ಯಶೋಗಾಥೆ: ಜಪಾನ್ನಿನಲ್ಲಿ ಮಿನುಗುತ್ತಿರುವ ನಮ್ಮ ಕೃಷಿತಜ್ಞ ಡಾ. ಶ್ರೀಹರಿ
ಬೆಂಗಳೂರು, ಅಕ್ಟೋಬರ್ 12: ಭಾರತದ ಕೃಷಿ ಸೂಕ್ಷ್ಮಜೀವಶಾಸ್ತ್ರಜ್ಞ ಮತ್ತು ಇಕೊಸೈಕಲ್ ಕಾರ್ಪೊರೇಷನ್ನ ಅಧ್ಯಕ್ಷ ಡಾ.ಶ್ರೀಹರಿ ಚಂದ್ರಘಾಟ್ಗಿಯವರಿಗೆ ಜಪಾನ್ನ ಟೋಕಿಯೊ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಸ್ (ಟಿಸಿಸಿಐ),"ಔಟ್ಸ್ಟ್ಯಾಂಡಿಂಗ್ ಅವಾರ್ಡ್ ಫಾರ್ ಕರೇಜಿಯಸ್ ಎಕ್ಸಿಕ್ಯೂಟಿವ್" ಪ್ರಶಸ್ತಿ ನೀಡಿ ಗೌರವಿಸಿದೆ.
ಟೋಕಿಯೊದಲ್ಲಿ ಅಕ್ಟೋಬರ್ 11 (ಗುರುವಾರ) ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ ಡಾ|| ಶ್ರೀಹರಿಯವರಿಗೆ ರಜತ ಫಲಕ, ಟ್ರೋಫಿ ಮತ್ತು ಐದು ಲಕ್ಷ ಜಪಾನಿಯೆನ್ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಶಿರಸಿಯ ಪರಿಸರ ತಜ್ಞ ಡಾ.ಶ್ರೀಹರಿಗೆ ಜಪಾನ್ ಸರ್ಕಾರದ ಪ್ರಶಸ್ತಿ
ಕರೇಜಿಯಸ್ ಎಕ್ಸಿಕ್ಯೂಟಿವ್ ಪ್ರಶಸ್ತಿಯು ಜಪಾನ್ ಕಾರ್ಪೊರೇಟ್ ವಲಯದಲ್ಲಿ ಅತ್ಯುನ್ನತ ಗೌರವವಾಗಿದೆ. ವ್ಯವಹಾರ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ರಿಸ್ಕ್ ತೆಗೆದುಕೊಳ್ಳುವ, ಗರಿಷ್ಠ ವ್ಯಾಪಾರ ತಡೆಗಳನ್ನು ಮೀರಿ ಸಾಧನೆ ಮಾಡುವ, ವಿಶಿಷ್ಟ ವ್ಯವಸ್ಥಾಪನಾ ಕೌಶಲಗಳ ಮೂಲಕ ಮಾರುಕಟ್ಟೆಯ ಸಾಮಾನ್ಯ ಜ್ಞಾನಕ್ಕೆ ಸವಾಲೊಡ್ಡುವ ಅಪೂರ್ವ ಕಾರ್ಪೊರೇಟ್ ಮುಖಂಡರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಅಂತರ್ಜಲ ಉಳಿಸಿ! ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಿದ್ದಾಪುರದ ವಿಜ್ಞಾನಿ
ಕೇವಲ ವ್ಯವಹಾರದ ಪ್ರಗತಿಗೆ ಮಾತ್ರವಲ್ಲದೇ, ಸಮಾಜಕ್ಕೆ ಒಟ್ಟಾರೆ ಕೊಡುಗೆ ನೀಡುವ ನಿಟ್ಟಿನಲ್ಲಿ ವ್ಯವಸ್ಥಾಪನಾ ಕೌಶಲ ಮತ್ತು ವ್ಯವಹಾರ ನಿರ್ಧಾರಗಳನ್ನು ಕೈಗೊಳ್ಳುವ ಗಣ್ಯರಿಗೆ ಈ ಪ್ರಶಸ್ತಿ ಸಲ್ಲುತ್ತದೆ. ಈ ಬಾರಿಯ ಪ್ರಶಸ್ತಿಗೆ 148 ಕಂಪನಿಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಪರಿಗಣಿಸಲಾಗಿತ್ತು.
ಔಟ್ಸ್ಟ್ಯಾಂಡಿಂಗ್ ಅವಾರ್ಡ್ ಫಾರ್ ಕರೇಜಿಯಸ್ ಎಕ್ಸಿಕ್ಯೂಟಿವ್
ಉದ್ಯಮಿಗಳು, ಮಾಧ್ಯಮ ಸಂಸ್ಥೆ ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡ 12 ಮಂದಿ ತೀರ್ಪುಗಾರರ ತಂಡ ಈ ಪ್ರಶಸ್ತಿಗೆ ಡಾ|| ಶ್ರೀಹರಿಯವರನ್ನು ಆಯ್ಕೆ ಮಾಡಿದೆ.
ಫ್ಯೂಜಿ ಸಾಂಕೀ ಮಾಧ್ಯಮ ಸಮೂಹದ ಅಧ್ಯಕ್ಷ ಉಸೇಕಾ, ಅಂತರರಾಷ್ಟ್ರೀಯ ವಿವಿಯ ಕುಲಪತಿ ಡಾ.ಇಟಮಿ, ಹೋಂಡಾ ಮೋಟರ್ಸ್ ನಿರ್ದೇಶಕ ಇಟೊವು, ಮಿತ್ಸುಬಿಶಿ ಎಲೆಕ್ಟ್ರಿಕ್ನ ವಿಶೇಷ ಕಾನ್ಸುಲರ್ ಶಿಮೊಮುರಾ ಮತ್ತಿತರರು ತೀರ್ಪುಗಾರರ ತಂಡದಲ್ಲಿದ್ದರು. ಆರು ತಿಂಗಳ ಕಾಲ ನಾಲ್ಕು ಹಂತಗಳಲ್ಲಿ ಅಭ್ಯರ್ಥಿಗಳನ್ನು ಗುರುತಿಸಿ, ಅಂತಿಮವಾಗಿ ವಿಜೇತರನ್ನು ಆಯ್ಕೆ ಮಾಡಿದೆ.
ಟೋಕಿಯೊ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಸ್ (ಟಿಸಿಸಿಐ) ನೀಡುವ "ಔಟ್ಸ್ಟ್ಯಾಂಡಿಂಗ್ ಅವಾರ್ಡ್ ಫಾರ್ ಕರೇಜಿಯಸ್ ಎಕ್ಸಿಕ್ಯೂಟಿವ್" ಪ್ರಶಸ್ತಿಯು ರಜತ ಫಲಕ, ಟ್ರೋಫಿ ಮತ್ತು ಐದು ಲಕ್ಷ ಜಪಾನಿಯೆನ್ ನಗದು ಬಹುಮಾನವನ್ನು ಹೊಂದಿದೆ.
ಹೋಂಡಾ ಮೋಟರ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಇಟೊ
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಟಿಸಿಸಿಐ ಉಪಾಧ್ಯಕ್ಷ ಮತ್ತು ಹೋಂಡಾ ಮೋಟರ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಇಟೊ, "ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಜಪಾನಿ ಆರ್ಥಿಕತೆಯ ಚಾಲನಾಶಕ್ತಿಯಾಗಿದ್ದು, ಬೃಹತ್ ಕೈಗಾರಿಕೆಗಳಿಗೆ ಕೂಡಾ ಇವು ಬೆನ್ನೆಲುಬಾಗಿವೆ. ಆದಾಗ್ಯೂ ಅವು ಮಾರುಕಟ್ಟೆ ಸವಾಲುಗಳನ್ನು ನಿಭಾಯಿಸುವಲ್ಲಿ ವಿಶಿಷ್ಟ ಸಮಸ್ಯೆಗಳನ್ನು ಎದುರಿಸುತ್ತಿವೆ. ಇಂಥ ಸವಾಲುಗಳನ್ನು ಎದುರಿಸಿ ಕಂಪನಿಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಅತ್ಯದ್ಭುತ ವ್ಯವಸ್ಥಾಪನಾ ನಿರ್ಧಾರಗಳನ್ನು ಕೈಗೊಂಡ ಉದ್ಯಮ ಗಣ್ಯರನ್ನು ಗುರುತತಿಸಿ ಗೌರವಿಸುವ ಅದ್ಭುತ ಅವಕಾಶ ಟಿಸಿಸಿಐಗೆ ಲಭಿಸಿದೆ.
ಒಬ್ಬರು ಭಾರತೀಯರನ್ನು ಈ ವಿಶೇಷ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಅತ್ಯಂತ ವಿಶಿಷ್ಟ ಅಂಶ. ಜಪಾನ್ನ ಜನಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ 30 ವರ್ಷಗಳಲ್ಲಿ ದೇಶದ ಪ್ರಗತಿಯನ್ನು ಮುಂದುವರಿಸಲು ಕೌಶಲಯುಕ್ತ ಕಾರ್ಮಿಕರು ಮತ್ತು ವ್ಯವಸ್ಥಾಪನಾ ಶ್ರಮ ಸಂಪನ್ಮೂಲಕ್ಕಾಗಿ ಭಾರತವನ್ನು ಎದುರು ನೋಡಬೇಕಾಗಿದೆ" ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಡಾ. ಶ್ರೀಹರಿ
ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಡಾ|| ಶ್ರೀಹರಿ, "ಈ ಪ್ರಶಸ್ತಿ ಪಡೆಯುತ್ತಿರುವುದು ಅತಿದೊಡ್ಡ ಗೌರವ. ಇದು ಸಾಧ್ಯವಾಗುವಂತೆ ಮಾಡಿದ್ದಕ್ಕಾಗಿ ಇಕೊಸೈಕಲ್ ಕಾರ್ಪೊರೇಷನ್ನ ಎಲ್ಲ ಉದ್ಯೋಗಿಗಳಿಗೆ ನಾನು ಕೃತಜ್ಞ. ಪರಿಸರ ಕ್ಷೇತ್ರದ ಪ್ರಸ್ತುತ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಾವು ವಿನೂತನ ಪರಿಹಾರಗಳನ್ನು ಜಾರಿಗೊಳಿಸಿದ್ದೇವೆ. ಇಂಥ ಪ್ರಶಸ್ತಿಗಳು ಇನ್ನಷ್ಟು ರಭಸದಿಂದ ಇಂಥ ಕೆಲಸವನ್ನು ಮುಂದುವರಿಸಲು ಸಹಕಾರಿಯಾಗುತ್ತವೆ. ಉದಯೋನ್ಮುಖ ಆರ್ಥಿಕತೆಗಳಿಗೆ ಇದನ್ನು ಒಯ್ದು, ಮನುಷ್ಯ ನಿರ್ಮಿತ ಪರಿಸರ ಸಂಘರ್ಷವನ್ನು ಪರಿಣಾಮಕಾರಿ ತಂತ್ರಜ್ಞಾನದ ಮೂಲಕ ನಿಭಾಯಿಸಲು ಅನುಕೂಲ ಮಾಡಿಕೊಡಲು ಸಾಧ್ಯವಾಗುತ್ತದೆ" ಎಂದು ಹೇಳಿದರು.
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದವರಾದ ಡಾ. ಶ್ರೀಹರಿ
ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದವರಾದ ಡಾ. ಶ್ರೀಹರಿ ಚಂದ್ರಘಾಟಗಿ ಸುಮಾರು ಎರಡು ದಶಕಗಳಿಂದ ಟೊಕಿಯೊದಲ್ಲಿ ನೆಲೆಸಿದ್ದಾರೆ. ಪರಿಸರ ಬಯೊಟೆಕ್ನಾಲಜಿ ಕ್ಷೇತ್ರದಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಾರೆ.
ಡಾ.ಶ್ರೀಹರಿ ತಂದೆ ವಾಯುಪಡೆ ಅಧಿಕಾರಿ. 1961 ರಲ್ಲಿ ಗೋವಾ ವಿಮೋಚನೆ ಮತ್ತು 1971 ರಲ್ಲಿ ಬಾಂಗ್ಲಾ ವಿಮೋಚನೆಯಲ್ಲಿ ಭಾಗಿಯಾಗಿದ್ದರು. ತಾಯಿ ಶಿಕ್ಷಕಿ.
