ಪತ್ನಿಯ ಚಿಕಿತ್ಸೆಗಾಗಿ ಕೂಲಿ ಕಾರ್ಮಿಕನಾದ: ಒಂದು ಅಪರೂಪದ ಪ್ರೇಮಕಥನ
ಕೊಚ್ಚಿ, ಸೆಪ್ಟೆಂಬರ್ 22: ಜಾತಿಯ ಕಾರಣಕ್ಕೆ ಯಾವ ಕರುಣೆಯೂ ಇಲ್ಲದೆ ಮಗಳ ಗಂಡನನ್ನೇ ಕೊಲ್ಲಿಸಿದ ಅಮಾನವೀಯ ಘಟನೆ ಇತ್ತೀಚೆಗಷ್ಟೇ ತೆಲಂಗಾಣದಲ್ಲಿ ನಡೆದಿತ್ತು.
ಪತ್ನಿಯ ಚಿಕಿತ್ಸೆಗಾಗಿ ಕೂಲಿ ಕಾರ್ಮಿಕನಾದ: ಒಂದು ಅಪರೂಪದ ಪ್ರೇಮಕಥನ
ಕುಟುಂದದವರ ದ್ವೇಷ ಮಾತ್ರವಲ್ಲ, ಪ್ರೀತಿಸಿ ಮದುವೆಯಾದವರೇ ಕೊನೆಗೆ ಹೊಂದಿಕೊಳ್ಳಲಾರದೆ ಬೇರಾಗುವಂತಹ ಘಟನೆಗಳು ವರದಿಯಾಗುತ್ತಿರುವ ಈ ದಿನಗಳಲ್ಲಿ ಕೇರಳದ ಅಪರೂಪದ ಮನಮಿಡಿಯುವ ಪ್ರೇಮಕಥೆ ಪ್ರೀತಿಸುವ ಹೃದಯಗಳಿಗೆ ಸ್ಫೂರ್ತಿ ನೀಡುವಂತಿದೆ.
ಹಾಗೆಯೇ ಮಕ್ಕಳ ಪ್ರೀತಿಯನ್ನು ನಿರಾಕರಿಸುವ ಪೋಷಕರಿಗೂ ಇದು ಚೆಂದದ ಪಾಠವೂ ಹೌದು. ಸಿನಿಮಾವೊಂದರ ಕಥೆ ಎನಿಸುವ ಈ ರೀತಿಯ ನೈಜ ಘಟನೆಗಳು ನಮ್ಮ ನಡುವೆ ನಡೆಯುತ್ತಲೇ ಇರುತ್ತವೆ. ಕೆಲವೊಂದು ಕಥೆಗಳು ಮಾತ್ರ ಬೆಳಕಿಗೆ ಬಂದು ಸುದ್ದಿಯಾಗುತ್ತವೆ.
ಉಳುವಾ ನ್ಯಾಯಮೂರ್ತಿಯ ನೋಡಲ್ಲಿ!: ಕೃಷಿಗಿಳಿದು ಮಾದರಿಯಾದ ನ್ಯಾ. ಸೆಲ್ವಂ
ಪ್ರೀತಿಸಿ ಮದುವೆಯಾದ ಕೇರಳದ ಮಲಪ್ಪುರಂನ ಸಚಿನ್ ಕುಮಾರ್ ಮತ್ತು ಭವ್ಯಾ ಜೋಡಿ ಸವಾಲನ್ನು ಎದುರಿಸಿ ನಿಂತಿರುವ ಪ್ರೇಮಕಥೆ ಕರುಣಾಜನಕವೂ ಹೌದು, ಅಷ್ಟೇ ಸ್ಫೂರ್ತಿದಾಯಕವೂ ಹೌದು.
ಅಲ್ಪ ಕಾಲದಲ್ಲೇ ಚಿಗುರಿತು ಪ್ರೇಮ
ಮಲಪ್ಪುರಂನ ಸಚಿನ್ ಕುಮಾರ್ ಮತ್ತು ಭವ್ಯಾ ಅವರದು ಸುದೀರ್ಘ ಪ್ರೇಮಕಥೆಯೇನಲ್ಲ. ಐದು ತಿಂಗಳ ಗೆಳೆತನದ ಬಳಿಕ ಪ್ರೀತಿಗೆ ಜಾರುವುದು ಅವರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಎರಡು ತಿಂಗಳ ಪ್ರೀತಿ ಪ್ರೇಮದ ಗಳಿಗೆಯಲ್ಲಿ ಕನಸುಗಳ ಮಹಲು ಕಟ್ಟಿದ 23 ವರ್ಷದ ಈ ಇಬ್ಬರೂ ಮಾರ್ಚ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.
ಆಗಲೇ ಭವ್ಯಾ ತನ್ನ ಮೊದಲ ಚಿಕಿತ್ಸೆಗೆ ಒಳಗಾಗಿದ್ದಳು. ಹಾಗೆ ಚಿಕಿತ್ಸೆ ಪಡೆಯುತ್ತಲೇ ಆರು ತಿಂಗಳ ಬಳಿಕ ಈ ಜೋಡಿ ಹಸೆಮಣೆ ಏರಿತು.
ಪರಿಹಾರನಿಧಿಗೆ 1ಎಕರೆ ಜಮೀನನ್ನೇ ಬರೆದುಕೊಟ್ಟ ರೈತನ ಮಕ್ಕಳು!
ಮನೆಯಲ್ಲಿ ಇತ್ತು ವಿರೋಧ
ಮಲಪ್ಪುರಂನ ನಿಲಂಬುರ್ನಲ್ಲಿ ಒಂದು ವರ್ಷದ ಹಿಂದೆ ಅಕೌಂಟೆನ್ಸಿ ಡಿಪ್ಲೊಮಾ ಕೋರ್ಸ್ ಪಡೆದುಕೊಳ್ಳಲು ಕಾಲೇಜು ಸೇರಿಕೊಂಡಾಗ ಪರಸ್ಪರ ಭೇಟಿಯಾದವರು ಸಚಿನ್ ಮತ್ತು ಭವ್ಯಾ.
ಇಬ್ಬರ ಪ್ರೇಮಕಥೆ ಮನೆಯವರಿಗೆ ತಿಳಿದಾಗ ಭವ್ಯಾಳ ಮನೆಯಿಂದ ವಿರೋಧ ವ್ಯಕ್ತವಾಯಿತು. ಸಚಿನ್ನನ್ನು ಭೇಟಿಯಾಗದಂತೆ ತಡೆಯುವ ಪ್ರಯತ್ನಗಳನ್ನೂ ಮಾಡಿದರು.
ಆದರೆ, ತಮ್ಮಿಬ್ಬರ ನಡುವಿನ ಪ್ರೀತಿ ಸಂಬಂಧಕ್ಕೆ ನಿಜವಾದ ಸವಾಲು ಇರುವುದು ತಮ್ಮ ಪೋಷಕರಿಂದ ಅಲ್ಲ ಎಂಬುದು ಈ ಜೋಡಿಗೆ ಕೆಲವೇ ದಿನಗಳಲ್ಲಿ ಅರಿವಾಯಿತು.
ನಡೆಯಲಾಗದಿದ್ದರೂ ಪ್ರವಾಹದ ಬಾಯಿಂದ ದಂಪತಿಯ ರಕ್ಷಿಸಿದ ಕತೆ ಕೇಳಿ!
ಎದುರಾಯಿತು ಮಾರಕ ಕಾಯಿಲೆ
ಪ್ರೀತಿಯಲ್ಲಿ ಬಿದ್ದ ಎರಡು ತಿಂಗಳ ಬಳಿಕ ಭವ್ಯಾ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಳು. ಕೆಲವು ದಿನಗಳಲ್ಲಿ ಆಕೆಗೆ ಬೆನ್ನು ನೋವು ಕಾಡಲು ಆರಂಭಿಸಿತು. ಆರಂಭದಲ್ಲಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಮಾರ್ಚ್ ಮೊದಲ ವಾರದಲ್ಲಿ ಕೊನೆಗೂ ಪರೀಕ್ಷೆಗೆ ಒಳಪಡಿಸಿದಾಗ ಗೊತ್ತಾಗಿದ್ದು, ಆಕೆಗೆ ಬೆನ್ನುಹುರಿ ಕ್ಯಾನ್ಸರ್ ಇದೆ ಎನ್ನುವುದು. ಸಚಿನ್ ಮತ್ತು ಭವ್ಯಾಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು.
ಕ್ಯಾನ್ಸರ್ ಎಂಬ ಯಮನಿಗೆ ಸೆಡ್ಡು ಹೊಡೆದ ಗಟ್ಟಿಗಿತ್ತಿ ಶಿವಮೊಗ್ಗದ ಶ್ರುತಿ
ಪ್ರೇಯಸಿಗೆ ಹೆಗಲಾದ ಪ್ರೇಮಿ
ತನ್ನ ಪ್ರೀತಿಯ ಹುಡುಗಿಗೆಗೆ ಕ್ಯಾನ್ಸರ್ ಇದೆ ಎಂಬ ಕಾರಣಕ್ಕೆ ಸಚಿನ್ ಆಕೆಯಿಂದ ದೂರವಾಗಲಿಲ್ಲ. ಬದಲಾಗಿ ಈ ಸಂಕಷ್ಟದ ಸನ್ನಿವೇಶದಲ್ಲಿ ಆಕೆಗೆ ಹೆಗಲಾಗುವ ದೃಢನಿರ್ಧಾರ ಕೈಗೊಂಡ. ಪ್ರತಿ ಬಾರಿಯ ಚೆಕ್ ಸಂದರ್ಭದಲ್ಲಿಯೂ ಆಕೆಯ ಮನೆಯವರಿಗೆ ತಿಳಿಯದಂತೆ ಆಸ್ಪತ್ರೆಗೆ ಕರೆದೊಯ್ದು ಜತೆಗಿರುತ್ತಿದ್ದ. ಸಚಿನ್ ಉಪಸ್ಥಿತಿಯೇ ಆಕೆಯಲ್ಲಿ ಅಗಾಧ ಆತ್ಮಸ್ಥೈರ್ಯ ತುಂಬಿತ್ತು.
'ಈ ಸಂದರ್ಭದಲ್ಲಿ ಆಕೆಯನ್ನು ಬೇಷರತ್ತಾಗಿ ಪ್ರೀತಿಸುವುದಷ್ಟೇ ನಾನು ಮಾಡಬಹುದಾಗಿತ್ತು. ಆಕೆಯೊಂದಿಗೆ ಇದ್ದು, ಆಕೆಯಿಲ್ಲದೆ ಎಲ್ಲಿಗೂ ಹೋಗಲಾರೆ ಎಂಬ ಭರವಸೆಯನ್ನು ಆಕೆಯಲ್ಲಿ ತುಂಬಬೇಕಿತ್ತು' ಎನ್ನುತ್ತಾನೆ ಸಚಿನ್.
ಭವ್ಯಾ ಮೊದಲ ಕಿಮೊಥೆರಪಿಗೆ ಒಳಗಾದ ಬಳಿಕ ಮಾರ್ಚ್ ಮೂರನೇ ವಾರದಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು.
ಬದಲಾಯಿತು ಮನೆಯವರ ಮನಸ್ಸು
ಭವ್ಯಾಗೆ ಕ್ಯಾನ್ಸರ್ ಇರುವ ಸುದ್ದಿ ಕೇಳಿ ಆಘಾತಗೊಂಡ ಆಕೆಯ ಮನೆಯವರು ಸಚಿನ್ನ ನಿಷ್ಕಲ್ಮಶ ಪ್ರೀತಿ ಕಂಡು ಕರಗಿಹೋದರು. ಸ್ನೇಹಿತರು ಮತ್ತು ಎರಡೂ ಕುಟುಂಬಗಳಿಂದ ದೊಡ್ಡ ಮಟ್ಟದಲ್ಲಿ ಬೆಂಬಲ ದೊರೆತದ್ದು ಕಂಡು ಸ್ವತಃ ಸಚಿನ್ ಅಚ್ಚರಿಗೊಳಗಾದ.
'ನನ್ನ ಪ್ರೇಮ ಕುರುಡಾಗಿರಲಿಲ್ಲ. ನಾವು ಏನು ಮಾಡುತ್ತಿದ್ದೇವೆ ಎನ್ನುವುದು ಇಬ್ಬರಿಗೂ ತಿಳಿದಿತ್ತು' ಎನ್ನುತ್ತಾನೆ ಸಚಿನ್.
ಭವ್ಯಾಳ ಪ್ರತಿ ಕಿಮೋಥೆರಪಿ ವೇಳೆಯೂ ಸಚಿನ್ ಆಸ್ಪತ್ರೆಯಲ್ಲಿಯೇ ಇರುತ್ತಿದ್ದ. ಐದು ತಿಂಗಳಲ್ಲಿ ಭವ್ಯಾ ಸ್ವಲ್ಪ ತೂಕವನ್ನು ಪಡೆದುಕೊಂಡಳು, ತನ್ನ ದಪ್ಪನೆಯ ತಲೆಗೂದಲನ್ನು ಕಳೆದುಕೊಂಡಳು.
ನೋವಿನ ನಡುವೆಯೇ ಮದುವೆ
ಪ್ರತಿ ತಿಂಗಳೂ ಆಕೆ ಹತ್ತು ದಿನವನ್ನು ಆಸ್ಪತ್ರೆಯಲ್ಲಿಯೇ ಕಳೆಯಬೇಕಾಗಿತ್ತು. ಈ ನಡುವೆಯೇ ಇಬ್ಬರೂ ಮದುವೆ ಮಾಡಿಕೊಳ್ಳಲು ನಿರ್ಧರಿಸಿದರು.
ನೀಲಾಂಬುರ್ ನಡಿವಿಳಕ್ಕಳಂ ದೇವಸ್ಥಾನದಲ್ಲಿ ಸೆ.6ರಂದು ಇಬ್ಬರೂ ಸಪ್ತಪದಿ ತುಳಿದರು. 'ನನ್ನ ಕುಟುಂಬ ಅನುಮತಿ ಪಡೆದು ಇಬ್ಬರೂ ಮದುವೆಯಾದೆವು. ನಾನು ಸದಾ ಆಕೆಯೊಂದಿಗೆ ಇದ್ದರೆ ಅವಳು ಖುಷಿಯಾಗಿ ಇರುತ್ತಾಳೆ ಎಂದು ನನಗೆ ಅನಿಸಿತ್ತು' ಎನ್ನುತ್ತಾನೆ ಸಚಿನ್.
|
ಕೂಲಿ ಕಾರ್ಮಿಕನಾದ
ಸ್ನಾತಕೋತ್ತರ ಪದವಿ ಪಡೆಯುವುದು ಸಚಿನ್ ಗುರಿಯಾಗಿತ್ತು. ಆದರೆ, ಅದನ್ನು ಬದಿಗಿರಿಸಿದ ಆತ, ಮಡದಿಯ ಚಿಕಿತ್ಸಾ ವೆಚ್ಚವನ್ನು ಭರಿಸಲು ದಿನಗೂಲಿ ಕಟ್ಟಡ ಕಾರ್ಮಿಕನಾಗಿ ಕೆಲಸಕ್ಕೆ ಸೇರಿಕೊಂಡ.
'ನನಗೆ ಆಕೆಯ ಚಿಕಿತ್ಸೆಗೆ ತಗುಲುವ ಬೃಹತ್ ವೆಚ್ಚವನ್ನು ಭರಿಸುವ ಶಕ್ತಿಯಿಲ್ಲ. ಆಕೆಯ ಕುಟುಂಬವೂ ಆರ್ಥಿಕವಾಗಿ ತೀವ್ರ ಹಿಂದುಳಿದಿದೆ. ಕೆಲವು ದಾನಿಗಳು, ಸಂಘ ಸಂಸ್ಥೆಗಳು ಮತ್ತು ಸ್ನೇಹಿತರು ನೀಡಿದ ನೆರವಿನಿಂದ ನಮಗೆ ಚಿಕಿತ್ಸೆ ಮುಂದುವರಿಸಲು ಸಾಧ್ಯವಾಯಿತು. ಭವಿಷ್ಯದಲ್ಲಿ ಹೇಗೋ ಏನೋ ಎಂಬುದರ ಬಗ್ಗೆ ಏನೂ ಅರಿವಿಲ್ಲ. ಆದರೆ, ನಾವು ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ನನಗೆ ಆಕೆ ವಾಪಸ್ ಬೇಕು' ಎಂದು ಭಾವುಕನಾಗುತ್ತಾನೆ ಸಚಿನ್.
ನಮ್ಮ ಸ್ನೇಹಿತರಿಂದ ಸಿಗುತ್ತಿರುವ ಆರ್ಥಿಕ ಮತ್ತು ಭಾವನಾತ್ಮಕ ನೆರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಪರೀಕ್ಷೆಯ ದಿನಗಳನ್ನು ನಾವು ಹಿಮ್ಮೆಟ್ಟಿಸಲಿದ್ದೇವೆ ಮತ್ತು ಶಾಂತಿಯುತ ಬದುಕನ್ನು ಕಾಣಲಿದ್ದೇವೆ ಎಂಬ ನಂಬಿಕೆ ಇದೆ ಎನ್ನುತ್ತಾನೆ.
ಭವ್ಯಾ, ಸೋಮವಾರ ಶಸ್ತ್ರಚಿಕಿತ್ಸೆಯೊಂದಕ್ಕೆ ಒಳಗಾಗುತ್ತಿದ್ದಾಳೆ. ಬಳಿಕ ಆಕೆ ಚೇತರಿಸಿಕೊಳ್ಳಲಿದ್ದಾಳೆ ಎಂಬುದು ಸಚಿನ್ ವಿಶ್ವಾಸ.