ಇಲಿ ಹಿಡಿಯುತ್ತಿದ್ದ ಸಮುದಾಯದ ಬದುಕನ್ನು ಬಿಲದಿಂದ ಎತ್ತಿದ ನಿವೃತ್ತ ಅಧಿಕಾರಿ
Recommended Video
ಪಾಟ್ನಾ, ಜನವರಿ 30: ಬಿಹಾರದಲ್ಲಿ ಒಂದು ಸಮುದಾಯವಿದೆ. ಇಲಿ ಹಿಡಿಯುವುದೇ ಅವರ ಕಾಯಕ. ಅವರಲ್ಲಿ ಶಿಕ್ಷಣವಿಲ್ಲ. ಶಿಕ್ಷಣ ಪಡೆಯಲು ಹಣವೂ ಇಲ್ಲ. ಇಲಿಗಳೇ ಅವರ ಬದುಕಿನ ಮೂಲ. 'ಮುಸಾಹರ್' ಎನ್ನುವುದು ಈ ಸಮುದಾಯದ ಹೆಸರು.
ಹೊಲಗಳಲ್ಲಿನ ಇಲಿಗಳನ್ನು ಹಿಡಿದು ತಿನ್ನುವ ಅವರನ್ನು ಸಮಾಜ ಅಸ್ಪೃಶ್ಯರೆಂದು ಪರಿಗಣಿಸಿದೆ. ಹೀಗಾಗಿ ಯಾವ ಸವಲತ್ತುಗಳನ್ನು ಪಡೆದುಕೊಳ್ಳಲಾಗದೆ ಬಡತನ ರೇಖೆಗಿಂತ ಕೆಳಗಿನ ಮಟ್ಟದಲ್ಲಿಯೇ ಜೀವಿಸುತ್ತಿದ್ದಾರೆ. ತಮ್ಮಂತೆಯೇ ಮಕ್ಕಳೂ ಇಲಿ ಹಿಡಿಯುವ ವೃತ್ತಿಯನ್ನೇ ಮಾಡಿಕೊಳ್ಳಲಿ ಎಂದು ಬಯಸುವ ಪೋಷಕರಿಗೆ ಶಿಕ್ಷಣ ಬೇಕೆನಿಸುವುದಿಲ್ಲ, ಅದರ ಬಗ್ಗೆ ಪರಿಕಲ್ಪನೆಯೂ ಇಲ್ಲ.
ಆದರೆ, ಆ ಸಮುದಾಯದ ಸಂಕಷ್ಟಮಯ ಬದುಕಿನಲ್ಲೀಗ ತಂಗಾಳಿ ಬೀಸಲು ಆರಂಭಿಸಿದೆ. ಮಹತ್ವಾಕಾಂಕ್ಷೆಯ ಸಣ್ಣ ಪ್ರಯತ್ನ ಸಮುದಾಯದ ಬದುಕನ್ನು ಬದಲಿಸುವತ್ತ ಸಾಗಿದೆ. ಅದನ್ನು ಸರ್ಕಾರವೂ ಗುರುತಿಸಿದೆ.
ಚಿಗುರಿದ ಕನಸು! ಹಳ್ಳಿಯ ಬರದ ಬವಣೆ ನೀಗಿಸಿದ ಎಂಜಿನಿಯರ್ ಯುವಕನ ಯಶೋಗಾಥೆ
ಮುಸಾಹರ್ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ಅವರ ಜೀವನಶೈಲಿಯನ್ನು ಬದಲಿಸುವ ಮತ್ತು ಸಾಮಾಜಿಕವಾಗಿ ಮುನ್ನೆಲೆಗೆ ತರುವ ಪ್ರಯತ್ನದಲ್ಲಿ ತೊಡಗಿರುವ ಮಾಜಿ 'ರಾ' ಅಧಿಕಾರಿ ಜೆ.ಕೆ. ಸಿನ್ಹಾ ಅವರಿಗೆ ಈ ಬಾರಿಯ 'ಪದ್ಮಶ್ರೀ' ಪುರಸ್ಕಾರ ಒಲಿದಿದೆ.
'ದಿ ಬೆಟರ್ ಇಂಡಿಯಾ' ಆನ್ಲೈನ್ ಪತ್ರಿಕೆ ಪ್ರಕಟಿಸಿರುವ ಸಿನ್ಹಾ ಅವರ ಯಶೋಗಾಥೆಯ ಕನ್ನಡ ಅವತರಣಿಕೆ ಇಲ್ಲಿ.