ಸಿದ್ದಾಪುರದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಶ್ರೀಹರಿ, 1992 ರಲ್ಲಿ ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದರು. ದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಆಗ್ರಿಕಲ್ಚರಲ್ ರಿಸರ್ಚನಿಂದ ಜೂನಿಯರ್ ರಿಸರ್ಚ್ ಸ್ಕಾಲರ್ ಶಿಪ್ ಪಡೆದು ಅದೇ ಕಾಲೇಜಿನಲ್ಲಿ 1994 ರಲ್ಲಿ ಸ್ನಾತಕೋತ್ತರ ಹಾಗೂ 1997 ರಲ್ಲಿ ಕೃಷಿ ಮೆಕ್ರೊಬಾಯಾಲಜಿಯಲ್ಲಿ ಪಿಎಚ್ಡಿ ಹಾಗೂ ಸ್ವರ್ಣ ಪದಕ ಪಡೆದರು.
1998ರಲ್ಲಿ ಮಾನ್ಬುಶೊ ಫೆಲೋಶಿಪ್ ಶಿಕ್ಷಣ ಸಚಿವಾಲಯ, ಜಪಾನ್ ಪಡೆದು ಶಿಬಾ ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕರಾಗಿ ಸೇರಿದರು. 2000 ರಲ್ಲಿ ಎಕೊಸೈಕಲ್ ಕಾರ್ಪೊರೇಷನ್ ವಿಜ್ಞಾನಿಯಾಗಿ ವೃತ್ತಿಪರ ಜಿವನ ಆರಂಭಿಸಿದರು. 2005 ರಲ್ಲಿ ಎಕೊಸೈಕಲ್ನ ಅಧ್ಯಕ್ಷ ಮತ್ತು ಸಿಇಓ ಆದರು.
ಸಾರ್ವಜನಿಕ ಬಳಕೆಗಾಗಿ ಉಚಿತ ತಂತ್ರಜ್ಞಾನ
ಒಂದು ಡಜನ್ ಗಿಂತ ಹೆಚ್ಚು ಪೇಟೆಂಟ್ ಹೊಂದಿದ್ದಾರೆ. ಕೃಷಿ ಮೈಕ್ರೊಬಯೋಲಾಜಿಸ್ಟ್ ಆಗಿರುವ ಡಾ. ಶ್ರೀಹರಿ, ಪರಿಸರ ಸಂರಕ್ಷಣೆಗಾಗಿ ಸ್ವಾಭಾವಿಕ ಮೈಕ್ರೊಆರ್ರ್ಗಾನಿಸಂ ಕಂಡುಹಿಡಿದು ಅಭಿವೃದ್ಧಿಪಡಿಸಿದ್ದಾರೆ. ಪೇಟೆಂಟ್ ಹೊಂದಿರುವ ತಂತ್ರಜ್ಞಾನವನ್ನು ಜಪಾನ್, ತೈವಾನ್, ಥೈಲೆಂಡ್, ಭಾರತ, ಚೀನಾ ಹಾಗೂ ಅಮೆರಿಕದಲ್ಲಿ ಅಳವಡಿಸಲಾಗಿದೆ. ಇವು ದುಬಾರಿಯಲ್ಲದ ಪರ್ಯಾಯ ಪರಿಹಾರವಾಗಿದೆ.
