ಸ್ವಚ್ಛತಾ ಕಾರ್ಯಕ್ಕೆ ಸ್ವತಃ ಬೀದಿಗಿಳಿದ ಶಿವಮೊಗ್ಗ ಜಿಲ್ಲಾಧಿಕಾರಿ ದಯಾನಂದ್
ಶಿವಮೊಗ್ಗ, ಜೂನ್ 5: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬುಧವಾರ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಸ್ವತಃ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಆಯ್ದು ಹೆಕ್ಕಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆದರು.
ತಮ್ಮ ಜತೆಗೆ ಮಗ ಅಮೋಘ್ ಶಂಕರ್ನನ್ನೂ ಕರೆದುಕೊಂಡು ಹೋಗಿ ತ್ಯಾಜ್ಯ ಸಂಗ್ರಹದ ಕಾರ್ಯಕ್ಕೆ ತೊಡಗಿಸಿದ್ದು ಮತ್ತೊಂದು ವಿಶೇಷ. ಪ್ಲಾಸ್ಟಿಕ್ ವಿರೋಧ ಆಂದೋಲನದ ಮೂಲಕ ಸಾರ್ವಜನಿಕರಲ್ಲಿ ಪ್ರಜ್ಞೆ ಮೂಡಿಸುವುದು ಅವರ ಉದ್ದೇಶವಾಗಿತ್ತು.
ಸ್ವತಃ ಜಿಲ್ಲಾಧಿಕಾರಿ ಅವರೇ ಬೀದಿಗಿಳಿದು ಸ್ವಚ್ಛತಾ ಕೆಲಸದ ನೇತೃತ್ವ ವಹಿಸಿಕೊಂಡರು. ಮಹಾನಗರ ಪಾಲಿಕೆ ಮೇಯರ್ ಲತಾ ಗಣೇಶ್, ಆಯುಕ್ತೆ ಚಾರುಲತಾ ಸೋಮಲ್, ಅರಣ್ಯ ಇಲಾಖೆಯ ಸಿಬ್ಬಂದಿ, ಶಿವಮೊಗ್ಗದ ವಿವಿಧ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ಪಾಲ್ಗೊಂಡರು.
ಬೆಳಿಗ್ಗೆಯೇ ಕೈಗೆ ಗ್ಲೌಸ್ ತೊಟ್ಟು ಸಾಗಿದ ಜಿಲ್ಲಾಧಿಕಾರಿ ದಯಾನಂದ್, ಗಾಂಧಿ ಬಜಾರ್ ಮತ್ತು ಗಾರ್ಡನ್ ಏರಿಯಾ ರಸ್ತೆಗಳಲ್ಲಿ ಪ್ಲಾಸ್ಟಿಕ್ ಕಸಗಳನ್ನು ಹೆಕ್ಕಿದರು. ಕೆಲವು ಕಟ್ಟಡಗಳ ಬದಿ ಹಾಗೂ ಖಾಲಿ ಜಾಗಗಳಲ್ಲಿ ತುಂಬಾ ಕಸ ಇರುವುದನ್ನು ಕಂಡು ಕೋಪಗೊಂಡ ಅವರು, ಕಟ್ಟಡದಲ್ಲಿದ್ದವರಿಗೆ ಎಚ್ಚರಿಕೆ ನೀಡಿ, ಸ್ವಚ್ಛಗೊಳಿಸುವಂತೆ ಸೂಚಿಸಿದರು.
ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನ
ಶಿವಮೊಗ್ಗ ಮಹಾನಗರ ಪಾಲಿಕೆಯ ಎಲ್ಲ 35 ವಾರ್ಡ್ಗಳಿಗೆ ಮಕ್ಕಳನ್ನು ಕಳುಹಿಸಿ ಅವರಿಂದ ಕಸ ಸಂಗ್ರಹಿಸಲಾಯಿತು. ಕುವೆಂಪು ರಂಗಮಂದಿರದಲ್ಲಿ ಸೇರಿದ ಮಕ್ಕಳನ್ನು ತಂಡಗಳಾಗಿ ವಿಂಗಡಿಸಿ ಅವರನ್ನು ವಾಹನಗಳಲ್ಲಿ ನಿರ್ದಿಷ್ಟ ವಾರ್ಡ್ಗಳಿಗೆ ಕರೆದೊಯ್ಯಲಾಯಿತು. ಬಳಿಕ ಅವರು ಸಂಗ್ರಹಿಸಿದ ಪ್ಲಾಸ್ಟಿಕ್ ಕಸಗಳನ್ನು ರಂಗಮಂದಿರದ ಬಳಿ ತಂದು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲು ಪ್ರದರ್ಶಿಸಲಾಯಿತು.
