3ಸಣ್ಣ ಕೈಗಾರಿಕೆಗಳಿಗೆ ಬಹುಮಾನ
ಬೆಂಗಳೂರು : ರಾಜ್ಯದ ಮೂರು ಸಣ್ಣ ಕೈಗಾರಿಕೆಗಳು ಐವತ್ತು ಸಾವಿರ ರೂಗಳ ನಗದು ಬಹುಮಾನಕ್ಕೆ ಆಯ್ಕೆಯಾಗಿವೆ. ಕೈಗಾರಿಕಾ ಅಭಿವೃದ್ಧಿ ಆಯೋಗದ ರಾಜ್ಯ ಆಯುಕ್ತ ಮತ್ತು ತಾಂತ್ರಿಕಾಭಿವೃದ್ಧಿ ಮಂಡಳಿಯ ಅಧ್ಯಕ್ಷ ವಿ.ಪಿ ಬಾಳಿಗಾರ್ ಈ ಮೂರು ಸಣ್ಣ ಕೈಗಾರಿಕೆಗಳನ್ನು ಆಯ್ಕೆ ಮಾಡಿದ್ದಾರೆ.
ಸ್ಥಳೀಯ ಕಚ್ಚಾ ಸಾಮಾಗ್ರಿಗಳನ್ನು ಹೆಚ್ಚಾಗಿ ಬಳಸಿಕೊಳ್ಳುವ ಮತ್ತು ಆಹಾರ ಸಂಸ್ಕರಣೆ ಮತ್ತು ಸಂರಕ್ಷಣೆಯ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಗದಗದ ನಿಯೋಟೆಕ್ ಬಯೋಪ್ರೊಡಕ್ಟ್ಸ್ ಸ್ಥಳೀಯ ಕಚ್ಚಾ ಪದಾರ್ಥಗಳನ್ನು ಬಳಸಿಕೊಂಡು ಪಶು ಆಹಾರ ತಯಾರಿಸುತ್ತಿದ್ದು ಈ ಸಾಲಿನ ನಗದು ಬಹುಮಾನವನ್ನು ಪಡೆದುಕೊಂಡಿದೆ.
ರಕ್ಷಣಾ ಮತ್ತು ಅಂತರಿಕ್ಷ ಉಪಗ್ರಹಗಳಿಗೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಸುತ್ತಿರುವ ಬೆಂಗಳೂರಿನ ಸಿ.ಎಮ್. ಇಕ್ವಿಪ್ಮೆಂಟ್ಸ್ ಪ್ರೆೃವೇಟ್ ಲಿಮಿಟೆಡ್ ಎರಡನೆಯ ಬಹುಮಾನವನ್ನು ಪಡೆದುಕೊಂಡಿದೆ. ಬೆಂಗಳೂರಿನ ದಿ ಸ್ಪೆಷಲ್ ಟೂಲ್ ಮ್ಯಾನುಫ್ಯಾಕ್ಚರ್ಸ್ ವಾಷಿಂಗ್ ಮೆಷಿನ್, ಟಿವಿ ಮತ್ತು ಕಂಪ್ಯೂಟರ್ ಕ್ಯಾಬಿನ್ಗಳ ನ್ನು ತಯಾರಿಸುತ್ತಿದ್ದು , ಮೂರನೆಯ ಸ್ಥಾನ ಪಡೆದಿದೆ.