ಮಕ್ಕಳಿವರೇನಮ್ಮ ಮೆಚ್ಯೂರಿಟಿ ಬಾಂಡ್
ನಗರ ಜೀವನದ ಸಂಕಷ್ಟಗಳು ಒಂದೆರಡಲ್ಲ. ಮಕ್ಕಳಿಗೇನೋ ಬೇಸಗೆ ರಜಾ ಬರುತ್ತೆ. ಆದರೆ ಹೆತ್ತವರಿಗೆ ಬಿಡುವಿರದ ದುಡಿತ ಬೆಂಬಿಡದು.
ಹಾಗಾಗಿ ಮಕ್ಕಳ ರಜೆ ಹೆತ್ತವರ ಪಾಲಿಗೆ ಸಜೆ. ರಜಾದಲ್ಲಿ ಮಕ್ಕಳನ್ನೇನು ಮಾಡೋದು ಎನ್ನುವ ಪ್ರಶ್ನೆ.
ಅದೊಂದು ಕಾಲವಿತ್ತು. ರಜಾ ಬಂತೆಂದರೆ ಮಕ್ಕಳ ಸವಾರಿ ಅಜ್ಜಿ ಮನೆಗೆ ಹೊರಡುತ್ತಿತ್ತು. ಕಾನ್ವೆಂಟಿನಲ್ಲಿ ಓದುವ ಮಕ್ಕಳನ್ನು ಹಳ್ಳಿಯಲ್ಲಿರುವ ಅಜ್ಜಿ ಮನೆಗೆ ಕಳಿಸಿದರೆ ಅವು ಅಲ್ಲಿ ಅಶಿಸ್ತು ಕಲಿಯುತ್ತವೆ ಎಂಬ ಆತಂಕ ಹೆತ್ತವರಿಗೆ. ಹಾಗಾಗಿ ಮಕ್ಕಳ ಪಾಲಿಗೆ ಬೇಸಿಗೆ ಶಿಬಿರಗಳೇ ಲಾಸ್ಟ್ ರೆಸಾರ್ಟ್.
ಬೇಸಗೆ ಶಿಬಿರಕ್ಕೂ ಸ್ಕೂಲಿಗೂ ಅಂತಹ ವೆತ್ಯಾಸವೇನಿಲ್ಲ. ಶಿಬಿರ ಮನರಂಜನೆ, ಆಟಪಾಟಗಳ ತಾಣವಾಗದೆ, ಮುಂದಿನ ತರಗತಿಗೆ ಮಕ್ಕಳನ್ನು ' ತ ಯಾರಿ" ಮಾಡುವ ಫ್ಯಾಕ್ಟರಿಗಳಾಗುತ್ತಿವೆ. ಸಮ್ಮರ್ ಕ್ಯಾಂಪ್ಗಳು ಥೇಟ್ ಕಾನ್ಸಂಟ್ರೇಷನ್ ಕ್ಯಾಂಪ್ಗಳ ಹಾಗಾಗಿವೆ. ' ಅಲ್ಲಿ ಯಾವುದಕ್ಕೂ ಸ್ವಾತಂತ್ರವಿಲ್ಲ. ವರು ಕಲಿಸಿದ್ದನ್ನು ಕಲಿಯಬೇಕು ನನಗೆ ಚಿತ್ರಕಲೆಯಲ್ಲಿ ಆಸಕ್ತಿಯಿಲ್ಲ. ಆದರೆ ಚಿತ್ರ ಬರಿ ಅಂತ ಒತ್ತಾಯಿಸುತ್ತಾರೆ. " ಅನ್ನುತ್ತಾನೆ ಪುಟಾಣಿ ಅವಿನಾಶ್.
ಎಲ್ಲರನ್ನೂ ಒಂದೇ ಅಚ್ಚಿನಲ್ಲಿ ಎರಕ ಹೊಯ್ಯುವ, ಪ್ರತಿಯಾಬ್ಬರೂ ಸಕಲ ಕಲಾವಲ್ಲಭರಾಗಬೇಕೆನ್ನುವ ಹುಮ್ಮಸ್ಸಿನಲ್ಲಿ ಈಗಾಗಲೇ ನಮ್ಮ ಶಿಕ್ಷಣ ವ್ಯವಸ್ಥೆ ಎಲ್ಲರನ್ನೂ ಒಂದೇ ರೀತಿ ನೋಡುತ್ತಿದೆ. ಹೀಗಾಗಿ ಮಕ್ಕಳ ಸಹಜ ಸ್ಫೂರ್ತಿ, ಜನ್ಮದತ್ತ ಪ್ರತಿಭೆಗಳ ವಿಕಾಸಕ್ಕೆ ಅವಕಾಶವೇ ಇಲ್ಲ. ಹಿಂದೆಲ್ಲ ಒಂದು ತರಗತಿಯಲ್ಲಿ ಒಬ್ಬ ಹಾಡುಗಾರ, ಒಬ್ಬ ಆಟಗಾರ, ಒಬ್ಬ ಕವಿ, ಒಬ್ಬ ಭಾಷಣಕಾರ ಇರುತ್ತಿದ್ದ. ಈಗ ಪ್ರತಿಯಾಬ್ಬನೂ ಹಾಡುಗಾರನೇ, ಪ್ರತಿಯಾಬ್ಬನೂ ಕಲಾವಿದನೇ.
ಈ ಶ್ರೇಷ್ಠತೆಯ ವ್ಯಸನ ಕಂಪ್ಲೀಟ್ ಮ್ಯಾನ್ ಆಗುವ ಆಶೆ ಒಂದು ಸಂಸ್ಕೃತಿಯ ವೈವಿಧ್ಯತೆಯನ್ನೇ ಹಾಳುಮಾಡುತ್ತದೆ. ಹಾಡುಗಾರ ಕಲಾವಿದನಾಗ ಹೊರಟು ಎರಡೂ ಆಗದೆ ಸೊರಗಿದರೆ, ಎಲ್ಲವನ್ನೂ ಸ್ವೀಕರಿಸಿ ಸಂತೋಷ ಪಡುವ ಪ್ರೇಕ್ಷಕ, ತಾನೇ ಅಭಿನಯಿಸಲು ಹೊರಟು ತನ್ನ ಸಹಜ ಸಂತೋಷವನ್ನೇ ಕಳೆದುಕೊಳ್ಳುತ್ತಾನೆ.
ಆರ್ಥಿಕವಾಗಿಯೂ ಸಮ್ಮರ್ ಕ್ಯಾಂಪ್ಗಳು ಹೆತ್ತವರ ಪಾಲಿಗೆ ಹೊರೆಯೇ. ಮಕ್ಕಳು ತಮ್ಮ ಅಸ್ತಿತ್ವದಿಂದಾಗಿ ಹೊರೆಯಾಗುವುದಕ್ಕಿಂತ, ಆರ್ಥಿಕವಾಗಿ ಹೊರೆಯಾಗುವುದು ಒಳ್ಳೆಯದು ಎಂದು ಹೆತ್ತವರು ಭಾವಿಸಿದ್ದರೆ ಯಾರೇನು ಮಾಡುವುದಕ್ಕಾಗುತ್ತದೆ ?
ಒಂದು ಸಮೀಕ್ಷೆ ಪ್ರಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ವೆಚ್ಚವಾಗುವ ಹಣದಲ್ಲಿ ಶೇ 60ರಷ್ಟು ಖರ್ಚಾಗುವುದು ವಿದ್ಯೆಗಾಗಿ ಅಲ್ಲ. ವರ್ಚಸ್ಸಿಗಾಗಿ. ಪ್ರಿ-ನರ್ಸರಿ ಕೂಡ ಮಗು ಇಂಜಿನಿಯರ್ ಆಗುವುದಕ್ಕೆ ನೆರವಾಗುವ ಅಂಶ ಎಂಬ ನಂಬಿಕೆಯನ್ನು ಸ್ಕೂಲುಗಳು ಹತ್ತು ವರ್ಷಗಳ ಹಿಂದೆ ಬಿತ್ತಿದ್ದು ಇವತ್ತು ಸತ್ಯವಾಕ್ಯವಾಗಿಬಿಚ್ಚಿದೆ.
ಬೆಂಗಳೂರಿನಲ್ಲಿ ರಸ್ತೆಗೊಂದು ಸಮ್ಮರ್ ಕ್ಯಾಂಪ್ಗಳು ನೆಡೆಯುತ್ತವೆ. ಎಸ್ಸೆಸ್ಸೆಲ್ಸಿ ಓದುವ ಹುಡುಗರು ಇ-ಕಾಮರ್ಸ್, ಜಾವಾ ಇತ್ಯಾದಿ ಕೋರ್ಸುಗಳಲ್ಲಿ ರಜೆ ಕಳೆಯುತ್ತಿದ್ದಾರೆ. ತನ್ಮೂಲಕ ಪ್ರತಿಯಾಬ್ಬರೂ ಒಂದೊಂದು ಪೀಸಿಗಳಾಗುತ್ತಿದ್ದಾರೆ. ಕಾಲಕಾಲಕ್ಕೆ ಅದನ್ನು ಅಪ್ಡೇಟ್, ಅಪ್ಗ್ರೇಡ್ ಮಾಡಲಾಗುತ್ತದೆ . ಹೀಗೆ ಅಪ್ಗ್ರೇಡ್ ಮಾಡುವ ಕೇಂದ್ರಗಳಾಗಿ ಸಮ್ಮರ್ ಕ್ಯಾಂಪ್ಗಳು ಕೆಲಸ ಮಾಡುತ್ತವೆ.
ಹೀಗಾಗಿ ಹುಡುಗರು ಮಾಹಿತಿಗಳ ಸಾಗರವಾಗುತ್ತಾ ಅಳದಲ್ಲಿ shallow ಆಗುತ್ತಾ ಹೋಗುತ್ತಿದ್ದಾರೆ ಎನ್ನುವುದು ಕೇವಲ ಊಹೆಯಷ್ಟೆ ಅಲ್ಲ, ಮನಶ್ಯಾಸ್ತ್ರಜ್ಞರ ಪ್ರಕಾರ ಮಕ್ಕಳು ಜನ್ಮದತ್ತ ಕೌಶಲ್ಯಗಳನ್ನು ಕಳೆದು ಕೊಳ್ಳುತ್ತಿದ್ದಾರೆ. ಜಪಾನ್ನಂಥ ದೇಶಗಳಲ್ಲಿ ಆಟಿಕೆಗಳು ಮಕ್ಕಳನ್ನು ತಂತ್ರಜ್ಞರನ್ನಾಗಿಸುವ ದೃಷ್ಟಿಯಿಟ್ಟುಕೊಂಡೇ ತಯಾರಾಗುತ್ತವೆ.
ಇದರಿಂದಾಗುವ cultural damage ನ ಬಗ್ಗೆ ಯೋಚಿಸುವುದಕ್ಕೆ ಯಾರಿಗೂ ವೇಳೆಯಿಲ್ಲ. ಮಕ್ಕಳು ಹೆತ್ತವರ ಪಾಲಿಗೆ ಕ್ರೆಡಿಟ್ ಕಾರ್ಡ್, ಭವಿಷ್ಯನಿಧಿ ಹಾಗೂ ಒಂದಲ್ಲ ಒಂದು ದಿನ ಮೆಚ್ಯೂರ್ ಆಗುವ ಇಂದಿರಾ ವಿಕಾಸ ಪತ್ರ.
ಇವತ್ತು ಐದು ಸಾವಿರ ಹೂಡಿದರೆ ಮುಂದೆ ಐವತ್ತು ಸಾವಿರ ತಂದುಕೊಡುವ ಸಾವಧಿ ಠೇವಣಿ !