ಮಲೆನಾಡಿನಲ್ಲೂ ಮಳೆ ಇಲ್ಲ
ಶಿವಮೊಗ್ಗವನ್ನು ಹಸಿರು ಜಿಲ್ಲೆ ಎಂದು ಕರೆಯುತ್ತೇವೆ. ಹಸಿರು ತೋರಣ, ಪಶ್ಚಿಮ ಘಟ್ಟದ ಹೆಬ್ಬಾಗಿಲು ಎಂಬೆಲ್ಲ ವಿಶೇಷಣಗಳಿವೆ. ಆದರೆ ಈ ಮಲೆನಾಡಿನಲ್ಲಿಯೂ ಮಳೆ ಇಲ್ಲದೆ ಎಷ್ಟು ಒದ್ದಾಡುತ್ತಿದ್ದೇವೆ ಎಂದು ನೋಡುತ್ತಿದ್ದೇವೆ. ಇದಕ್ಕೆ ಕಾರಣ ಪ್ರಾಕೃತಿಕ ಅಸಮತೋಲನ. ಮರಗಿಡಗಳನ್ನು ಬೆಳೆಸದೆ ಇರುವುದು, ಇರುವ ಮರಗಳನ್ನು ಕಡಿಯುವುದು, ಪ್ಲಾಸ್ಟಿಕ್ ತ್ಯಾಜ್ಯಗಳು ಹಾಗೂ ಸ್ವಚ್ಛತೆ ಕುರಿತು ತಿಳಿವಳಿಕೆ ಇಲ್ಲದಿರುವುದು ಸಹ ಕಾರಣ ಎಂದು ಜಿಲ್ಲಾಧಿಕಾರಿ ದಯಾನಂದ್ ತಿಳಿಸಿದರು.
ಮಕ್ಕಳಿಂದ ಸ್ವಚ್ಛತಾ ಕಾರ್ಯ
ಪ್ಲಾಸ್ಟಿಕ್ ತ್ಯಾಜ್ಯದ ಕುರಿತು ಬಗ್ಗೆ ಮಕ್ಕಳಲ್ಲಿ ಹಾಗೂ ಸಮಾಜದಲ್ಲಿ ಅರಿವು ಮೂಡಿಸಲು. ಮಕ್ಕಳನ್ನು 35 ವಾರ್ಡ್ಗಳಿಗೆ 35 ವಾಹನಗಳಲ್ಲಿ ಕಳಿಸಲಾಗಿತ್ತು. ಆ ಮಕ್ಕಳಿಂದ ಎಲ್ಲ ವಾರ್ಡ್ಗಳ ಮೂಲೆ ಮೂಲೆಯಲ್ಲಿಯೂ ಪ್ಲಾಸ್ಟಿಕ್ ಹೆಕ್ಕಿ ಒಂದು ಕಡೆ ಶೇಖರಣೆ ಮಾಡಿಸಲಾಯಿತು. ಬಳಿಕ ಈ ಎಲ್ಲ ಕಸವನ್ನು ಕುವೆಂಪು ರಂಗಮಂದಿರಕ್ಕೆ ತರಲಾಯಿತು. ನಾವು ಎಷ್ಟು ನಿತ್ಯ ಎಷ್ಟು ಕಸ ಮಾಡುತ್ತೇವೆ ಎಂಬುದನ್ನು ತೋರಿಸುವುದು ಇದರ ಉದ್ದೇಶ ಎಂದು ವಿವರಿಸಿದರು.
ಒಂದು ಗಂಟೆಯಲ್ಲಿ ಎಷ್ಟು ಕಸ ಆಗುತ್ತದೆ?
ಶಿವಮೊಗ್ಗ ನಗರದಲ್ಲಿ ಸುಮಾರು ಮೂರೂವರೆ ಲಕ್ಷ ಜನ ಇದ್ದಾರೆ. ಒಬ್ಬೊಬ್ಬರು ಒಂದು ದಿನದಲ್ಲಿ ಒಂದೊಂದು ಪ್ಲಾಸ್ಟಿಕ್ ಬಾಟಲಿ ನೀರು ಕುಡಿದು ಬಾಟಲಿ ಬಿಸಾಕಿದರೂ ಮೂರೂವರೆ ಲಕ್ಷ ಕಸ ಆಗುತ್ತದೆ. ಅವುಗಳನ್ನು ರಾಶಿ ಹಾಕಿದರೆ ಎಷ್ಟು ದೊಡ್ಡ ಆಗಬಹುದು ಎಂಬ ಅರಿವು ಅವರಿಗೆ ಆಗಬಹುದು. ಒಂದು ಗಂಟೆ ಅಥವಾ ಒಂದು ದಿನದಲ್ಲಿ ಒಂದೊಂದೇ ಕಸ ಎಸೆದರೂ ಎಷ್ಟೊಂದು ಕಸವಾಗುತ್ತದೆ ಎಂದು ಹೇಳಿದರು.
ಜನರು ಸಹಕರಿಸಬೇಕು
ಜನರಲ್ಲಿ ತಾವು ಎಸೆಯುವ ಕಸದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಇರಬೇಕು. ಒಂದು ಕಸ ಎಷ್ಟೊಂದು ದೊಡ್ಡ ಕಸದ ರಾಶಿಗೆ ಕಾರಣವಾಗುತ್ತದೆ ಎಂಬುದು ಗೊತ್ತಾಗಬೇಕು. ಮಿಗಿಲಾಗಿ ಮಕ್ಕಳಲ್ಲಿಯೂ ಆ ಪ್ರಜ್ಞೆ ಬೆಳೆಸಿದರೆ ಸಮಾಜಕ್ಕೆ ಭವಿಷ್ಯದಲ್ಲಿ ಸಹಕಾರಿಯಾಗುತ್ತದೆ. ಈ ಮೂಲಕ ಸಮಾಜಕ್ಕೆ ಸಂದೇಶ ನೀಡಿದಂತೆ ಆಗುತ್ತದೆ. ಜನರು ಪ್ರಕೃತಿ ಬಗ್ಗೆ ಒಲವು ಬೆಳೆಸಿಕೊಂಡು ಅದರ ಸಮತೋಲನಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.