ದ್ವೀಪಕಲ್ಪವಾದ ರಂಗನತಿಟ್ಟು ಪಕ್ಷಿಧಾಮ
ರಂಗನತಿಟ್ಟು : ತಲಕಾವೇರಿಯ ಮಡಿಲಲ್ಲಿ ಮಳೆರಾಯ ಒಂದೆ ಸಮನೆ ಸುರಿಯುತ್ತಿರುವ ಕಾರಣಕನ್ನಡ ನಾಡಿನ ಹೆಮ್ಮೆಯ ಕೆ.ಆರ್.ಎಸ್. ಭರ್ತಿಯಾಗಿದೆ. ಕನ್ನಂಬಾಡಿಯ ರಕ್ಷಣೆಯ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ.
ಕೊಡಗು ಜಿಲ್ಲೆ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ವಾರಾತ್ಯದಿಂದಲೂ ಮಳೆ ಸುರಿಯುತ್ತಲೇ ಇದೆ. 14 ಸಾವಿರ ಕ್ಯೂಸೆಕ್ಸ್ನಷ್ಟು ಹೆಚ್ಚುವರಿ ನೀರು ಜಲಾಶಯದಿಂದ ಹೊರಹರಿಯುತ್ತಿರುವ ಕಾರಣ ಪಕ್ಷಿಗಳ ಕಾಶಿಯಾದ ರಂಗನತಿಟ್ಟು ಪಕ್ಷಿಧಾಮ ಈಗ ಸಂಪೂರ್ಣ ಜಲಾವೃತವಾಗಿದೆ. ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜನರ ಸುರಕ್ಷತೆಯ ದೃಷ್ಟಿಯಿಂದ ದೋಣಿ ವಿಹಾರ ರದ್ದುಪಡಿಸಲಾಗಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನೀರನ್ನು ಕಂಡು ಸಂತಾನೋತ್ಪತ್ತಿಗೆ ಬಂದಿರುವ ಪಕ್ಷಿಗಳೂ ಹೆದರಿದಂತೆ ಕಂಡುಬರುತ್ತಿವೆ. ಕೆಲವು ಪಕ್ಷಿಗಳು ಹೆದರಿ ವಲಸೆ ಹೋಗಲೂ ಸನ್ನದ್ಧವಾಗಿರುವಂತೆ ತೋರುತ್ತದೆ ಎನ್ನುತ್ತಾರೆ ಪಕ್ಷಿ ಅಧ್ಯಯನ ತಜ್ಞರು. ಬಂಡೆಗಳ ಸಂದಿಯಲ್ಲಿ ಹಾಗೂ ನೆಲದ ಮೇಲೆ ಇಟ್ಟಿದ್ದ ಹಕ್ಕಿಗಳ ಮೊಟ್ಟೆಗಳು ಕಾವೇರಿಯಲ್ಲಿ ಕೊಚ್ಚಿ ಹೋಗಿವೆ. ಪಕ್ಷಿಗಳನ್ನು ನೋಡಲು ಬರುತ್ತಿರುವ ಪ್ರವಾಸಿಗರು ಧುಮ್ಮಿಕ್ಕಿ ಹರಿಯುತಿಹ ಕಾವೇರಿಯ ಸೊಬಗನ್ನು ಸವಿಯುತ್ತಿದ್ದಾರೆ.