ಎರಡು ಹೈಕೋರ್ಟ್ಪೀಠಕ್ಕೆ ಆಗ್ರಹ
ಬೆಂಗಳೂರು : ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳಲ್ಲಿ ಹಾಗೂ ಗುಲ್ಬರ್ಗಾದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಪ್ರತಿಭಟನೆಗಳು ನಡೆಯುತ್ತಿದ್ದು, ಪೀಠಕ್ಕಾಗಿ ಬಲವಾದ ಒತ್ತಡ ಇರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಹಾಗೂ ಗುಲ್ಬಾರ್ಗಾದಲ್ಲಿ ಎರಡೂ ಕಡೆ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂದು ಮಾಜಿ ಸಭಾಪತಿ ಡಿ.ಬಿ. ಕಲ್ಮಣ್ಕರ್ ತಿಳಿಸಿದ್ದಾರೆ.
ಗುಲ್ಬರ್ಗಾದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಕಳೆದೆರಡು ತಿಂಗಳುಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದು, ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಲಾಗಿದೆ. ಇದರಿಂದ ಕಕ್ಷಿದಾರರಿಗೆ ತೀವ್ರ ತೊಂದರೆಯುಂಟಾಗಿದೆ. ಇದನ್ನು ಸರಕಾರ ಮನಗಂಡು ಕೂಡಲೇ ಎರಡೂ ಕಡೆ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹೈದರಾಬಾದ್ ಕರ್ನಾಟಕ ಪ್ರದೇಶವು ಬೆಂಗಳೂರಿನಿಂದ ಬಹುದೂರ ಇರುವುದೇ ಅಲ್ಲದೆ ಬಹಳ ಹಿಂದುಳಿದ ಪ್ರದೇಶವಾಗಿದ್ದು, ಈ ಪ್ರದೇಶದ ಅಭಿವೃದ್ಧಿಗೆ ಹೈಕೋರ್ಟ್ ಪೀಠ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಮಿಗಿಲಾಗಿ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ಸಂಬಂಧಿಸಿದಂತೆ ಪ್ರದೇಶದ ಸಿವಿಲ್ ನ್ಯಾಯಾಲಯಗಳಲ್ಲಿ ನೂರಾರು ಪ್ರಕರಣಗಳಿದ್ದು, ದೂರದ ಬೆಂಗಳೂರಲ್ಲಿರುವ ಹೈಕೋರ್ಟ್ಗೆ ಹೋಗಲಾರದೆ ಬಹಳಷ್ಟು ಮಂದಿ ನ್ಯಾಯ ವಂಚಿತರಾಗಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.