ವೀರಪ್ಪನ್ ಸಹಚರರ ಬಿಡುಗಡೆಯ ಆದೇಶದ ಕಡತಕ್ಕೆ ಕೃಷ್ಣ ಸಹಿ
ಬೆಂಗಳೂರು : ಟಾಡಾ ಅಡಿಯಲ್ಲಿ ಮೈಸೂರು ಜೈಲಿನಲ್ಲಿ ಬಂಧಿತರಾಗಿರುವ ವೀರಪ್ಪನ್ ಸಹಚರರನ್ನು ಬಿಡುಗಡೆ ಮಾಡುವ ಆದೇಶವಿದ್ದ ಕಡತಕ್ಕೆ ಮುಖ್ಯಮಂತ್ರಿ ಕೃಷ್ಣ ಸೋಮವಾರ ಸಂಜೆ ಸಹಿ ಹಾಕಿದ್ದಾರೆ.
ಸಹಚರರ ಬಿಡುಗಡೆ ಪ್ರಕ್ರಿಯೆಗೆ ಚಾಲನೆ : ರಾಜ್ ಮತ್ತು ಮೂವರನ್ನು ಅಪಹರಿಸಿರುವ ವೀರಪ್ಪನ್ ಸರ್ಕಾರದ ಮುಂದೆ ಇಟ್ಟಿರುವ 10 ಬೇಡಿಕೆಗಳ ಪೈಕಿ ಮೈಸೂರು ಜೈಲಿನಲ್ಲಿರುವ ತನ್ನ ಸಹಚರರನ್ನು ಬಿಡುಗಡೆ ಮಾಡಬೇಕೆಂಬುದೂ ಒಂದು ಬೇಡಿಕೆಯಾಗಿದೆ. ಅವರನ್ನು ಬಿಡುಗಡೆ ಮಾಡಲು ಪೂರೈಸಬೇಕಾದ ಕಾನೂನು ಪ್ರಕ್ರಿಯೆಗೆ ಸಾಕಷ್ಟು ಸಮಯ ಬೇಕಿರುವುದರಿಂದ ಸರ್ಕಾರ ಈಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಸುದ್ದಿಗಾರರಿಗೆ ಕೃಷ್ಣ ತಿಳಿಸಿದರು. ವೀರಪ್ಪನ್ ಸಹಚರರ ಬಿಡುಗಡೆಗೆ ಮುನ್ನಾ ಕ್ರಮಗಳನ್ನು ಕೈಗೊಳ್ಳುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ಗಳಿಗೆ ಈಗಾಗಲೇ ಆದೇಶಿಸಲಾಗಿದೆ. ಅವರು ಜಾಮೀನಿಗೆ ಅರ್ಜಿ ಹಾಕಿದರೆ, ಅದನ್ನು ವಿರೋಧಿಸದೆ ಬಿಡುಗಡೆ ಪ್ರಕ್ರಿಯೆಯನ್ನು ಸುಗಮಗೊಳಿಸಲಾಗುವುದು ಎಂದರು.
ಅವನ ಮೌನ ಅಸಹನೀಯ : ಭಾನುವಾರ ಚೆನ್ನೈ ಸಭೆ ಮುಗಿಸಿ ಬಂದಾಗಿನಿಂದ ವೀರಪ್ಪನ್ನಿಂದ ಯಾವ ಮಾಹಿತಿಯೂ ಬಂದಿಲ್ಲ. ಕೆಲವು ಮೂಲಗಳ ಪ್ರಕಾರ, ನಕ್ಕೀರನ್ ಗೋಪಾಲ್ ಅವರು ರಾಜ್ ಜೊತೆ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ವೀರಪ್ಪನ್ ಬೇಡಿಕೆಗಳಿಗೆ ನಾವು ಕಳುಹಿಸಿಕೊಟ್ಟಿರುವ ಉತ್ತರಕ್ಕೆ ಇದುವರೆಗೂ ಆತನಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ಆತನ ಈ ಮೌನ ಅಸಹನೀಯವಾಗಿದೆ ಎಂದು ಕೃಷ್ಣ ಹತಾಷೆ ವ್ಯಕ್ತಪಡಿಸಿದರು.
ಮಂಗಳವಾರದೊಳಗೆ ರಾಜ್ಕುಮಾರ್ ಅವರನ್ನು ವೀರಪ್ಪನ್ ಬಿಡುಗಡೆ ಮಾಡುತ್ತಾನೆ ಎಂಬ ಭರವಸೆ ಇಟ್ಟುಕೊಂಡಿದ್ದೇವೆ. ಆದರೂ ಅವನು ಹೀಗೇ ಎಂದು ಹೇಳಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ ಇಂಥ ದಿನವೇ ಬಿಡುಗಡೆ ಮಾಡುತ್ತಾನೆ ಎಂದು ಖಚಿತವಾಗಿ ಹೇಳಲು ಸದ್ಯಕ್ಕೆ ಸಾಧ್ಯವಿಲ್ಲ ಎಂದರು.
ಒಡೆಯನ ಬರವಿನ ನಿರೀಕ್ಷೆ : ಅಣ್ಣಾವ್ರ ಮನೆಯಲ್ಲಿ ಸೋಮವಾರ ಒಡೆಯನ ಬರವಿನ ನಿರೀಕ್ಷೆ. ನೋವನ್ನು ಹೊಟ್ಟೆಯಲ್ಲಿ ಮಡುಗಟ್ಟಿಸಿರುವ ಪಾರ್ವತಮ್ಮ ರಾಜ್ ಕುಮಾರ್, ವಾರದಿಂದ ಗಡ್ಡ ತೆಗೆಯದೆ ಸೋ ಎನ್ನುತ್ತಿರುವ ರಾಘವೇಂದ್ರ, ಯೋಚನೆಯ ಛಾಯೆ ಹೊತ್ತ ಪುನೀತ್ ಎಲ್ಲರಲ್ಲೂ ಆಶಾಭಾವನೆ ಮೂಡಿತ್ತು. ಈಗ ಬರಬಹುದು, ಆಗ ಬರಬಹುದು ಎಂಬ ನಿರೀಕ್ಷೆ ಅವರಲ್ಲಿ. ಆದರೆ ಈ ನಿರೀಕ್ಷೆಯಲ್ಲೇ ದಿನ ಕಳೆದುಹೋಯಿತು.
ಮಂಗಳವಾರವಾದರೂ ರಾಜ್ ಬರುವರೇ? ಬಂದರೆ ತಕ್ಷಣ ನಿಮಗೆ ತಿಳಿಸುತ್ತೇವೆ.