ತಾವು ಪೇಟೆಂಟ್ ಪಡೆದ ಅಂತರ್ಜಲ ಸ್ವಚ್ಛಗೊಳಿಸುವ ತಂತ್ರಜ್ಞಾನವನ್ನು ಭಾರತದಲ್ಲಿ ಸಾರ್ವಜನಿಕ ಬಳಕೆಗಾಗಿ ಉಚಿತವಾಗಿ ನೀಡುವುದಾಗಿಯೂ ಶ್ರೀಹರಿ ಘೋಷಿಸಿದರು. ನಿಯಂತ್ರಣ ಅಧಿಕಾರಿಗಳಿಗೆ ತರಬೇತಿ ನೀಡುವಲ್ಲಿ ಹಾಗೂ ಜಪಾನ್ನಿಂದ ಪರಿಸರ ಕ್ಷೇತ್ರಕ್ಕೆ ವಿದೇಶಿ ನೇರ ಬಂಡವಾಳ ತರುವ ನಿಟ್ಟಿನಲ್ಲೂ ನೆರವು ನೀಡುವುದಾಗಿ ಪ್ರಕಟಿಸಿದರು. 2013ರಲ್ಲಿ ಶ್ರೀಹರಿಯವರು ಗೋವಾಗೆ ಜಪಾನ್ ಸರ್ಕಾರದ ನೆರವು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ ತಮ್ಮ ತಂತ್ರಜ್ಞಾನದ ಪ್ರಾಯೋಗಿಕ ಪ್ರಾತ್ಯಕ್ಷಿಕೆ ನೀಡಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ತರಬೇತಿಯನ್ನೂ ನೀಡಿದ್ದರು ಎನ್ನುವುದನ್ನು ನೆನಪಿಸಿಕೊಳ್ಳಬಹುದು.
ಅಂತರ್ಜಲ ಬಳಕೆ ಉಳಿಕೆ ಮೋದಿ ಸರ್ಕಾರಕ್ಕೆ ಸಲಹೆ
ಪ್ರವಾಸಿ ಭಾರತ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಾ. ಶ್ರೀಹರಿ ಅವರು ಮೋದಿ ಸರ್ಕಾರ ಮುಂದೆ ಅಂತರ್ಜಲ ಉಳಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ, ಉಚಿತವಾಗಿ ಇದೆಲ್ಲವೂ ಭಾರತದಲ್ಲಿ ಅಳವಡಿಸಲು ಸಿದ್ಧ ಎಂದಿದ್ದರು.
ಡಾ. ಶ್ರೀಹರಿಯವರು ತೈವಾನ್, ಚೀನಾ, ಥಾಯ್ಲೆಂಡ್ ಸೇರಿದಂತೆ ಹಲವು ದೇಶಗಳಿಗೆ ಅಂತರ್ಜಲ ನೀತಿಯನ್ನು ರೂಪಿಸಲು ಅಗತ್ಯ ಸಲಹೆ ನೀಡುತ್ತಿದ್ದಾರೆ. ಇವರಿಗೆ 2017ರಲ್ಲಿ ಜಪಾನ್ನ ಪರಿಸರ ಸಚಿವಾಲಯದ ಪ್ರಶಸ್ತಿ ಸಂದಿದ್ದು, ಈ ಹೆಗ್ಗಳಿಕೆಗೆ ಪಾತ್ರರಾದ ಮೊಟ್ಟಮೊದಲ ವಿದೇಶಿ ಪ್ರಜೆ ಎನಿಸಿಕೊಂಡಿದ್ದರು. ಇದು ಜಪಾನ್ನಲ್ಲಿ ಪರಿಸರ ವಲಯದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಕಳೆದ 20 ವರ್ಷಗಳಲ್ಲಿ ವಿಶ್ವದಲ್ಲಿ ಅತಿಹೆಚ್ಚು ಮಲಿನಗೊಂಡ 500ಕ್ಕೂ ಹೆಚ್ಚು ಜಲಮೂಲಗಳನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿ, ಅಳವಡಿಸಿದ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗಿತ್ತು. ತಮ್ಮ ಯಶಸ್ಸಿಗೆ ತಾಯಿ ಮಾಲಾಚಂದ್ರಘಾಟ್ಗಿ ಅವರೇ ಪ್ರೇರಣೆ. ಕಠಿಣ ಪರಿಶ್ರಮಕ್ಕೆ ಮತ್ತು ಸಾರ್ವಜನಿಕರಿಗೆ ಸೇವೆ ಒದಗಿಸುವಂತೆ ಸದಾ ಅವರು ಸಲಹೆ ನೀಡುತ್ತಿದ್ದರು ಎಂದು ಅವರು ಹೇಳುತ್ತಾರೆ.