೋಡ!
ಬೆಂಗಳೂರು : ರಾಜ್ಕುಮಾರ್ ಅವರನ್ನು ಈ ಬಾರಿ ಕರೆದುಕೊಂಡೇ ಬರುತ್ತೇನೆ ಎಂದು ಶಪಥಗೈದು ಕಾಡಿಗೆ ತೆರಳಿ, ಕಾಡಿನಿಂದ ಕಳುಹಿಸಿದ ಕ್ಯಾಸೆಟ್ನಲ್ಲಿ ಕೂಡ ಇದೇ ಅಭಯವನ್ನು ರಾಜ್ಕುಮಾರ್ಗೆ ನೀಡಿದ್ದ ಸಂಧಾನಕಾರ ಗೋಪಾಲ್ ಬರಿಗೈಯಲ್ಲಿ ಕಾಡಿನಿಂದ ನಾಡಿಗೆ ಮರಳುತ್ತಿದ್ದಂತೆ ರಾಜ್ಯದಲ್ಲಿ ಆತಂಕದ ಕಾರ್ಮೋಡ ಕವಿದಿದೆ.
ಕಳೆದ ಕೆಲವು ದಿನಗಳಿಂದಲೂ ಮಳೆಸುರಿಸುತ್ತಿದ್ದ ಕಾರ್ಮೋಡಗಳು ಆತಂಕದ ಕಾರ್ಮೋಡದೊಂದಿಗೆ ಸೆಣಸಲಾರದೆಯೋ ಏನೋ ಹೆದರಿ ಹಿಮ್ಮೆಟ್ಟಿದ್ದು, ರಾಜ್ಯದಲ್ಲಿ ಮಳೆ ಕ್ಷೀಣಿಸಿದೆ. ಕರಾವಳಿ ಕರ್ನಾಟಕದ ಅಲ್ಲಲ್ಲಿ ಮಳೆಯಾಗಿದೆ ಎನ್ನುವುದನ್ನು ಬಿಟ್ಟರೆ, ಒಳನಾಡಿನಲ್ಲಿ ಒಣಹವೆ ಮೂಡಿದೆ.
ಕರಾವಳಿ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಕೇವಲ ಒಂದೆರಡು ಸೆಂಟಿ ಮೀಟರ್ ಮಾತ್ರ ಮಳೆ ಆಗಿದೆ. ಉಳಿದಂತೆ ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಏನೂ ಕಂಡುಬಂದಿಲ್ಲ. ಬೆಂಗಳೂರು ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇತ್ತಾದರೂ, ಆಗಿಂದಾಗ್ಗೆ ಬಿಸಿಲು ಇಣುಕುತ್ತಿತ್ತು.
ಮುನ್ಸೂಚನೆಯಂತೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ಕರಾವಳಿಯ ಕೆಲವು ಪ್ರದೇಶಗಳಲ್ಲಿ ಮಳೆ ನಿರೀಕ್ಷಿಸಲಾಗಿದ್ದು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ.