ಎರಡೇ ವರ್ಷದಲ್ಲಿ 25 ಕಿರು ಅರಣ್ಯ ಸೃಷ್ಟಿಸಿದ ಅಧಿಕಾರಿ
ಮುಂಬೈನ ಆರೆ ಕಾಲೋನಿಯಲ್ಲಿ ಮೆಟ್ರೊ ರೈಲಿನ ಕಾಮಗಾರಿಗಾಗಿ ಬೆಳೆದುನಿಂತಿದ್ದ 2,600 ಮರಗಳನ್ನು ರಾತ್ರೋರಾತ್ರಿ ಕತ್ತರಿಸಲು ಮುಂದಾದ ಘಟನೆಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅಭಿವೃದ್ಧಿಯ ನೆಪದಲ್ಲಿ ಮರಗಳನ್ನು ಧರೆಗುಳಿಸುವ ಪ್ರವೃತ್ತಿ ಇಂದು ನಿನ್ನೆಯದಲ್ಲ. ಬರ, ಪ್ರವಾಹ ಎರಡಕ್ಕೂ ಅರಣ್ಯ ನಾಶಕ್ಕೂ ಸಂಬಂಧವಿದೆ ಎನ್ನುವುದು ಪರಿಣತರ ಅಭಿಪ್ರಾಯ. ಹೀಗಿದ್ದೂ ಕಾಡುಗಳನ್ನು ಕಡಿಯುವ ಹೀನ ಕಾರ್ಯ ನಿಂತಿಲ್ಲ. ಹಾಗಾದರೆ ಕಾಡುಗಳನ್ನು ರಕ್ಷಿಸುವವರು, ಬೆಳೆಸುವವರು ಯಾರು? ಬೆಳೆಸುವವರಿದ್ದರೂ ಎಲ್ಲಿ ಬೆಳೆಸುವುದು?
ಕಾಡು ಬೆಳೆಸುವ ವಿಚಾರದಲ್ಲಿ ಅರಣ್ಯ ಇಲಾಖೆಯದ್ದು ಒಂದು ನೀತಿಯಾಗಿದ್ದರೆ, ಸಂಘ ಸಂಸ್ಥೆಗಳು, ವ್ಯಕ್ತಿಗಳು ಕೂಡ ತಮ್ಮ ಮಿತಿಯೊಳಗೆ ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಸರ್ಕಾರಿ ಹುದ್ದೆಯಲ್ಲಿ ಇರುವ ಎಷ್ಟು ಅಧಿಕಾರಿಗಳಲ್ಲಿ ಈ ಬಗೆಯ ಕಾಳಜಿ ಇರಲು ಸಾಧ್ಯ?
ಉಳುವಾ ನ್ಯಾಯಮೂರ್ತಿಯ ನೋಡಲ್ಲಿ!: ಕೃಷಿಗಿಳಿದು ಮಾದರಿಯಾದ ನ್ಯಾ. ಸೆಲ್ವಂ
ಪಂಜಾಬ್ನ ಲೂಧಿಯಾನದಲ್ಲಿನ ಭಾರತೀಯ ಕಂದಾಯ ಸೇವೆಯ (ಐಆರ್ಎಸ್) ಅಧಿಕಾರಿ ರೋಹಿತ್ ಮೆಹ್ರಾ ಅವರ ಕಾರ್ಯವನ್ನು ನೋಡಿದಾಗ, ಸರ್ಕಾರಿ ಅಧಿಕಾರಿಯೊಬ್ಬರು ಹೀಗೂ ಇರುತ್ತಾರಾ? ಎಂಬ ಅನುಮಾನ, ಅಚ್ಚರಿ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತದೆ.
ಎರಡು ವರ್ಷದಲ್ಲಿ ಕಿರು ಅರಣ್ಯ
ಲೂಧಿಯಾನದ ಐಆರ್ಎಸ್ ಅಧಿಕಾರಿ ರೋಹಿತ್ ಮೆಹ್ರಾ, ಕೇವಲ ಎರಡು ವರ್ಷಗಳಲ್ಲಿ 500 ಅಡಿ ಭೂಮಿಯಿಂದ ಆರಂಭಿಸಿ 4 ಎಕರೆ ಪ್ರದೇಶಗಳವರೆಗೆ 25 ಮಿನಿ ಕಾಡುಗಳನ್ನು ಸೃಷ್ಟಿಸಿದ್ದಾರೆ. ಮಾತ್ರವಲ್ಲ, ಲೂಧಿಯಾನ ರೈಲು ನಿಲ್ದಾಣದ ಬಳಿ ಮೊದಲ ಲಂಬಾಕೃತಿಯ ಉದ್ಯಾನ ನಿರ್ಮಿಸಿದ್ದ ಅವರು, ಪಂಜಾಬ್ನಾದ್ಯಂತ ಈಗ ಸುಮಾರು 75 ಲಂಬ ಉದ್ಯಾನಗಳನ್ನು ನಿರ್ಮಿಸಿದ್ದಾರೆ.
ಬಾಂಬೆ ಟು ಬಾರ್ಸಿಲೋನಾ: 'ಬೀದಿ ಬಾಲಕ'ನೊಬ್ಬನ ಯಶೋಗಾಥೆ
ಗ್ರೀನ್ ಮ್ಯಾನ್ ಆಫ್ ಲೂಧಿಯಾನ
'ಲೂಧಿಯಾನದ ಹಸಿರು ಮನುಷ್ಯ' (ಗ್ರೀನ್ ಮ್ಯಾನ್ ಆಫ್ ಲೂಧಿಯಾನ) ಎಂದೇ ಖ್ಯಾತರಾಗಿರುವ 41 ವರ್ಷದ ರೋಹಿತ್ ಮೆಹ್ರಾ, ತಮ್ಮ ವೃತ್ತಿಯ ನಡುವೆ ಅರಣ್ಯ ಬೆಳೆಸುವ ಕಾರ್ಯವನ್ನು ಕರ್ತವ್ಯ ಎಂಬಂತೆ ಪಾಲಿಸುತ್ತಿದ್ದಾರೆ. ಶಾಲೆಗಳಿಗೆ ತೆರಳಿ ಮಕ್ಕಳಲ್ಲಿ ಮರಗಳ ಮಹತ್ವದ ಅರಿವು ಮೂಡಿಸಿದ್ದಾರೆ. ಕೈಗಾರಿಕೋದ್ಯಮಿಗಳನ್ನೂ ಅವರು ಬಿಟ್ಟಿಲ್ಲ. ಕಾರ್ಖಾನೆಗಳು, ಉದ್ಯಮ ಸಂಸ್ಥೆಗಳಿರುವಲ್ಲಿ ಮರಗಳನ್ನು ಬೆಳೆಸಲು ಮನವಿ ಮಾಡಿದ್ದಾರೆ.
ಲೂಧಿಯಾನದಿಂದ 40 ಕಿ.ಮೀ. ದೂರದಲ್ಲಿರುವ ಜಾಗ್ರಾವುನ್ ಎಂಬಲ್ಲಿ ಕೈಗಾರಿಕೋದ್ಯಮಿಯೊಬ್ಬರು ತಮ್ಮ 6,000 ಚದರ ಅಡಿ ಅಗಲದ ನಿವೇಶನವನ್ನು ಅರಣ್ಯವನ್ನಾಗಿ ಪರಿವರ್ತಿಸವಂತೆ ಅವರನ್ನು ಕೋರಿದ್ದಾರೆ ಎಂದರೆ ಅವರು ಬೀರಿರುವ ಪ್ರಭಾವ ಅರ್ಥವಾಗಬಹುದು. 'ಜನರು ಈ ವರ್ಟಿಕಲ್ ಗಾರ್ಡನ್ಗಳ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದ್ದಾರೆ. ಅಲ್ಲದೆ, ತಮ್ಮ ಜಮೀನುಗಳಲ್ಲಿನ ಉಳಿದ ಭಾಗಗಳನ್ನು ಅರಣ್ಯವನ್ನಾಗಿ ಪರಿವರ್ತಿಸಿಕೊಡವಂತೆಯೂ ಕೋರುತ್ತಿದ್ದಾರೆ' ಎಂದು ರೋಹಿತ್ ಸಂತಸದಿಂದ ಹೇಳಿಕೊಳ್ಳುತ್ತಾರೆ.
ಮಗನಿಂದ ಮೂಡಿದ ಅರಿವು!
ಲೂಧಿಯಾನವು ಕೈಗಾರಿಕೆಗಳ ಕೇಂದ್ರ. ಹೀಗಾಗಿ ಇಲ್ಲಿ ಮಾಲಿನ್ಯದ ಪ್ರಮಾಣ ವಿಪರೀತ. ಕೆಲವೊಮ್ಮೆ ವಾಯುಮಾಲಿನ್ಯ ಮಿತಿಮೀರಿದಾಗ ಶಾಲಾ ಕಾಲೇಜುಗಳಿಗೆ ಸತತವಾಗಿ ನಾಲ್ಕೈದು ದಿನ ರಜೆ ಘೋಷಿಸಿದ್ದೂ ಇದೆ.
'ಎರಡು ವರ್ಷದ ಹಿಂದೆ ನನ್ನ ಮಗ ಉದಯ್, ರಜೆ ಕಳೆಯಲು ಹೊರಗೆ ಹೋಗಬೇಕೆಂದು ಹೇಳಿದ. ನನಗೆ ಆಶ್ಚರ್ಯವಾಯಿತು. ಏಕೆಂದರೆ ಅದು ಶಾಲೆಗಳಿಗೆ ರಜೆಗಳನ್ನು ನೀಡುವ ಸಮಯವಲ್ಲ. ಹೊಗೆ ಮತ್ತು ಮಾಲಿನ್ಯದ ಕಾರಣ ಆತನ ಶಾಲೆಗೆ ಕೆಲವು ದಿನ ರಜೆ ಘೋಷಿಸಲಾಗಿತ್ತು. ಈ ಘಟನೆ ನನಗೆ ಸಮಸ್ಯೆಯ ಕುರಿತು ಗಮನ ಹರಿಸುವಂತೆ ಮಾಡಿತು' ಎಂದು ಅವರು ಹೇಳಿದ್ದಾರೆ.
ಕಿಲಿಮಂಜಾರೊ ಪರ್ವತವೇರಿ ಸಾಧನೆ ಮಾಡಿದ ಹರಿಯಾಣದ ಯುವತಿ
ಪ್ರಾಚೀನ ಕೃತಿಗಳಲ್ಲಿದೆ ತಂತ್ರಜ್ಞಾನ
ಆರಂಭದಲ್ಲಿ ರೋಹಿತ್ ಅವರಿಗೆ ಅಂತಹ ಕಾಡುಗಳನ್ನು ಸೃಷ್ಟಿಸುವ ತಿಳಿವಳಿಕೆ ಇರಲಿಲ್ಲ. ಆದರೂ ಕಡಿಮೆ ಅವಧಿಯಲ್ಲಿ ಕಿರುಕಾಡುಗಳನ್ನು ಹೇಗೆ ಸೃಷ್ಟಿಸಬಹುದು ಎಂಬ ಬಗ್ಗೆ ಅಧ್ಯಯನ ನಡೆಸಲಾರಂಭಿಸಿದರು.
ಆಗ ಅವರಿಗೆ ಸಿಕ್ಕಿದ್ದು, ಜಪಾನ್ನ ಮಿಯಾವಕಿ ಎಂಬ ತಂತ್ರ. ಮರಗಳು ವೇಗವಾಗಿ ಬೆಳೆಯುವಂತೆ ಮಾಡುವ ತಾಂತ್ರಿಕ ಜ್ಞಾನಗಳನ್ನು ಪಡೆದುಕೊಂಡ ಅವರು, ಗಿಡ ಹಾಗೂ ಕಾಡುಗಳನ್ನು ಬೆಳೆಸುವ ಪ್ರಾಚೀನ ಭಾರತದ ವಿಜ್ಞಾನವನ್ನು ಅರಿಯುವ ವೃಕ್ಷಾಯುರ್ವೇದದಂತಹ ಕೃತಿಗಳನ್ನು ಕೂಡ ಓದಿದ್ದರು.
ಆಸಕ್ತಿಕರವೆಂದರೆ ಈ ಪ್ರಾಚೀನ ಕೃತಿಯು ಜಮಾನಿನ ಮಿಯಾವಕಿ ಮಾದರಿಯಲ್ಲಿನ ತಾಂತ್ರಿಕತೆಯನ್ನೇ ಉಲ್ಲೇಖಿಸಿತ್ತು. 2.5 ಅಡಿ ಆಳದವರೆಗೆ ಮಣ್ಣನ್ನು ಅಗೆದು, ಬಳಿಕ ಅದರಲ್ಲಿ ಎಲೆ, ಹಸುವಿನ ಸಗಣಿ ಮತ್ತು ಕಾಂಪೋಸ್ಟ್ನ ಇತರೆ ಅಂಶಗಳನ್ನು ಬಳಸಿದ ಗೊಬ್ಬರದೊಂದಿಗೆ ಮಿಶ್ರಗೊಳಿಸಬೇಕು. ಕೂಳೆ, ಅಕ್ಕಿಯ ಹೊಟ್ಟು ಮುಂತಾದವುಗಳನ್ನು ಬೆರೆಸಿದರೆ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎಂದು ಅವರು ವಿವರಿಸುತ್ತಾರೆ.
ಕೈಗಾರಿಕಾ ಸಂಸ್ಥೆಗಳ ಸಹಕಾರ
ಒಂದೇ ಜಾಗದಲ್ಲಿ ವಿಭಿನ್ನ ಮರಗಳನ್ನು ಬೆಳೆಸುವುದು ಕೂಡ ಅವರ ಉದ್ದೇಶ. ಬೇವು, ನಲ್ಲಿ, ಗುಲ್ಮೊಹರ್, ಹೊನ್ನೆ, ಜಾಯಿಕಾಯಿ, ಆಲದಮರ ಹೀಗೆ ನಾನಾ ವಿಧದ ಮರಗಳನ್ನು ಬೆಳೆಸುತ್ತಿದ್ದಾರೆ.
ಲೂಧಿಯಾನದಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿನ ತೆರೆದ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸುವ ಮೂಲಕ ಮಾಲಿನ್ಯವನ್ನು ತಗ್ಗಿಸುವ ರೋಹಿತ್ ಅವರ ಕಾರ್ಯಕ್ಕೆ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಕೂಡ ಕೈಜೋಡಿಸಿದೆ. ರೋಹಿತ್ ಅವರ ಮಾರ್ಗದರ್ಶನದಲ್ಲಿ ಸೃಷ್ಟಿಯಾದ 15 ಅರಣ್ಯಗಳಲ್ಲಿ ಎಂಟು ಕಾಡುಗಳು ಕೈಗಾರಿಕಾ ಪ್ರದೇಶಗಳಲ್ಲಿಯೇ ಇವೆ.
ಮುಂದೆ ಬರುತ್ತಿರುವ ಜನರು
ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂಘಟನೆಗಳು ಕೂಡ ತಮ್ಮ ಸ್ವಂತ ಭೂಮಿಯನ್ನು ಅರಣ್ಯವಾಗಿ ಪರಿವರ್ತಿಸಲು ಕೋರಿ ರೋಹಿತ್ ಅವರನ್ನು ಭೇಟಿ ಮಾಡುತ್ತಿದ್ದಾರೆ. 'ತಮ್ಮ ಫಾರ್ಮ್ಹೌಸ್ಅನ್ನು ಕಾಡನ್ನಾಗಿ ಬದಲಿಸಲು ಒಬ್ಬ ಕೈಗಾರಿಕೋದ್ಯಮಿ ನನ್ನನ್ನು ಸಂಪರ್ಕಿಸಿದ್ದರು. ಶ್ವಾಸಕೋಶದ ಸಮಸ್ಯೆ ಹೊಂದಿದ್ದ ಅವರ ತಾಯಿಗೆ ಒಳ್ಳೆಯ ಗಾಳಿ ನೀಡಲು ತಮ್ಮ ಅರ್ಧ ಎಕರೆ ಭೂಮಿಯನ್ನು ಕಿರು ಅರಣ್ಯವನ್ನಾಗಿ ಪರಿವರ್ತಿಸಲು ಕೋರಿದ್ದರು' ಎಂದು ರೋಹಿತ್ ಹೇಳುತ್ತಾರೆ.
ಸಿಖ್ಖರ ಗುರು ಗುರುನಾನಕ್ ದೇವ್ ಅವರ 550ನೇ ವರ್ಷಾಚರಣೆಯ ಸಂದರ್ಭದಲ್ಲಿ ಲೂಧಿಯಾನದಲ್ಲಿ ಗುರುದ್ವಾರ ದುಖ್ನಿವಾರನ್ದಲ್ಲಿ ಕೂಡ ಕಿರು ಅರಣ್ಯ ನಿರ್ಮಿಸಿ ಅದಕ್ಕೆ ನಾನಕ್ ವನ ಎಂದು ಹೆಸರು ನೀಡಲಾಗಿದೆ. ಎಲ್ಲ ಜಾತಿ, ಧರ್ಮಗಳು, ವಿಭಿನ್ನ ವಲಯಗಳ ಜನರು ಈ ಮಹತ್ವದ ಕಾರ್ಯದಲ್ಲಿ ತಮ್ಮ ಜತೆಗೆ ಬರುತ್ತಿದ್ದಾರೆ ಎಂದು ಅವರು ಹರ್ಷ ವ್ಯಕ್ತಪಡಿಸುತ್ತಾರೆ.
ಒಂದು ಕೋಟಿ ಗಿಡದ ಗುರಿ
ನಗರ ಪ್ರದೇಶದಲ್ಲಿ ಖಾಲಿ ಜಾಗಗಳನ್ನು ಹುಡುಕುವುದು ಮತ್ತು ಅಲ್ಲಿ ಮರಗಳನ್ನು ಬೆಳೆಸುವಂತೆ ಜನರ ಮನವೊಲಿಸುವುದು ಸವಾಲಿನ ಕೆಲಸ ಎನ್ನುತ್ತಾರೆ ರೋಹಿತ್. ಶಾಲೆಗಳು ಹಾಗೂ ಇತರೆ ಸಂಘ ಸಂಸ್ಥೆಗಳೊಂದಿಗೆ ಸೇರಿ ಬೀಜದುಂಡೆಗಳನ್ನು ತಯಾರಿಸುತ್ತಿದ್ದಾರೆ.
ಲೂಧಿಯಾನ ಆಯಕರ ಭವನ ಕಟ್ಟಡದಲ್ಲಿ ನಗರದ ಮೊದಲ ವರ್ಟಿಕಲ್ ಗಾರ್ಡನ್ ಸೃಷ್ಟಿಸಿದ ಬಳಿ ಅವರ ಹೆಸರು ಲಿಮ್ಕಾ ದಾಖಲೆ ಪುಸ್ತಕದಲ್ಲಿ ದಾಖಲಾಗಿದೆ. 2020ರ ಡಿಸೆಂಬರ್ 31ರ ಒಳಗೆ ಒಂದು ಕೋಟಿ ಗಿಡಗಳನ್ನು ಬೆಳೆಸುವುದು ಅವರ ಗುರಿ.