ನಿವೃತ್ತ ಅಧಿಕಾರಿಯ ಕಳಕಳಿ
ರೀಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (ರಾ) ಅಧಿಕಾರಿಯಾಗಿದ್ದ ಜೆ.ಕೆ. ಸಿನ್ಹಾ ಅವರಿಗೀಗ 73 ವರ್ಷ ವಯಸ್ಸು. ನಿವೃತ್ತಿಯ ನಂತರದ ಬದುಕನ್ನು ಕುಟುಂಬದವರೊಂದಿಗೆ ಆರಾಮವಾಗಿ ಕಳೆಯಬಹುದಾಗಿದ್ದ ಅವರು ತಮ್ಮ ಬದುಕನ್ನು ಸಮಾಜದ ತಳದಲ್ಲಿರುವ ಸಮುದಾಯವೊಂದರ ಉನ್ನತಿಗಾಗಿ ಮೀಸಲಿಟ್ಟಿದ್ದಾರೆ.
1967ರಲ್ಲಿ ಐಪಿಎಸ್ ಸೇರಿಕೊಂಡಿದ್ದ ಸಿನ್ಹಾ, 1971ರಲ್ಲಿ ಸಂಪುಟ ಕಾರ್ಯದರ್ಶಿಯಾಗಿ ಬಡ್ತಿ ಪಡೆದಿದ್ದರು. 2005ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.
ಸರ್ಕಾರಿ ಶಾಲೆಯೇ ಸಾಕು: ಮಾದರಿಯಾದರು ಈ ಮಹಿಳಾ ಜಿಲ್ಲಾಧಿಕಾರಿ
ಶೋಷಿತ್ ಸೇವಾ ಸಂಘ
1968ರಲ್ಲಿ ಸೇವೆಯಲ್ಲಿದ್ದ ಸಂದರ್ಭದಲ್ಲಿ ಅವರಿಗೆ ಈ ಸಮುದಾಯದ ಪರಿಚಯವಾಗಿತ್ತು. ಅಂದಿನಿಂದಲೂ ಇಲ್ಲಿಯವರೆಗೂ ಆ ಸಮುದಾಯದ ಬದುಕು ಬದಲಾಗದೆ ಇರುವುದನ್ನು ಅವರು ಗಮನಿಸಿದ್ದರು.
'ಮುಸಾಹರ್' ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅವರು 2005ರಲ್ಲಿ ಶೋಷಿತ್ ಸೇವಾ ಸಂಘ (ಎಸ್ಎಸ್ಎಸ್) ಎಂಬ ಸಂಸ್ಥೆಯನ್ನು ಆರಂಭಿಸಿದ್ದರು.
'ಮುಸಾಹರ್ಗಳ ಸ್ಥಿತಿಯನ್ನು ನೋಡಿದಾಗ ಇದು ರಾಷ್ಟ್ರೀಯ ಅವಮಾನ ಎಂಬ ಭಾವನೆ ಮೂಡಿತ್ತು. ಹೀಗಾಗಿಯೇ ನಿವೃತ್ತನಾದ ಬಳಿಕ ಆ ಸಮುದಾಯಕ್ಕೆ ನನ್ನದೇ ಸಣ್ಣ ಮಟ್ಟದಲ್ಲಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿದ್ದೆ' ಎಂದು ಸಿನ್ಹಾ ಹೇಳಿಕೊಂಡಿದ್ದಾರೆ.
6 ತಿಂಗಳಲ್ಲಿ 13 ಲಕ್ಷ ಟನ್ ಕಸ ಸ್ವಚ್ಛಗೊಳಿಸಿದ ಐಎಎಸ್ ಅಧಿಕಾರಿ
ಇಲಿ ಹಿಡಿಯುವುದನ್ನು ಬಿಡಲು ನಕಾರ
ಶಾಲೆ ಆರಂಭವಾದಾಗ ಅಲ್ಲಿಗೆ ಸೇರಿಕೊಂಡಿದ್ದು ನಾಲ್ಕು ಮಕ್ಕಳು. ಶಾಲೆಗೆ ಮಕ್ಕಳನ್ನು ಕಳುಹಿಸಿವುದು ಸಮಯದ ವ್ಯರ್ಥ ಮಾಡಿದಂತೆ ಎಂದು ಪೋಷಕರು ಭಾವಿಸಿದ್ದರು. ಶಾಲೆಗೆ ಕಳುಹಿಸುವ ಬದಲು ತಮ್ಮ ಇಲಿ ಹಿಡಿಯುವ ಕಾಯಕ ಮುಂದುವರಿಸುವುದು ಸರಿ ಎನ್ನುವುದು ಅವರ ಉದ್ದೇಶವಾಗಿತ್ತು.
ಮುಸಾಹರ್ ಸಮುದಾಯದ ಮಕ್ಕಳಿಗೆ ಶಿಕ್ಷಣ ಕೊಡಿಸುವ ಯೋಜನೆ ಹಾಸ್ಯಾಸ್ಪದ ಎಂದು ಸಿನ್ಹಾ ಅವರ ಸ್ನೇಹಿತರು ಹೇಳಿದ್ದರು. ಶಿಕ್ಷಣ ಎಂದರೇನು ಎಂಬುದನ್ನೇ ತಿಳಿಯದ ಸಮುದಾಯದ ಜನರಿಂದ ಆರಂಭದಲ್ಲಿ ಪ್ರತಿರೋಧವೂ ವ್ಯಕ್ತವಾಗಿತ್ತು.
ತಾನು ಕಲಿತ ಸರಕಾರಿ ಶಾಲೆ ಏಳ್ಗೆಗಾಗಿ 5 ಲಕ್ಷ ಕೊಡುಗೆ ನೀಡಿದವರ ಸ್ಫೂರ್ತಿಗಾಥೆ
ಫ್ಲಾಟ್ ಮಾಡಿ ಪಟ್ನಾ ಸೇರಿದರು
ಆದರೆ, ದೆಹಲಿಯಲ್ಲಿದ್ದ ತಮ್ಮ ಫ್ಲಾಟ್ ಮಾರಾಟ ಮಾಡಿದ್ದ ಸಿನ್ಹಾ, ಸಮುದಾಯಕ್ಕೆ ಶಿಕ್ಷಣ ನೀಡಿ ಅವರನ್ನು ಪರಿವರ್ತಿಸುವ ಗುರಿಯೊಂದಿಗೆ ಪಟ್ನಾಕ್ಕೆ ಮರಳಿದರು.
ಸಿನ್ಹಾ ಅವರು ಶೋಷಿತ ಸಮಾಧಾನ ಕೇಂದ್ರದ ಮೂಲಕ 12ನೇ ತರಗತಿಯವರೆಗೂ ಶಿಕ್ಷಣ, ವಸತಿ, ಊಟ, ಬಟ್ಟೆ, ಆರೋಗ್ಯ ಮತ್ತು ಇತರೆ ಅಗತ್ಯ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುತ್ತಿದ್ದಾರೆ. ಅವರ ಶಾಲೆ ಸಿಬಿಎಸ್ಇಯೊಂದಿಗೆ ಸಹಯೋಗ ಪಡೆದುಕೊಂಡಿದೆ.
ಅಲ್ಲಿನ ಶಿಕ್ಷಕರು ಎಲ್ಲ ಸನ್ನಿವೇಶಗಳನ್ನೂ ಎದುರಿಸಿ ಮಕ್ಕಳನ್ನು ಬೆಳೆಸಿದರು. ನಿಧಾನವಾಗಿ ಸಮುದಾಯದ ಜನರು ಶಾಲೆಯತ್ತ ಕಾಲಿಡತೊಡಗಿದರು.
ಮಕ್ಕಳಲ್ಲಿಯೂ ಸಮರ್ಪಣಾ ಭಾವ
ಕೌನ್ ಬನೇಗಾ ಕರೋಡ್ಪತಿಯ ವಿಶೇಷ ಚಾರಿಟಿ ಶೋದಲ್ಲಿ ಒಬ್ಬ ವಿದ್ಯಾರ್ಥಿಯನ್ನು ಸ್ಪರ್ಧೆಗೆ ಆಹ್ವಾನಿಸಲಾಗಿತ್ತು. ಅದರಲ್ಲಿ 25 ಲಕ್ಷ ಗೆದ್ದಿದ್ದ ವಿದ್ಯಾರ್ಥಿ ತನ್ನ ಕುಟುಂಬಕ್ಕೆ ಆ ಹಣ ನೀಡುವ ಬದಲು ಶಾಲೆಯ ಅಭಿವೃದ್ಧಿಗೆ ನೀಡಲು ನಿರ್ಧರಿಸಿದ್ದ.
2005ರಲ್ಲಿದ್ದ 4 ವಿದ್ಯಾರ್ಥಿಗಳಿಂದ ಈಗ 460ಕ್ಕೆ ಏರಿದೆ. 2020ರ ವೇಳೆಗೆ ಓ ಸಂಖ್ಯೆಯನ್ನು 1,000ಕ್ಕೆ ಏರಲಿದೆ ಎನ್ನುವುದು ಸಿನ್ಹಾ ಅವರ ಭರವಸೆ.
ವಿವಿಧ ವಿಶ್ವವಿದ್ಯಾಲಯಗಳ 19 ಉಪನ್ಯಾಸಕರು ಇಲ್ಲಿ ಬೋಧಿಸುತ್ತಿದ್ದಾರೆ. ಯಾವ ಅಧಿಕಾರಿ ಅಥವಾ ರಾಜಕಾರಣಿಯೂ ಮುಸಾಹರ್ ಸಮುದಾಯದ ಶಿಕ್ಷಣಕ್ಕೆ ಯೋಚಿಸಿರಲಿಲ್ಲ ಎನ್ನುತ್ತಾರೆ ಮಗಧ ವಿಶ್ವವಿದ್ಯಾಲಯದ ಡಾ. ಡಿಪಿ ಸಿಂಗ್.